ಬೀದರ್, ಮಾರ್ಚ್ 02: ಜಿಲ್ಲೆಯ ರೈತ ಉದ್ದು, ಸೋಯಾ, ಕಬ್ಬು ಬೆಳೆಗೆ ಮಾತ್ರ ಸೀಮಿತವಾಗಿದ್ದರು. ಹೀಗಾಗಿ ಪದೇ ಪದೇ ನಷ್ಟಕ್ಕೆ ತುತ್ತಾಗಿ, ಸಾಲದ ಸುಳಿಗೆ ಸಿಲುಕುತ್ತಿದ್ದರು. ಬೆಳೆ ಬದಲಾವಣೆ ಮಾಡಬೇಕೆಂದು ನಿರ್ಧರಿಸಿದ ರೈತನಿಗೆ ಚಿಯಾ ಬೆಳೆ ಕೈ ಹಿಡಿದಿದ್ದು, ಇದೀಗ ಭರ್ಜರಿ ಲಾಭ ಗಳಿಸುತ್ತಿದ್ದಾರೆ.
ಬಹುಬೇಡಿಕೆ ಬೆಳೆಯತ್ತ ವಾಲಿದ ರೈತರು
ಗಡಿ ಜಿಲ್ಲೆ ಬೀದರ್ನ ರೈತರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿಕೊಂಡು ನಷ್ಟವನ್ನ ಅನುಭವಿಸುತ್ತಿದ್ದರು. ಜೊತೆಗೆ ಪದೇ ಪದೇ ಒಂದೆ ಬೆಳೆಯನ್ನ ನಾಟಿ ಮಾಡಿ ಆರ್ಥಿಕ ಸ್ಥಿತಿವಂತರಾಗುವ ದಿಕ್ಕಿನಲ್ಲಿ ಮುಂದಾಗಿ ಏಳು-ಬೀಳು ಕಂಡಿದ್ದು, ಇದೀಗ ಬಹುಬೇಡಿಕೆ ಬೆಳೆ ಚಿಯಾ ಧಾನ್ಯ ಬೆಳೆಯುವ ಕಡೆಗೆ ಮುಖ ಮಾಡಿದ್ದಾರೆ.
ಇದನ್ನೂ ಓದಿ: ಬೀದರ್ ರೈತನ ಕೈಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕೃಷಿ ಕ್ರಾಂತಿ
ಬೀದರ್ ತಾಲೂಕಿನ ಶಮಶಾನಗರ ಗ್ರಾಮದ ಆನಂದ ಒಂದು ಎಕರೆ ಜಮೀನಿನಲ್ಲಿ ಚಿಯಾ ಬೆಳೆಯನ್ನ ಬೆಳೆಯುತ್ತಿದ್ದಾರೆ. ಆ ಮೂಲಕ ಆರ್ಥಿಕವಾಗಿ ಸದೃಢರಾಗುವ ನಿಟ್ಟಿನಲ್ಲಿ ವಾಣಿಜ್ಯ ಬೇಸಾಯಕ್ಕೆ ಒಲವು ತೋರಿದ್ದಾರೆ. ಇಂಟರ್ನೆಟ್ನಲ್ಲಿ ಚಿಯಾ ಬೆಳೆ ಕುರಿತು ಮಾಹಿತಿ ಸಂಗ್ರಹಿಸಿ, ಬೀಜ ಖರೀದಿಸಿ ಇದೀಗ ಬೆಳೆ ಬೆಳೆದು ಸ್ಥಳೀಯ ರೈತರಿಗೆ ಮಾದರಿಯಾಗಿದ್ದಾರೆ. ಚಿಯಾ ಪೌಷ್ಟಿಕಾಂಶ ಸೇರಿದಂತೆ ಔಷಧಿಯ ಗುಣ ಹೊಂದಿದೆ. ಈ ಬೆಳೆ ಜಾನುವಾರು ಅಥವಾ ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿಯಿಂದ ಬೆಳೆಯಬಹುದಾಗಿದೆ.
