Headlines

ಅಧಿಕಾರ ಹಂಚಿಕೆ ತಿಕ್ಕಾಟದ ನಡುವೆ ಕೈ ಶಾಸಕರ ವಿದೇಶ ಪ್ರವಾಸ: ಸಿದ್ದರಾಮಯ್ಯ ಆಪ್ತರೇ ಹೆಚ್ಚು, ಡಿಕೆ ಬಣದಲ್ಲಿ ಕಿಚ್ಚು! – Kannada News | Power sharing Rift in Congress: Siddaramaiah Camp MLAs’ Foreign Trip Triggers DK Shivakumar Faction Discontent

ವಿದೇಶಕ್ಕೆ ತೆರಳಿದ ಕಾಂಗ್ರೆಸ್ ಶಾಸಕರುImage Credit source: tv9

ಬೆಂಗಳೂರು, ಫೆಬ್ರವರಿ 18: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಬದಲಾವಣೆ ಎಂಬ ಚರ್ಚೆಯೇ ಗೊಂದಲದ ಗೂಡಾಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ (Siddaramaiah) ಆಪ್ತ ಬಣದ ಬಹುಪಾಲು ಶಾಸಕರು (Congress MLAs) ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ. ಮೊದಲು ಸರ್ಕಾರಿ ಪ್ರಾಯೋಜಿತ ಎಂಬ ಅರ್ಥದಲ್ಲಿ ಹೊರಬಿದ್ದಿದ್ದ ಈ ಟೂರ್ ವಿಚಾರ, ಈಗ ಖಾಸಗಿ ಟ್ರಿಪ್ ಎಂಬುದು ಗೊತ್ತಾಗಿದೆ. ಮಂಗಳವಾರ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್​ಸಿಗಳು ವಿದೇಶಕ್ಕೆ ಹಾರಿದ್ದಾರೆ.

ವಿದೇಶಕ್ಕೆ ತೆರಳಿದ ಕಾಂಗ್ರೆಸ್ ಶಾಸಕರು ಯಾರೆಲ್ಲ?

  • ದೇವೇಂದ್ರಪ್ಪ, ಜಗಳೂರು ಶಾಸಕ
  • ಹೆಚ್.ಡಿ ತಮ್ಮಯ್ಯ, ಚಿಕ್ಕಮಗಳೂರು ಶಾಸಕ
  • ಹಂಪನಗೌಡ ಬಾದರ್ಲಿ, ಸಿಂಧನೂರು ಶಾಸಕ
  • ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ
  • ಬಿ.ಎಂ ನಾಗರಾಜ್, ಸಿರಗುಪ್ಪ ಶಾಸಕ
  • ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ
  • ಎಸ್.ಎಸ್. ಮಲ್ಲಿಕಾರ್ಜುನ್, ಸಚಿವ
  • ಶರಣಗೌಡ ಬಯ್ಯಾಪುರ, ಎಂಎಲ್​ಸಿ
  • ವಸಂತ್ ಕುಮಾರ್, ಎಂಎಲ್​ಸಿ
  • ನಾಗರಾಜ್ ಯಾದವ್, ಎಂಎಲ್​ಸಿ
  • ಡಾ. ಡಿ. ತಿಮಯ್ಯ, ಎಂಎಲ್​ಸಿ

ಮಲೇಷಿಯನ್ ಏರ್‌ಲೈನ್ಸ್‌ನ MH 193 ವಿಮಾನದಲ್ಲಿ ಶಾಸಕರು ತೆರಳಿದ್ದಾರೆ. ಆಸ್ಟ್ರೇಲಿಯಾಗೆ ನೇರ ವಿಮಾನ ಇಲ್ಲದ ಕಾರಣ ಟ್ರಾನ್ಸಿಟ್ ಫ್ಲೈಟ್‌ ಮೂಲಕ ತೆರಳಲು ಪ್ಲ್ಯಾನ್ ಮಾಡಿದ್ದಾರೆ. ಬೆಂಗಳೂರಿನಿಂದ ಮಲೇಷ್ಯಾ ರಾಜಧಾನಿ ಕೌಲಾಲಂಪುರಕ್ಕೆ ತೆರಳುವ ಶಾಸಕರು, ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುತ್ತಾರೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಹೋಗುವ ಶಾಸಕರು ಮಾರ್ಚ್ 1ರವರೆಗೆ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ. ವಿಚಾರ ಎಂದರೆ, ಆರಂಭದಲ್ಲಿ 35 ಶಾಸಕರು ಸಿದ್ಧರಾಗಿದ್ದರು. ಬಳಿಕ ಶಾಸಕರ ಸಂಖ್ಯೆ 21ಕ್ಕೆ ಇಳಿದಿತ್ತು. ಆದರೆ ರಾತ್ರಿಯಾಗ್ತಿದ್ದಂತೆಯೇ 11 ಶಾಸಕರು ಮಾತ್ರ ವಿದೇಶಕ್ಕೆ ಹಾರಿದ್ದಾರೆ.

