
ಬೆಂಗಳೂರು, ಏಪ್ರಿಲ್ 08: ಓದು ಮುಗಿಸಿ, ಕೆಲಸ ಹಿಡಿದು, ಆರಾಮದಾಯಕ ಜೀವನ ಕಟ್ಟಿಕೊಂಡರೆ ಸಾಕು ಎನ್ನುವ ಮನೋಭಾವ ಹಲವು ಯುವಕರಿಗಿದೆ. ಆದರೆ ಕೆಲವೇ ಕೆಲವರು ಮಾತ್ರ ರಿಸ್ಕ್ ತೆಗೆದುಕೊಂಡು ತಾವೇ ಒಂದು ಸ್ಟಾರ್ಟ್ಅಪ್ (Startup) ಮಾಡಲು ಮುಂದಾಗುತ್ತಾರೆ. ಅಂತೆಯೇ ನಗರದಲ್ಲಿ ಯುವ ಉದ್ಯಮಿಯೊಬ್ಬರು ತಮ್ಮ ಕಾರ್ಪೊರೇಟ್ ವೃತ್ತಿಯನ್ನು ತೊರೆದು ಹೊಸ ಪ್ರಯೋಗಕ್ಕೆ ಕೈಹಾಕಿರುವ ಘಟನೆ ಗಮನಸೆಳೆದಿದೆ. ನಗರದ ಎಲೆಕ್ಟ್ರಾನಿಕ್ ಸಿಟಿ ಫೇಸ್ 1 ಪ್ರದೇಶದ 23 ವರ್ಷದ ವ್ಯಕ್ತಿಯೊಬ್ಬರು ತಮ್ಮದೇ ಫ್ಲಾಟ್ನಿಂದ ಕ್ಲೌಡ್ ಕಿಚನ್ ಆರಂಭಿಸಿ ಸ್ವಯಂ ಉದ್ಯಮದ ದಾರಿಗೆ ಹೆಜ್ಜೆಯಿಟ್ಟಿದ್ದಾರೆ.
ವ್ಯಕ್ತಿಯ ಪೋಸ್ಟ್ನಲ್ಲೇನಿದೆ?
ಸ್ವಂತವಾಗಿ ಎಲ್ಲ ಕಾರ್ಯಗಳನ್ನು ನಿರ್ವಹಿಸುವ ಈ ವ್ಯಕ್ತಿ, ಅಡುಗೆ ಮಾಡುವುದರಿಂದ ಹಿಡಿದು ಸ್ವಚ್ಛತೆ, ಪ್ಯಾಕಿಂಗ್ ಮತ್ತು ವಿತರಣೆಯವರೆಗೆ ಎಲ್ಲಾ ಜವಾಬ್ದಾರಿಗಳನ್ನು ತಾನೇ ಹೊರುವುದಾಗಿ ಹೇಳಿದ್ದಾರೆ. ಕಡಿಮೆ ಬಂಡವಾಳದಲ್ಲೇ ಈ ಪ್ರಯತ್ನ ಆರಂಭಿಸಿದ್ದು, ಮುಖ್ಯವಾಗಿ ಆಹಾರ ಪ್ಯಾಕೇಜಿಂಗ್ ಹಾಗೂ ಆನ್ಲೈನ್ ಆಹಾರ ವಿತರಣೆ ವೇದಿಕೆ ಜೊಮಾಟೋದಲ್ಲಿ ನೋಂದಣಿ ಮಾಡಲು ಮಾತ್ರ ಹಣ ಬಳಸಿರುವುದಾಗಿ ತಿಳಿಸಿದ್ದಾರೆ.
