T20 World Cup 2026: ಟಿ20 ವಿಶ್ವಕಪ್ನ 52ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸ್ಮರಣೀಯ ಇನಿಂಗ್ಸ್ ಆಡಿದ್ದಾರೆ. ಈ ಇನಿಂಗ್ಸ್ನೊಂದಿಗೆ ಸ್ಯಾಮ್ಸನ್ ಭಾರತ ತಂಡಕ್ಕೆ ಭರ್ಜರಿ ಗೆಲುವನ್ನೂ ಸಹ ತಂದು ಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ.
ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಬಾರಿಯ ವಿಶ್ವಕಪ್ನ ಆರಂಭಿಕ ಪಂದ್ಯಗಳಲ್ಲಿ ಸ್ಯಾಮ್ಸನ್ಗೆ ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ ನಮೀಬಿಯ ವಿರುದ್ಧದ ಪಂದ್ಯದಿಂದ ಅಭಿಷೇಕ್ ಶರ್ಮಾ ಹೊರಗುಳಿದಿದ್ದ ಕಾರಣ ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಲಾಗಿತ್ತು.
ಆದರೆ ಪಾಕಿಸ್ತಾನ್ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ವೇಳೆ ಅವರನ್ನು ಕೈ ಬಿಡಲಾಯಿತು. ಈ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತುವ ಮೂಲಕ ಅಭಿಷೇಕ್ ಶರ್ಮಾ ನಿರಾಸೆ ಮೂಡಿಸಿದ್ದರು. ಹೀಗಾಗಿಯೇ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಸಂಜು ಸ್ಯಾಮ್ಸನ್ಗೆ ಈ ಬಾರಿಯಾದರೂ ಅವಕಾಶ ನೀಡುತ್ತೀರಾ ಎಂದು ಸೂರ್ಯಕುಮಾರ್ ಯಾದವ್ ಅವರನ್ನು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಯನ್ನು ಲೇವಡಿ ಮಾಡಿದಂತೆ ಅಂದು ಸೂರ್ಯಕುಮಾರ್ ಯಾದವ್ ಉತ್ತರ ನೀಡಿದ್ದರು.
ವರದಿಗಾರರು ಸಂಜು ಸ್ಯಾಮ್ಸನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಬಗ್ಗೆ ಪ್ರಸ್ತಾಪಿಸಿದಾಗ, ಸೂರ್ಯಕುಮಾರ್ ತಮ್ಮದೇ ಶೈಲಿಯಲ್ಲಿ ನಗುತ್ತಾ ಮರುಪ್ರಶ್ನೆ ಹಾಕಿದ್ದರು. “ಹಾಗಾದರೆ ನಾನು ಸಂಜು ಅವರನ್ನು ಅಭಿಷೇಕ್ ಬದಲಿಗೆ ಆಡಿಸಬೇಕು ಎಂದು ನೀವು ಹೇಳುತ್ತಿದ್ದೀರಾ?” ಎಂದು ಕೇಳಿದರು.
ವರದಿಗಾರರು ಹೌದು ಎಂದಾಗ, ಸೂರ್ಯ ನಗುತ್ತಾ, “ಅಂದರೆ 3ನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವರನ್ನು ತೆಗೆದು ಸಂಜು ಅವರನ್ನು ಆಡಿಸಬೇಕೇ?” ಎಂದು ಮರುಪ್ರಶ್ನಿಸಿ ಲೇವಡಿ ಮಾಡಿದ್ದರು. ಇದೀಗ ಅದೇ ಸೂರ್ಯಕುಮಾರ್ ಯಾದವ್ ಸಂಜು ಸ್ಯಾಮ್ಸನ್ ಮುಂದೆ ತಲೆಬಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ವಿಫಲರಾದರೂ ಒಂದೆಡೆ ನಿಂತು ಜವಾಬ್ದಾರಿಯುತ ಇನಿಂಗ್ಸ್ ಆಡುವ ಮೂಲಕ ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ನ ಸೆಮಿಫೈನಲ್ಗೇರಿದೆ.
ಇತ್ತ ಟೀಮ್ ಇಂಡಿಯಾ ಗೆದ್ದ ಬೆನ್ನಲ್ಲೇ ಮೈದಾನಕ್ಕೆ ಆಗಮಿಸಿದ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ಗೆ ತಲೆಬಾಗುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕೆಲ ದಿನಗಳ ಹಿಂದೆ ಸೂರ್ಯಕುಮಾರ್ ಯಾದವ್ ಆಡಿದ್ದ ಮಾತುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದರೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ಯಾಕೆ ಆಡಿಸಬಾರದು ಎಂಬ ಪತ್ರಕರ್ತನ ಪ್ರಶ್ನೆಗೆ ಲೇವಡಿಯೊಂದಿಗೆ ಮರು ಪ್ರಶ್ನಿಸಿದ್ದ ಅದೇ ಸೂರ್ಯಕುಮಾರ್ ಯಾದವ್ ಇದೀಗ ತಲೆಬಾಗಿ ನಿಂತಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.