
ತೆಲುಗು ಚಿತ್ರರಂಗದ (Tollywood) ಜನಪ್ರಿಯ ಹಿರಿಯ ನಟ, ಪದ್ಮಶ್ರೀ ಪ್ರಶಸ್ತಿ ವಿಜೇತ ರಾಜೇಂದ್ರ ಪ್ರಸಾದ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಮಿಳಿನ ಸೂಪರ್ ಸ್ಟಾರ್ ನಟ ಮತ್ತು ಮಾಜಿ ಸಿಎಂ ಸಹ ಆಗಿರುವ ಎಂಜಿಆರ್ ಬಗ್ಗೆ ತೀರ ತುಚ್ಛವಾಗಿ ಮಾತನಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಇದೀಗ ತಮಿಳಿನ ಕೆಲವು ನಟರು, ಸ್ಟಾರ್ ನಟರುಗಳು ಇದನ್ನು ತೀವ್ರವಾಗಿ ಖಂಡಿಸಿದ್ದು, ರಾಜೇಂದ್ರ ಪ್ರಸಾದ್ ಕೂಡಲೇ ಕ್ಷಮೆ ಕೇಳಬೇಕು ಎಂದಿದ್ದಾರೆ.
ತೆಲುಗಿನ ಹಿರಿಯ ನಟ ಕಾಂತಾರಾವ್ ಅವರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ರಾಜೇಂದ್ರ ಪ್ರಸಾದ್, ಕಾಂತಾರಾವ್ ಅವರನ್ನು ಕೊಂಡಾಡುತ್ತಾ, ‘ಕಾಂತಾರಾವ್ ಅವರ ನಟನೆ ಮತ್ತು ಕ್ರೇಜ್ ನೋಡಿ ಅಂದಿನ ತಮಿಳು ಸೂಪರ್ ಸ್ಟಾರ್, ಮಾಜಿ ಸಿಎಂ ಸಹ ಆಗಿದ್ದ ಎಂಜಿಆರ್ ಅವರೇ ಹೆದರಿ ಮೂತ್ರ ವಿಸರ್ಜೆ ಮಾಡಿಕೊಳ್ಳುತ್ತಿದ್ದರು’ ಎಂದಿದ್ದರು. ತಮ್ಮ ಭಾಷಣದಲ್ಲಿ ಅನವಶ್ಯಕವಾಗಿ ಅವರು ಎಂಜಿಆರ್ ಅವರಿಗೆ ಅವಮಾನಕಾರ ಪದಗಳನ್ನು ಬಳಸಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ವಿವಾದಕ್ಕೆ ಕಾರಣವಾಯ್ತು.
ಇದೀಗ ತಮಿಳಿನ ಹಲವು ನಟರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತೀಯ ಕಲಾವಿದರ ಸಂಘದ (SIAA) ಪ್ರಧಾನ ಕಾರ್ಯದರ್ಶಿ ಹಾಗೂ ನಟ ವಿಶಾಲ್ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರ ಹೇಳಿಕೆ ಕೇಳಿ ಆಘಾತವಾಗಿದೆ. ಒಬ್ಬ ನಟ ಮತ್ತೊಬ್ಬ ನಟನನ್ನು ಹೊಗಳುವುದು ಒಳ್ಳೆಯದು, ಆದರೆ ಇನ್ನೊಬ್ಬ ದಂತಕಥೆಯನ್ನು ಕೀಳಾಗಿ ಕಾಣುವುದು ಸರಿಯಲ್ಲ. ಎಂಜಿಆರ್ ಅವರು ಕೇವಲ ನಟರಲ್ಲ, ತಮಿಳುನಾಡಿನ ಶ್ರೇಷ್ಠ ನಾಯಕ. ನಿಮ್ಮ ಹೇಳಿಕೆ ನಮ್ಮ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ದಯವಿಟ್ಟು ಇದಕ್ಕೆ ಕ್ಷಮೆಯಾಚಿಸಿ ಈ ವಿವಾದಕ್ಕೆ ತೆರೆ ಎಳೆಯಿರಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ತಮಿಳುನಾಡಿನ ನಟರ ಸಂಘದ ಅಧ್ಯಕ್ಷ ನಾಸರ್ ಕೂಡ ವಿಡಿಯೋ ಸಂದೇಶದ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಾಜೇಂದ್ರ ಪ್ರಸಾದ್ ಅವರೇ, ನೀವು ಕಾಂತಾರಾವ್ ಅವರನ್ನು ಹೊಗಳಿದ್ದು ಕೇಳಿ ಖುಷಿಯಾಯಿತು. ಆದರೆ ಎಂಜಿಆರ್ ಅವರ ಬಗ್ಗೆ ನೀವು ಮಾಡಿದ ಹೋಲಿಕೆ ನನಗೆ ನೋವು ತಂದಿದೆ. ಕೇವಲ ತಮಿಳರಿಗಷ್ಟೇ ಅಲ್ಲ, ತೆಲುಗು ಚಿತ್ರರಂಗದ ನಿಮ್ಮ ಕೆಲವು ಸಹೋದ್ಯೋಗಿಗಳಿಗೂ ಇದು ಇಷ್ಟವಾಗಿಲ್ಲ. ಎಂಜಿಆರ್ ಅವರು ಎನ್.ಟಿ.ಆರ್ ಅವರ ಆಪ್ತರಾಗಿದ್ದರು. ಯಾವುದೇ ರಾಜಕೀಯವಿಲ್ಲದೆ ನಾವು ಅವರನ್ನು ಗೌರವಿಸುತ್ತೇವೆ. ದಯವಿಟ್ಟು ಹೃದಯಪೂರ್ವಕವಾಗಿ ಕ್ಷಮೆಯಾಚಿಸಿ’ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್’ ಕೆಲಸದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ ಸೇರಿಕೊಳ್ಳಲಿದ್ದಾರೆ ಯಶ್
ತಮಿಳು ಚಿತ್ರರಂಗದ ಇತರೆ ಕೆಲವು ನಟರು, ಚಿತ್ರರಂಗಕ್ಕೆ ಸಂಬಂಧಿಸಿದವರು ಸಹ ರಾಜೇಂದ್ರ ಪ್ರಸಾದ್ ಅವರು ಎಂಜಿಆರ್ ಬಗ್ಗೆ ಆಡಿರುವ ಮಾತುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ರಾಜೇಂದ್ರ ಪ್ರಸಾದ್ ಅವರು ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಜೇಂದ್ರ ಪ್ರಸಾದ್ ಅವರು ಇತ್ತೀಚೆಗೆ ತಮ್ಮ ಹೇಳಿಕೆಗಳಿಂದ ವಿವಾದಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಈ ಹಿಂದೆ ಬ್ರಹ್ಮಾನಂದಂ, ಆಲಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದರು. ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆಯೂ ಇವರು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