ಮತ್ತೊಂದೆಡೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಪತ್ನಿ ಹಾಗೂ ಸಂಬಂಧಿಕರ ಜೊತೆಗೆ ಕೊಲಂಬಿಯಾಗೆ ತೆರಳಿದ್ದಾರೆ. ಮಂಗಳವಾರ ಬೆಳಗ್ಗೆ 7 ಸ್ನೇಹಿತರು, ಸಂಬಂಧಿಕರು, ಪತ್ನಿ ಜತೆ ಎಸ್ಎಸ್ ಮಲ್ಲಿಕಾರ್ಜುನ ಕೆಂಪೇಗೌಡ ಏರ್​ಪೋರ್ಟ್​ನಿಂದ ಥೈಲ್ಯಾಂಡ್​​ನ ಪುಕೆಟ್​ ನಗರಕ್ಕೆ ತೆರದ್ದು, ಅಲ್ಲಿಂದ ದಕ್ಷಿಣ ಅಮೆರಿಕಾದ ಕೊಲಂಬಿಯಾಗೆ ಪ್ರಯಾಣ ಬೆಳೆಸಿದ್ದಾರೆ.

ಶಾಸಕರು ವಿದೇಶಕ್ಕೆ ತೆರಳುವ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಮಾಹಿತಿ ನೀಡಿದ್ದಾರೆ. ಅವರು ಏನೇ ಮಾಹಿತಿ ನೀಡಿದರೂ, ಖಾಸಗಿ ಟೂರ್ ಈಗ ಪೊಲಿಟಿಕಲ್ ಟೂರ್ ಎನ್ನುವ ರೀತಿಯ ಬಿಂಬಿತವಾಗಿದೆ. ಯಾಕೆಂದರೆ, ಶಾಸಕರೆಲ್ಲ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲೇ ಪ್ರವಾಸ ಹೊರಟಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್, ನಾನು ವಿದೇಶಕ್ಕೆ ಹೋಗುತ್ತಿಲ್ಲ ಎಂದಿದ್ದಾರೆ. ಶಾಸಕರನ್ನು ವಿದೇಶಕ್ಕೆ ಕಳುಹಿಸಲು ನಾನೇನು ಸಿಎಂ ಆಗಬೇಕಾ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ, ಸಿಎಂ ಕುರ್ಚಿ ಉಳಿಸಿಕೊಳ್ಳುವವರು ಫಾರಿನ್‌ಗೆ ಕಳುಹಿಸುತ್ತಿದ್ದಾರಾ ಎಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಎಂದು ನುಣುಚಿಕೊಂಡಿದ್ದಾರೆ.

ಶಾಸಕರ ವಿದೇಶ ಪ್ರವಾಸದ ಬಗ್ಗೆ ಯಾರ್ಯಾರು ಏನಂದರು?

ಶಾಸಕರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾರು ಸ್ಪಾನ್ಸರ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಸಚಿವ ದಿನೇಶ್ ಗುಂಡೂರಾವ್, ಸ್ಪಾನ್ಸರ್ ಎಂಬುದು ಊಹಾಪೋಹ ಎಂದಿದ್ದಾರೆ.

ಇನ್ನು ಶಾಸಕ ಶಿವಗಂಗಾ ಬಸವರಾಜ್, ಶಾಸಕರ ವಿದೇಶಿ ಪ್ರವಾಸಕ್ಕೆ ನನ್ನ ಆಕ್ಷೇಪ ಇಲ್ಲ ಎನ್ನುತ್ತಲೇ, ಬಜೆಟ್ ಸಮಯದಲ್ಲಿ ಹೋಗುವುದು ಸೂಕ್ತ ಅಲ್ಲ ಎಂದಿದ್ದಾರೆ. ಮತ್ತೊಂದೆಡೆ ಯತೀಂದ್ರ ಸಿದ್ದರಾಮಯ್ಯ, ಹೋಗುವವರಿಗೆ ಬೇಡ ಎನ್ನಲು ಆಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟದ ನಡುವೆ ರಾಜ್ಯ ಬಜೆಟ್​​ಗೆ ಅಧಿಕೃತ ಮುಹೂರ್ತ ಫಿಕ್ಸ್

ಶಾಸಕ ಇಕ್ಬಾಲ್ ಹುಸೇನ್, ರಾಮನಗರವೇ ನನ್ನ ಪಾಲಿನ ಫಾರಿನ್ ಎಂದಿದ್ದು, ಕೆಎನ್ ರಾಜಣ್ಣ ಲೋಕೋ ಭಿನ್ನ ರುಚಿಃ ಅಂತಾ ವಿಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ನಾಯಕತ್ವ ಎಂಬ ಬೆಂಕಿಯಲ್ಲಿ ಧಗಧಗಿಸುತ್ತಿರುವ ಕಾಂಗ್ರೆಸ್​ನಲ್ಲಿ ಈಗ ಶಾಸಕರ ಫಾರಿನ್ ಟ್ರಿಪ್ ಬೇರೆಯದ್ದೇ ಗಾಳಿ ಬೀಸುವಂತೆ ಮಾಡಿದೆ. ಗೊಂದಲಕ್ಕೆ ತೆರೆ ಎಳೆಯಬೇಕಿದ್ದ ಹೈಕಮಾಂಡ್, ಸ್ಥಳೀಯ ಸಮಸ್ಯೆ ಎಂದು ಕೈತೊಳೆದುಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:00 am, Wed, 18 February 26

Source link

Leave a Reply

Your email address will not be published. Required fields are marked *