ರೈತ ಆನಂದ
ರಾಗಿ ಬೇಸಾಯದ ಮಾದರಿಯಲ್ಲೇ ಚಿಯಾ ಬೆಳೆಯಬಹುದು. ಅತಿಯಾದ ನೀರಿನ ಅವಲಂಬನೆ ಇಲ್ಲದೆ ಬೆಳೆಯುವ ಬೆಳೆ ಇದಾಗಿದೆ ಎಂದು ರೈತ ಅಜರ್ ಮಸ್ತಾನ್ ಹೇಳುತ್ತಾರೆ. ಇನ್ನು ಚಿಯಾ ಬೆಳೆಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಹುಬೇಡಿಕೆ ಇದೆ. ಒಣ ಹವಾಮಾನದಲ್ಲಿ, ವಾರಕ್ಕೊಂದು ಬಾರಿ ತುಂತುರು ನೀರಾವರಿ ನೀಡಿದರೆ ಸಾಕು. 90ರಿಂದ 100 ದಿನದಲ್ಲಿ ಫಸಲು ಪಡೆಯಬಹುದು. ಒಂದು ಎಕರೆ ಪ್ರದೇಶಕ್ಕೆ 3 ರಿಂದ 4 ಸಾವಿರ ರೂ ವೆಚ್ಚ ತಗುಲಲಿದ್ದು, ಪೈರು ಬೆಳೆಸಿ ನಾಟಿ ಅಥವಾ ಬಿತ್ತನೆ ಬೀಜ ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು.
14 ರಿಂದ 19 ಸಾವಿರ ರೂ ದರ
ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ ನೀಡಿದೆ ಸಾಕು. ಸ್ಥಳಿಯ ವಾತಾವರಣಕ್ಕೆ ಬೆಳೆಯಬಹುದಾದ ವಾಣಿಜ್ಯ ಬೆಳೆ ಚಿಯಾ ಎಕರೆಗೆ 4 ರಿಂದ 5 ಕ್ವಿಂಟಲ್ ಇಳುವರಿ ಸಿಗಲಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 14 ರಿಂದ 19 ಸಾವಿರ ರೂ ದರವಿದ್ದು ರೈತರು ಹೆಚ್ಚಿನ ಲಾಭ ಗಳಿಸಬಹುದಾಗಿದೆ.
ಚಿಯಾ ಧಾನ್ಯದಲ್ಲಿ ಅಧಿಕ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಫಾಸ್ಫರಸ್ (ರಂಜಕ) ಇದ್ದು, ಹೀಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ. ಈ ಧಾನ್ಯ ಸೇವನೆಯಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ. ರಕ್ತದ ಒತ್ತಡ ನಿಯಂತ್ರಣ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣ, ಸಕ್ಕರೆ ಕಾಯಿಲೆ ನಿಯಂತ್ರಣ, ಉತ್ತಮ ಪಚನಕ್ರಿಯೆಗೆ ಸಹಕಾರಿ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂಬುವುದು ರೈತರ ಮಾತು.
ಚಿಯಾ ಬೆಳೆ
ಇನ್ನು ಬೀದರ್ ಜಿಲ್ಲೆಯಲ್ಲಿ ಚಿಯಾ ಬೆಳೆಯ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿಯಿಲ್ಲ. ಜೊತೆಗೆ ಮಾರುಕಟ್ಟೆ ಬಗ್ಗೆ ಕೂಡ ರೈತರಿಗೆ ಮಾಹಿತಿಯಿಲ್ಲ. ಹೀಗಾಗಿ ಕೆಲವೇ ಕೆಲವು ರೈತರು ಈ ಬೆಳೆಯ ಕಡೆಗೆ ಮುಖ ಮಾಡಿದ್ದೇವೆಂದು ರೈತ ರೇವಣಸಿದ್ದಯ್ಯ ಹೇಳುತ್ತಾರೆ.
ಇದನ್ನೂ ಓದಿ: ಮಾಂಜ್ರಾ ನದಿ ಒಡಲು ಬಗೆಯುತ್ತಿರುವ ದಂಧೆಕೋರರು: ಹಗಲು-ರಾತ್ರಿ ಎನ್ನದೆ ಮರಳು ಮಾಫಿಯಾ
ಜಿಲ್ಲೆಯ ರೈತರು ಚಿಯಾ ಕೃಷಿಯಲ್ಲಿ ತೊಡಗಿದ್ದಾರೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆಯಬಹುದಾದ ಬೆಳೆ ಇದಾಗಿದೆ. ಒಟ್ಟಾರೆ ಕೇವಲ ಕಬ್ಬು ಬೆಳೆದು ಕೈ ಸುಟ್ಟುಕೊಳ್ಳುತ್ತಿದ್ದ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.