
ಕಾಮರೆಡ್ಡಿ, ಮಾರ್ಚ್ 22: ತೆಲಂಗಾಣದ ಕಾಮರೆಡ್ಡಿಯಲ್ಲಿ ದುರಂತವೊಂದು ಸಂಭವಿಸಿದೆ. ಇತ್ತೀಚೆಗಷ್ಟೇ ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಅವಳಿ ಸಹೋದರರಲ್ಲಿ ಓರ್ವ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ನಾಲ್ವರು ಹಸೆಮಣೆ ಏರಿದ್ದರು, ಸಂಭ್ರದ ನಡುವೆ ಈ ದುರ್ಘಟನೆ ನಡೆದಿದೆ. ಮದುವೆಯಾದ ಒಂದು ತಿಂಗಳೊಳಗೆ ಈ ದುರಂತ ಸಂಭವಿಸಿದ್ದು, ಎರಡೂ ಕುಟುಂಬಗಳು ತೀವ್ರ ದುಃಖದಲ್ಲಿ ಮುಳುಗಿವೆ.
ಕಾಮರೆಡ್ಡಿ ಜಿಲ್ಲೆಯ ಮಾಚರೆಡ್ಡಿ ಮಂಡಲದ ಘನಪುರ ಗ್ರಾಮದ ವಿನಯ್ ಕುಮಾರ್ (31) ಮತ್ತು ವಿಜಯ್ ಕುಮಾರ್ ಅವಳಿ ಸಹೋದರರು ಕೀರ್ತಿ ಮತ್ತು ಕೀರ್ತನಾ ಅವರನ್ನು ವಿವಾಹವಾಗಿದ್ದರು. ವಿನಯ್ ಹೈದರಾಬಾದ್ ನಗರದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ತಿಂಗಳು ಫೆಬ್ರವರಿ 22 ರಂದು ವಿವಾಹವಾಗಿದ್ದರು.
ಯುಗಾದಿ ಹಬ್ಬದ ದಿನದಂದು ಮನೆಯಿಂದ ಹೊರಗೆ ಹೋಗಿದ್ದ ವಿನಯ್ ಕುಮಾರ್ ಹಿಂತಿರುಗಲಿಲ್ಲ. ಅವರ ಕುಟುಂಬ ಸದಸ್ಯರು ವ್ಯಾಪಕವಾಗಿ ಹುಡುಕಾಡಿದರೂ ಅವರು ಪತ್ತೆಯಾಗಲಿಲ್ಲ. ಸಿರಿಸಿಲ್ಲಾ ಜಿಲ್ಲೆಯ ಗಂಭೀರೋಪೇಟೆ ಮಂಡಲದ ನರ್ಮಲಾದ ಮನೇರು ಹೊಳೆಯಲ್ಲಿ ಸ್ಥಳೀಯರು ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತನಿಖೆ ನಡೆಸಿದಾಗ, ಅದು ವಿನಯ್ ಕುಮಾರ್ ಅವರ ಶವ ಎಂದು ಗುರುತಿಸಲಾಗಿದೆ.
ಮತ್ತಷ್ಟು ಓದಿ: ಪ್ಲೀಸ್ ಸಾಯಬೇಡಮ್ಮ; ರೈಲು ಹಳಿ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ಕಾಪಾಡಿದ 7 ವರ್ಷದ ಮಗಳು
ಪೊಲೀಸರು ಆರಂಭದಲ್ಲಿ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಅವರು ಇಷ್ಟೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣಗಳು ಸ್ಪಷ್ಟವಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ಆರಂಭಿಸಿದ್ದಾರೆ.
ತಮ್ಮ ಸಂತೋಷದ ಜೀವನದಲ್ಲಿ ಸಂಭವಿಸಿದ ದುರಂತದಿಂದ ಗ್ರಾಮಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಈ ಘಟನೆಯ ಹಿಂದಿನ ಕಾರಣಗಳೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿನಯ್ ಅವರ ಮೊಬೈಲ್ ಫೋನ್ ಡೇಟಾವನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