Headlines

ಎ ಖಾತಾ ವರ್ಗಾವಣೆಗೆ ಆನ್​ಲೈನ್​​ನಲ್ಲಿ ಹಣ ಪಾವತಿಸುವ ಮುನ್ನ ಎಚ್ಚರ: ಎ ಖಾತಾ ಮಾಡಿಸುವವರು ಇದನ್ನ ಓದಲೇಬೇಕು – Kannada News | Bangaluru: B Khata to A Khata Online: Payment Pending Glitches Worry Property Owners

ಬೆಂಗಳೂರು, ಫೆಬ್ರವರಿ 18: ಸಾರ್ವಜನಿಕರು ಪಾಲಿಕೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇತ್ತೀಚೆಗೆ ಬಿ ಖಾತಾ (B Khata) ಹೊಂದಿರುವ ಆಸ್ತಿ ಮಾಲೀಕರು ಎ ಖಾತಾಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಿದೆ. ಆದರೆ ಇದೇ ಆನ್​​​ಲೈನ್​​ ವ್ಯವಸ್ಥೆಯಲ್ಲಿ ಸಮಸ್ಯೆಗಳು ಉಂಟಾಗಿವೆ. ಆಸ್ತಿ ಮಾಲೀಕರು ಖಾತಾ ವರ್ಗಾವಣೆಗೆ ಲಕ್ಷಾಂತರ ರೂ ಹಣ ಪಾವತಿಸಿದ ಬಳಿಕವೂ ವೆಬ್​​ಸೈಟ್​ನಲ್ಲಿ ಮಾತ್ರ ಪೆಂಡಿಂಗ್​ ತೋರಿಸುತ್ತಿದೆ. ಹೀಗಾಗಿ ಆಸ್ತಿ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ಸಾರ್ವಜನಿಕರಿಗೆ ಜಿಬಿಎ ದೋಖಾ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ಬಗ್ಗೆ ಟಿವಿ9 ಡಿಜಿಟಲ್​ ಕನ್ನಡಗೆ ಬೆಂಗಳೂರಿನ ಆಸ್ತಿ ಮಾಲೀಕರಾದ ಎಮ್. ಶ್ರೀನಿವಾಸ ಎಂಬುವವರು ತಮಗಾದ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಗರದ ವಾರ್ಡ್ 161ರ ವ್ಯಾಪ್ತಿಗೆ ಬರುವ ಹೊಸಕೆರೆಹಳ್ಳಿಯಲ್ಲಿ ವಾಸವಾಗಿರುವ ಎಮ್. ಶ್ರೀನಿವಾಸ ಅವರು, ಅಲ್ಲಿ ಇರುವಂತಹ ಬಿ ಖಾತಾ ಸ್ವತ್ತಿನ ಮನೆಗೆ ಎ ಖಾತಾಗೆ ವರ್ಗಾವಣೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು.

ಆಸ್ತಿ ಮಾಲೀಕರಾದ ಎಮ್. ಶ್ರೀನಿವಾಸ ಟ್ವೀಟ್​​

ಈ ಸ್ವತ್ತು ಅವರ ಪತ್ನಿ ಸ್ವಾತಿ ಎನ್.ಕೆ. ಹೆಸರಿನಲ್ಲಿದ್ದು, ಕಳೆದ ಶುಕ್ರವಾರ ಅಂದರೆ ಫೆಬ್ರವರಿ 12ರಂದು ಒಟ್ಟು ಮೊತ್ತ ಒಂದು ಲಕ್ಷದ ಅರವತ್ತೇಳು ಸಾವಿರದ ಏಳು ನೂರಾ ಎಪ್ಪತ್ತೊಂದು ರೂಪಾಯಿ ಆನ್​​ಲೈನ್ ಮೂಲಕ ಪಾವತಿ ಮಾಡಿದ್ದಾರೆ. ಆದರೆ ಏಳು ದಿನಗಳ ನಂತರವೂ ಆ ಪಾವತಿಯು ಪೆಂಡಿಂಗ್ ಎಂಬ ಸ್ಟೇಟಸ್​ನಲ್ಲಿಯೇ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಮ್. ಶ್ರೀನಿವಾಸ ಅವರಿಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.

ಇದನ್ನೂ ಓದಿ: ಬೆಂಗಳೂರಿನ ಬಿ ಖಾತಾದಾರರಿಗೆ ಗುಡ್ ನ್ಯೂಸ್: ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳಿಗೆ ಸಿಗಲಿದೆ ಎ ಖಾತಾ!

ಇನ್ನು ಲಕ್ಷಾಂತರ ರೂ ಹಣ ಮಾತ್ರ ಖಾತೆಯಿಂದ ಡೆಬಿಟ್ ಆಗಿದೆ. ಆದರೆ ಆ ಮೊತ್ತಕ್ಕೆ ಜಿಬಿಎ ಕಡೆಯಿಂದ ಯಾವುದೇ ರಸೀದಿ ಕೂಡ ಇವರಿಗೆ ತಲುಪಿಲ್ಲ. ಇಷ್ಟು ದೊಡ್ಡ ಮೊತ್ತ ಹೀಗೆ ಒಂದು ವಾರ ಕಳೆದರೂ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗದೇ ಪರದಾಡಿದ್ದಾರೆ. ಇನ್ನು ಈ ಸಮಸ್ಯೆಯನ್ನು ಯಾರು ಬಗೆಹರಿಸುತ್ತಾರೆ ಎಂಬುವುದು ತಿಳಿಯದೇ ಕಂಗಾಲಾಗಿದ್ದಾರೆ.

ಇದನ್ನೂ ಓದಿ: BBMP Khata Services: ಎಲ್ಲ ಬಿ ಖಾತಾದಾರರಿಗೆ ಸಿಗಲಿದೆ ಎ ಖಾತಾ ಮಾನ್ಯತೆ: ಆಸ್ತಿ ಮಾಲೀಕರಿಗೆ ಸಂಪುಟ ಭರ್ಜರಿ ಗುಡ್ ನ್ಯೂಸ್

ಅವರ ವಾರ್ಡ್ ವ್ಯಾಪ್ತಿಯ ಎಆರ್​ಒ ಹಿಡಿದು, ಜಿಬಿಎ ಕೇಂದ್ರ ಕಚೇರಿ ತನಕ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಪಾವತಿ ಮಾಡಿರುವ ಮೊತ್ತದ ಬಗ್ಗೆ ಆತಂಕಗೊಂಡಿದ್ದು, ದಯವಿಟ್ಟು ಸಮಸ್ಯೆಗೆ ಪರಿಹಾರ ತಿಳಿಸುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:38 pm, Wed, 18 February 26

Source link

Leave a Reply

Your email address will not be published. Required fields are marked *