ಇರಾನ್ ಸುಪ್ರೀಂ ನಾಯಕ ಖಮೇನಿ ಬಳಸುತ್ತಿದ್ದ ವಿಮಾನವನ್ನು ಧ್ವಂಸ ಮಾಡಿದ ಇಸ್ರೇಲ್

ಇರಾನ್ ಸುಪ್ರೀಂ ನಾಯಕ ಖಮೇನಿ ಬಳಸುತ್ತಿದ್ದ ವಿಮಾನವನ್ನು ಧ್ವಂಸ ಮಾಡಿದ ಇಸ್ರೇಲ್

ಜೆರುಸಲೇಂ, ಮಾರ್ಚ್ 16: ಇಸ್ರೇಲ್ ತನ್ನ ವಾಯುಪಡೆಯು ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಇರಾನ್‌ನ (Iran) ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ವಿಮಾನವನ್ನು ರಾತ್ರೋರಾತ್ರಿ ಹೊಡೆದು ನಾಶಪಡಿಸಿರುವುದಾಗಿ ಘೋಷಿಸಿದೆ. ಈ ದಾಳಿಯು ಇರಾನ್‌ನ ಪ್ರಾದೇಶಿಕ ಸಮನ್ವಯಗಳಿಗೆ ದೊಡ್ಡ ಹೊಡೆತ ನೀಡಿದೆ ಎಂದು ಹೇಳಿದೆ.

ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣದ ಮೂಲಕ ಮಿತ್ರರಾಷ್ಟ್ರಗಳ ಜೊತೆ ಸಂಪರ್ಕ ಸಾಧಿಸಲು, ಮಿಲಿಟರಿ ಸಂಗ್ರಹಣೆಯನ್ನು ಸುಗಮಗೊಳಿಸಲು ಮತ್ತು ಸಂಬಂಧಗಳನ್ನು ನಿರ್ವಹಿಸಲು ಖಮೇನಿ ಮತ್ತು ಇರಾನಿನ ಇತರ ಹಿರಿಯ ಅಧಿಕಾರಿಗಳು ಈ ವಿಮಾನವನ್ನು ಬಳಸುತ್ತಿದ್ದರು ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಕೇವಲ ಅಮೆರಿಕ ಹಾಗೂ ಇಸ್ರೇಲ್​ಗೆ ಮಾತ್ರ ಮುಚ್ಚಿದೆ: ಇರಾನ್ ವಿದೇಶಾಂಗ ಸಚಿವ

“ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಇರಾನ್ ನಾಯಕನ ವಿಮಾನವನ್ನು ನಮ್ಮ ವಾಯುಪಡೆಯು ನಾಶಪಡಿಸಿತು. ಈ ವಿಮಾನವನ್ನು ಇರಾನ್ ಭಯೋತ್ಪಾದಕ ಆಡಳಿತದ ನಾಯಕ ಅಲಿ ಖಮೇನಿ, ಇತರೆ ಹಿರಿಯ ಅಧಿಕಾರಿಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಇತರೆ ದೇಶಗಳೊಂದಿಗೆ ಸಂಪರ್ಕ ಸಾಧಿಸಲು, ಮಿಲಿಟರಿ ಸಂಗ್ರಹಣೆಯನ್ನು ಹೆಚ್ಚಿಸಲು ಮತ್ತು ಸಂಬಂಧಗಳನ್ನು ನಿರ್ವಹಿಸಲು ಬಳಸುತ್ತಿದ್ದರು” ಎಂದು ಇಸ್ರೇಲ್​ನ IAF ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದಿ ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಈ ತಿಂಗಳ ಆರಂಭದಲ್ಲಿ ಮೆಹ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ದೇಶದ ವಾಯುಪಡೆ ಇರಾನ್​ನ 16 ವಿಮಾನಗಳನ್ನು ಹೊಡೆದುರುಳಿಸಿತು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಅಂಗವಾದ ಕುದ್ಸ್ ಫೋರ್ಸ್ ಈ ವಿಮಾನಗಳನ್ನು ಬಳಸುತ್ತಿತ್ತು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಮುಖ್ಯವಾಗಿ ಲೆಬನಾನ್‌ನ ಹೆಜ್ಬೊಲ್ಲಾಗೆ ಪ್ರಾಕ್ಸಿ ಗುಂಪುಗಳಿಗೆ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ಸಾಗಿಸಲು ಈ ವಿಮಾನ ಬಳಕೆಯಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಮಾರ್ಚ್ 17ರೊಳಗೆ ಇರಾನ್‌ನಿಂದ 92,700 ಮೆಟ್ರಿಕ್ ಟನ್ ಎಲ್‌ಪಿಜಿ ಬರಲಿದೆ; ಕೇಂದ್ರ ಸರ್ಕಾರ ಭರವಸೆ

ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ 86 ವರ್ಷದ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಪ್ರಾದೇಶಿಕ ಸಂಘರ್ಷ ತೀವ್ರಗೊಂಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಹಲವಾರು ಗಲ್ಫ್ ರಾಷ್ಟ್ರಗಳಲ್ಲಿ ಇಸ್ರೇಲಿ ಮತ್ತು ಯುಎಸ್ ಗುರಿಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು. ಇದಾದ ನಂತರ ಇರಾನ್ ಪ್ರಮುಖ ಜಾಗತಿಕ ಇಂಧನ ಕಾರಿಡಾರ್ ಆದ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿತು. ಇದು ಅಂತಾರಾಷ್ಟ್ರೀಯ ತೈಲ ಸರಬರಾಜು, ಇಂಧನ ಮಾರುಕಟ್ಟೆಗಳು ಮತ್ತು ಜಾಗತಿಕ ಆರ್ಥಿಕ ಸ್ಥಿರತೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಹಾರ್ಮುಜ್ ಜಲಸಂಧಿ ವಿಶ್ವದ ಐದನೇ ಒಂದು ಭಾಗದಷ್ಟು ತೈಲವನ್ನು ಸಾಗಿಸುವ ನಿರ್ಣಾಯಕ ಸಮುದ್ರ ಮಾರ್ಗವಾಗಿದೆ. ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಹಡಗು ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ, ಭಾರತ ಸೇರಿದಂತೆ ಹಲವು ದೇಶಗಳು ಇಂಧನದ ಪೂರೈಕೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಸದ್ಯಕ್ಕೆ ಇರಾನ್ ಭಾರತದ ಹಡಗುಗಳು ಈ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಹಾಗೂ ಗ್ಯಾಸ್​ ಸಾಗಾಟ ಮಾಡಲು ಒಪ್ಪಿಗೆ ನೀಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *