
T20 World Cup 2026: ಟಿ20 ವಿಶ್ವಕಪ್ ಮುಗಿದರೂ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ತಂಡ ಇನ್ನೂ ಸಹ ಭಾರತದಲ್ಲೇ ಉಳಿದಿದ್ದಾರೆ. ಅಂದರೆ ಮಾರ್ಚ್ 1 ರಂದು ಕೊನೆಯ ಪಂದ್ಯವಾಡಿದ್ದ ವಿಂಡೀಸ್ ಪಡೆ ಇನ್ನೂ ಸಹ ತವರಿಗೆ ಮರಳಿಲ್ಲ. ಇತ್ತ ಮಾರ್ಚ್ 4 ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧ ಸೆಮಿಫೈನಲ್ ಆಡಿದ್ದ ಸೌತ್ ಆಫ್ರಿಕಾ ತಂಡ ಕೂಡ ಇನ್ನೂ ಸಹ ಕೊಲ್ಕತ್ತಾದಲ್ಲೇ ಇದ್ದಾರೆ. ಅಂದರೆ ಉಭಯ ತಂಡಗಳ ಆಟಗಾರರಿಗೆ ಇನ್ನೂ ಸಹ ತವರಿಗೆ ತೆರಳಲು ಸಾಧ್ಯವಾಗಿಲ್ಲ.
ಇದಕ್ಕೆ ಮುಖ್ಯ ಕಾರಣ ಗಲ್ಫ್ ಪ್ರದೇಶದಲ್ಲಿನ ಅಂತರಾಷ್ಟ್ರೀಯ ವಾಯುಯಾನ ನಿರ್ಬಂಧ. ಇಸ್ರೇಲ್/ಅಮೆರಿಕ ಮತ್ತು ಇರಾನ್ ನಡುವಣ ಯುದ್ಧದಿಂದಾಗಿ ವಾಯು ಮಾರ್ಗದಲ್ಲಿ ವ್ಯತ್ಯಯ ಉಂಟಾಗಿದೆ.
ಇದರಿಂದ ದುಬೈ ಅಥವಾ ಕತಾರ್ ಮೂಲಕ ತವರಿಗೆ ಪ್ರಯಾಣಿಸಬೇಕಿದ್ದ ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ತಂಡಗಳ ಆಟಗಾರರು ಸಂಕಷ್ಟಕ್ಕೆ ಸಿಲಿಕಿದ್ದಾರೆ.
ಇದೀಗ ಉಭಯ ತಂಡಗಳ ಆಟಗಾರರಿಗೆ ಮಾರ್ಚ್ 10 ರಂದು ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಐಸಿಸಿ ತಿಳಿಸಿದೆ. ಅಂದರೆ ಮಂಗಳವಾರ ಮುಂಜಾನೆ ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಆಟಗಾರರನ್ನು ತವರಿಗೆ ಕಳುಹಿಸಿ ಕೊಡಲಾಗುವುದು ಎಂದು ಐಸಿಸಿ ತಿಳಿಸಿದೆ.
ಅದರಂತೆ ಸೌತ್ ಆಫ್ರಿಕಾ ತಂಡದ ಬಹುತೇಕ ಆಟಗಾರರು ಜೋಹಾನ್ಸ್ಬರ್ಗ್ಗೆ ಮರಳಲಿದ್ದಾರೆ. ಆದರೆ ಕೇಶವ್ ಮಹಾರಾಜ್ ಸೇರಿದಂತೆ ಮೂವರು ಆಟಗಾರರು ಭಾರತದಿಂದಲೇ ನ್ಯೂಝಿಲೆಂಡ್ ವಿರುದ್ಧದ ಸರಣಿಗಾಗಿ ತೆರಳಿದ್ದಾರೆ.
ಹಾಗೆಯೇ ವೆಸ್ಟ್ ಇಂಡೀಸ್ ತಂಡದ ಆಟಗಾರರು ಮೊದಲು ಜೋಹಾನ್ಸ್ಬರ್ಗ್ಗೆ ತೆರಳಿ, ಅಲ್ಲಿಂದ ಆಂಟಿಗುವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಇದರ ನಡುವೆ ಟೀಮ್ ಇಂಡಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋತ ಇಂಗ್ಲೆಂಡ್ ತಂಡವು ಈಗಾಗಲೇ ತವರಿಗೆ ತಲುಪಿದ್ದಾರೆ. ಇತ್ತ ಇಂಗ್ಲೆಂಡ್ ತಂಡಕ್ಕೆ ಬೇಗನೆ ವ್ಯವಸ್ಥೆ ಕಲ್ಪಿಸಿ, ಇತರೆ ಎರಡು ತಂಡಗಳ ಆಟಗಾರರನ್ನು ನಿರ್ಲಕ್ಷಿಸಿರುವ ಬಗ್ಗೆ ಇದೀಗ ಪ್ರಶ್ನೆಗಳೆದ್ದಿವೆ.
ಅದರಲ್ಲೂ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್, ಐಸಿಸಿಯ ಈ ನಡೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ಬಲಿಷ್ಠ ಕ್ರಿಕೆಟ್ ಮಂಡಳಿ ಹಾಗೂ ಬಡ ಕ್ರಿಕೆಟ್ ಮಂಡಳಿ ನಡುವಣ ವ್ಯತ್ಯಾಸ. ಇಂತಹ ತಾರತಮ್ಯವೇಕೆ ಎಂದು ಮೈಕೆಲ್ ವಾನ್ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: Virat Kohli: ನಿಜವಾಗ್ಲೂ ಖುಷಿಯಾಯ್ತು… ಅರ್ಹ ಆಟಗಾರನಿಗೆ POTT ಪ್ರಶಸ್ತಿ ಸಿಕ್ಕಿದೆ..!
ಒಟ್ಟಿನಲ್ಲಿ ಟಿ20 ವಿಶ್ವಕಪ್ ಮುಗಿದು ಟೀಮ್ ಇಂಡಿಯಾ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡು ಮನೆಗೆ ತೆರಳಿದರೂ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ಆಟಗಾರರು ಇನ್ನೂ ಸಹ ಭಾರತದಲ್ಲೇ ಸಿಕ್ಕಿಹಾಕಿಕೊಂಡಿರುವುದು ಮಾತ್ರ ವಿಪರ್ಯಾಸ.