ಚಿಕ್ಕಮಗಳೂರು, ಜನವರಿ 1: ಬೆಂಗಳೂರಿನಿಂದ ಹೊಸ ವರ್ಷದ ಆಚರಣೆಗೆಂದು ಚಿಕ್ಕಮಗಳೂರಿಗೆ ಬಂದಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ರಂಪಾಟ ಮಾಡಿರುವುದು ವರದಿಯಾಗಿದೆ. ಚಹಾ ಕೊಡಲು ತಡವಾಯಿತು ಎಂಬ ಕಾರಣಕ್ಕೆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಚಿಕ್ಕಮಗಳೂರು ನಗರದ KSRTC ಬಸ್ ನಿಲ್ದಾಣದ ಬಳಿ ಇರುವ ಟೀ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಮೀಸಲು ಪೊಲೀಸ್ ಪಡೆಯ ಕೋರಮಂಗಲದ ಸಿಬ್ಬಂದಿ ಪುನೀತ್ ಹಲ್ಲೆ ಮಾಡಿದ್ದಾರೆ.
ಮುಂಜಾನೆ ಸಮಯದಲ್ಲಿ ಪುನೀತ್ ಮತ್ತು ಅವರ ಸ್ನೇಹಿತರು ಬಸ್ ನಿಲ್ದಾಣದ ಬಳಿ ಇರುವ ಟೀ ಅಂಗಡಿಗೆ ತೆರಳಿದ್ದರು. ಈ ವೇಳೆ ಟೀ ಕೊಡಲು ತಡವಾದುದರಿಂದ ಕೋಪಗೊಂಡ ಪುನೀತ್, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಪೊಲೀಸ್ ಟೀ ಅಂಗಡಿಯಲ್ಲಿ ದಾಂಧಲೆ ಎಬ್ಬಿಸಿ ಧ್ವಂಸ ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಪೊಲೀಸ್ ಕಾನ್ಸ್ಟೇಬಲ್ ಪುನೀತ್ನನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.