
ಉಡುಪಿ, ಮಾರ್ಚ್ 09: ಕಂಬಳದ ವಿಚಾರವಾಗಿ ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಶುರುವಾದ ರಾಜಕೀಯ ಕಚ್ಚಾಟವೀಗ ದೈವ ಮತ್ತು ದೇವರ ಅಂಗಳ ತಲುಪಿದೆ. ತನ್ನ ಮೇಲೆ ವೈಯಕ್ತಿಕ ದಾಳಿ ನಡೆಯುತ್ತಿದೆ ಎಂದು ಆರೋಪಿಸಿ ಬೇಸರಗೊಂಡಿರುವ ಬಿಜೆಪಿ ಶಾಸಕ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ದೇವರು ಮತ್ತು ದೈವದ ಮೊರೆ ಹೋಗಿದ್ದಾರೆ. ಕಾಪು ಶ್ರೀ ಹೊಸ ಮಾರಿಗುಡಿ ಅಮ್ಮನ ದೇಗುಲ ಮತ್ತು ಪೇಟೆಬೆಟ್ಟು ಬಬ್ಬು ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ಈ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ.
ಕಾಂಗ್ರೆಸ್ನ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ವಿರುದ್ಧ ಬೇಸರ ಹೊರಹಾಕಿರುವ ಗುರ್ಮೆ ಸುರೇಶ್ ಶೆಟ್ಟಿ, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಾರೆ ಎಂದು ಆರೋಪಿಸಿದ್ದಾರೆ. ಮಾರಿಯಮ್ಮನ ಮುಂದೆ ಸತ್ಯ ಸಮರ್ಪಿಸಿದ್ದೇನೆ. ಎಲ್ಲವನ್ನು ತಾಯಿಯೇ ನೋಡಿಕೊಳ್ಳಲಿ ಎಂದು ಹೇಳುವ ಮೂಲಕ ವೈಯಕ್ತಿಕ ನಿಂದನೆ ವಿಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಬ್ಬು ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿಯೂ ಕೈ ಮುಗಿದು ಶಾಸಕರು ಪ್ರಾರ್ಥಿಸಿದ್ದು, ಸೊರಕೆ ಸವಾಲಿನ ಹಿನ್ನೆಲೆ ಈ ರೀತಿ ನಡೆದುಕೊಂಡಿರೋದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ಹಗರಣ ಆರೋಪ ಬೆನ್ನಲ್ಲೇ ದೈವದ ಮೊರೆ ಹೋದ ಸಚಿವ ತಿಮ್ಮಾಪುರ!
ತಮ್ಮ ಮೇಲಿನ ಅದಿರು ಲೂಟಿ ಆರೋಪದ ಬಗ್ಗೆಯೂ ಬೇಸರ ವ್ಯಕ್ತಪಡಿಸಿರುವ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಾನು ಯಾವುದೇ ಅನ್ಯಾಯ ಮಾಡಿಲ್ಲ. ಮಗನ ಆರ್ಥಿಕ ವ್ಯವಹಾರದ ಬಗ್ಗೆ ಸೊರಕೆ ಮಾಡಿರುವ ಆರೋಪದಿಂದ ಮನನೊಂದು ದೇವರಿಗೆ ಶರಣಾಗಿದ್ದೇನೆ. ನನ್ನ ಕುಟುಂಬ ಯಾವುದೇ ಅವ್ಯವಹಾರದಲ್ಲಿ ತೊಡಗಿಲ್ಲ. ಪ್ರತಿ ಬಾರಿ ತನ್ನ ಕುಟುಂಬದ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಾರೆ. ಅನಾಚಾರ, ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದ್ದಾರೆ. ಒಂದು ಸುಳ್ಳನ್ನು 10 ಸರಿ ಹೇಳಿದಾಗ ಜನರು ನಂಬುತ್ತಾರೆ. ಅದೇ ಕಾರಣಕ್ಕೆ ನಾನು ದೇವರಿಗೆ ಮೊರೆ ಹೋಗಿದ್ದೇನೆ. ಸುಳ್ಳು ಸಾಯಬೇಕು ಸತ್ಯ ಗೆಲ್ಲಬೇಕು. ನನಗೆ ಬದುಕಿಗೆ ಬೇಕಾದಷ್ಟು ಸಂಪತ್ತು ಭಗವಂತ ಕೊಟ್ಟಿದ್ದು, 40 ವರ್ಷದಿಂದ ಉದ್ಯಮ ನಡೆಸುತ್ತಿದ್ದೇನೆ. ರಾಜಕೀಯ ನನಗೆ ಗಂಜಿ ಕೇಂದ್ರ ಅಲ್ಲ, ಅನಿವಾರ್ಯವೂ ಅಲ್ಲ. ಆದರೆ ಜನರಿಗೆ ತಪ್ಪು ಸಂದೇಶ ಹೋಗಬಾರದು. ನಾನು ಮಾಡಿರುವುದು ಪ್ರಾರ್ಥನೆ ಹೊರತು ಆಣೆ ಪ್ರಮಾಣ ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.