
ದಾವಣಗೆರೆ, (ಏಪ್ರಿಲ್ 12): ದಾವಣಗೆರೆ (Davanagere) ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲೂ (BJP) ಸಹ ಭಾರೀ ಗೊಂದಲಗಳು ಏರ್ಪಟ್ಟಿದ್ದವು. ಒಂದೆಡೆ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಇನ್ನೊಂದೆಡೆ ಎಂಪಿ ರೇಣುಕಾಚಾರ್ಯ ಬಣದ ನಡುವೆ ಟಿಕೆಟ್ ಫೈಟ್ ಜೋರಾಗಿತ್ತು. ಅಂತಿಮವಾಗಿ ಹೈಕಮಾಂಡ್ ಎರಡು ಬಣಗಳ ಕಿತ್ತಾಟ ನಡುವೆ ಮೂರನೇ ವ್ಯಕ್ತಿಗೆ ಮಣೆ ಹಾಕಿತ್ತು. ಇದೀಗ ಬೈ ಎಲೆಕ್ಷನ್ ಎಲ್ಲಾ ಮುಗಿದು ಫಲಿತಾಂಶಕ್ಕಾಗಿ ಕಾಯುವಂತಾಗಿದೆ. ಇದರ ನಡುವೆ ಇದೀಗ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. ಅದರಲ್ಲೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಎಂಪಿ ರೇಣುಕಾಚಾರ್ಯ ಕ್ಷೇತ್ರಕ್ಕೆ ಬೇರೊಬ್ಬ ನಾಯಕ ಟವೆಲ್ ಹಾಕಿದ್ದು, ಇದು ರೇಣುಕಾಚಾರ್ಯ ಅವರನ್ನ ಕೆರಳಿಸುವಂತೆ ಮಾಡಿದೆ. ಇದರೊಂದಿಗೆ ದಾವಣಗೆರೆ ಬಿಜೆಪಿಯ ಒಳಜಗಳ ಮತ್ತೆ ಮುನ್ನಲೆಗೆ ಬಂದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲವೆಂದು ದಾವಣಗೆರೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗಮನಸೆಳೆದಿದ್ದ ಸ್ವಾಭಿಮಾನಿ ಬಳಗ ಹಾಗೂ ಇನ್ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ ಅಧ್ಯಕ್ಷ ಜಿಬಿ. ವಿನಯಕುಮಾರ್, ಮುಂಬರುವ ವಿಧಾನಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಹೌದು…ದಾವಣಗೆರೆ ಉತ್ತರ ಹಾಗೂ ಎಂಪಿ ರೇಣುಕಾಚಾರ್ಯ ಪ್ರತಿನಿಧಿಸುವ ಹೊನ್ನಾಳಿ ಕ್ಷೇತ್ರದ ಟಿಕೆಟ್ಗೆ ಈಗಾಲೇ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ಕಿಚ್ಚು ಹೊತ್ತಿಸಿದ ದಾವಣಗೆರೆ ದಂಗಲ್, ಪಕ್ಷದ ವಿರುದ್ಧ ಜಮೀರ್ ಷಡ್ಯಂತ್ರ ರೂಪಿಸಿದ್ರಾ?
ರೇಣುಕಾಚಾರ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟ ವಿನಯ್ ಕುಮಾರ್
ಈ ಸಂಬಂಧ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ವಿನಯ್ ಕುಮಾರ್, ಈ ಹಿಂದೆ ಮ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನನಗೆ ಟಿಕೆಟ್ ಸಿಗುವ ಸಾದ್ಯತೆ ಇತ್ತು. ಆದ್ರೆ ಕೈ ತಪ್ಪಿದೆ. ಈಗ ನಾನು ದಾವಣಗೆರೆ ಉತ್ತರ ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಚ್ಚೆ ಇದೆ. ಬಿಜೆಪಿ ಟಿಕೆಟ್ ಸಿಗಲಿ ಬಿಡಲಿ ನಾನು ಮಾತ್ರ ಹೋರಾಟ ಮಾಡುವೆ ಎಂದಿದ್ದಾರೆ. ಇದು ಬಿಎಸ್ವೈ ಮಾನಸ ಪುತ್ರ ಎಂಪಿ ರೇಣುಕಾಚಾರ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಹೊನ್ನಾಳಿ ಕ್ಷೇತ್ರದಲ್ಲಿ ಬರೋಬ್ಬರಿ ಐದು ಬಾರಿ ಸ್ಪರ್ಧೆ ಮಾಡಿರುವ ರೇಣುಕಾಚಾರ್ಯ ಮೂರು ಬಾರಿ ಗೆಲುವು ಸಾಧಿಸಿ ಎರಡು ಸಲ ಸೋತಿತ್ತಿದ್ದಾರೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ಸಹ ರೇಣುಕಾಚಾರ್ಯ ಹೊನ್ನಾಳಿಯಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹ ಈಗಾಗಲೇ ಹೊನ್ನಾಳಿಗೆ ರೇಣುಕಚಾರ್ಯ ಎಂದು ಬಹಿರಂಗ ವೇದಿಕೆಯಲ್ಲೇ ಘೋಷಣೆ ಮಾಡಿದ್ದಾರೆ. ಆದ್ರೆ, ಇದೀಗ ವಿನಯ್ ಕುಮಾರ್ ಹೊನ್ನಾಳಿ ಕ್ಷೇತದ್ರ ಮೇಲೆ ಕಣ್ಣಿಟ್ಟಿರುವುದು ರೇಣುಕಾಚಾರ್ಯ ಕಣ್ಣು ಕೆಂಪಾಗಿಸಿದೆ.