ತನ್ನ ಈ ನಿರ್ಧಾರವನ್ನು ಅವರು ತಮ್ಮ ರೆಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದು, 23ನೇ ವಯಸ್ಸಿನಲ್ಲಿ ಕೆಲಸ ಬಿಟ್ಟು ನಾನು ಇಂದು ಧೈರ್ಯದಿಂದ ಒಂದು ಹೆಜ್ಜೆ ಮುಂದಿಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನನ್ನ ಬಳಿ ದೊಡ್ಡ ಯೋಜನೆ ಅಥವಾ ಹೆಚ್ಚಿನ ಹಣವಿಲ್ಲ. ಆದರೆ ಸ್ವಂತವಾಗಿ ಏನಾದರೂ ಮಾಡಲು ಮನಸ್ಸಾಯಿತು ಎಂದು ತನ್ನ ನಿರ್ಧಾರವನ್ನು ವಿವರಿಸಿದ್ದಾರೆ.
ಇದೇ ವೇಳೆ, ಈ ಪ್ರಯತ್ನ ಯಶಸ್ವಿಯಾಗುತ್ತದೆಯೋ ಅಥವಾ ವಿಫಲವಾಗುತ್ತದೆಯೋ ಎಂಬುದು ತಿಳಿದಿಲ್ಲ ಎಂದು ಬರೆದುಕೊಂಡಿರುವ ಬಳಕೆದಾರ, ಯಾವುದೇ ಫಲಿತಾಂಶ ಬಂದರೂ ತನ್ನ ಅನುಭವಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಘಟನೆ ಇಂದಿನ ಯುವಜನರಲ್ಲಿ ಹೆಚ್ಚುತ್ತಿರುವ ಸ್ಟಾರ್ಟ್ಅಪ್ ಮನೋಭಾವ ಮತ್ತು ಅಪಾಯ ಸ್ವೀಕರಿಸುವ ಧೈರ್ಯವನ್ನು ಪ್ರತಿಬಿಂಬಿಸುತ್ತದೆ. ಸಾಂಪ್ರದಾಯಿಕ ಉದ್ಯೋಗಗಳನ್ನು ಬಿಟ್ಟು ಸ್ವಂತ ಉದ್ಯಮ ಆರಂಭಿಸುವ ಪ್ರವೃತ್ತಿ ನಗರಗಳಲ್ಲಿ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ ಗೊತ್ತಾ?
ನೆಟ್ಟಿಗರ ರಿಯಾಕ್ಷನ್ ಏನು?
ವ್ಯಕ್ತಿಯ ಹೊಸ ನಿರ್ಧಾರಕ್ಕೆ ಪ್ರೋತ್ಸಾಹಿಸಿರುವ ನೆಟ್ಟಿಗರು ತರಹೇವಾರಿ ಕಾಮೆಂಟ್ ಹಾಕಿದ್ದಾರೆ. ಒಬ್ಬ ಯೂಸರ್, ನಿಮ್ಮ ಕ್ಲೌಡ್ ಕಿಚನ್ ಹೆಸರು ತಿಳಿಸಿ; ನಾವು ಪ್ರಚಾರ ಮಾಡುತ್ತೇವೆ ಎಂದರೆ, ಇನ್ನೊಬ್ಬ ಯೂಸರ್, ನೀವು ತಯಾರಿಸುವ ಆಹಾರದ ಸುಂದರವಾದ ಫೋಟೋಗಳನ್ನು ಹಾಕಿಕೊಳ್ಳಿ ಮತ್ತು ಆ ತಿನಿಸಿನ ಕುರಿತ ಮಾಹಿತಿ ಹಂಚಿಕೊಳ್ಳಿ ಎಂದಿದ್ದಾರೆ.
ಇನ್ನೂರ್ವ ಕಾಮೆಂಟ್ ಮಾಡಿ, ಇದೇ ರೀತಿಯ ಪ್ರಯತ್ನ ಮಾಡುತ್ತಿದ್ದ ದಂಪತಿಗೆ ತಾನೂ ಏರ್ ಫ್ರೈಯರ್ ಮಾರಾಟ ಮಾಡುದ್ದು, ಇಂದಿನ ಆರ್ಥಿಕತೆಗೆ ನಮ್ಮ ಸ್ವಂತ ವ್ಯವಹಾರ ಇರುವುದು ಒಳಿತು. ಸಂಬಳವನ್ನೇ ನಂಬಿ ಕೂರುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.