ಹೊನ್ನಾಳಿಗೆ ನಾನೇ ಬಿಜೆಪಿ ಅಭ್ಯರ್ಥಿ ಎಂದ ರೇಣುಕಾಚಾರ್ಯ
ಹೊನ್ನಾಳಿ ಕ್ಷೇತ್ರದ ಬಿಜೆಪಿ ಟಿಕೆಟ್ಗೆ ಯಾರೇ ಬಂದರೂ ಬಾಗಿಲು ಬಂದ್. ಹೊನ್ನಾಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೆ. ನನ್ನ ವಿರುದ್ಧ ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ನಾನು ಮನಸ್ಸು ಮಾಡಿದ್ರೆ ಅವರ ಕ್ಷೇತ್ರಗಳಲ್ಲೂ ಹೀಗೆಯೇ ಮಾಡಬಹುದು. ಹೊನ್ನಾಳಿ ಕ್ಷೇತ್ರದಲ್ಲಿ ನಾನು 5 ಬಾರಿ ಸ್ಪರ್ಧೆ ಮಾಡಿ, 3 ಬಾರಿ ಗೆದ್ದಿದ್ದೇನೆ. ಕ್ಷೇತ್ರದಲ್ಲಿ ಹುಟ್ಟಿದ ಮಗುವಿಂದ ಸಾಯೋ ಮುದುಕರವರೆಗೂ ನಾನು ಗೊತ್ತು. ಯಾರು ಏನೇ ಹೇಳಲಿ, ಯಾರೇ ಬರಲಿ ಹೊನ್ನಾಳಿಗೆ ನಾನೇ ಬಿಜೆಪಿ ಅಭ್ಯರ್ಥಿ, ಹೈಕಮಾಂಡ್ ಕೂಡ ನನ್ನ ಪರವಾಗಿಯೇ ಇದೆ, ನನ್ನನ್ನು ಬದಲಿಸಲು ಅಸಾಧ್ಯ. ಜಿ.ಬಿ.ವಿನಯಕುಮಾರ್ ಹೇಳಿಕೆ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುವೆ. ಆದ್ರೆ ಹೊನ್ನಾಳಿ ಬಿಜೆಪಿ ಬಾಗಿಲು ನನ್ನನ್ನ ಹೊರತುಪಡಿಸಿ ಬೇರೆಯವರಿಗೆ ಬಂದ್ ಎಂದು ಎಂದಿದ್ದಾರೆ.
ಉಪ ಚುನಾವಣೆಗೆ ಸ್ಪರ್ಧಿಸಿದ್ದ ಶ್ರೀನಿವಾಸ್ ಒಂದು ಗುಂಪಿನ ಅಭ್ಯರ್ಥಿಯಲ್ಲ. ಶ್ರೀನಿವಾಸ್ ಬಿಜೆಪಿ ರಾಷ್ಟ್ರೀಯ ನಾಯಕರು ಆಯ್ಕೆ ಮಾಡಿದ್ದ ಅಭ್ಯರ್ಥಿ. ಇದೇ ಕಾರಣಕ್ಕೆ ನಾವೆಲ್ಲರೂ ಸೇರಿ ಉಪಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ದಾವಣಗೆರೆ ಬಿಜೆಪಿ ಘಟಕದಲ್ಲಿ ಒಳಜಗಳ ಮುಗಿದ ಕಥೆ ಹೇಳಿದ್ದಾರೆ.