ಕಲಬುರಗಿ, ಡಿಸೆಂಬರ್ 22: ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಆಡಳಿತ ಹಂಚಿಕೆ ಸಂಬಂಧಿಸಿದ ಚರ್ಚೆ ಮತ್ತೊಮ್ಮೆ ಜೋರಾಗಿದೆ. ಇಲ್ಲಿಯವರೆಗೂ ಸಿಎಂ ಸಿದ್ದರಾಮಯ್ಯಗೆ ಹಿಂದುಳಿದ ವರ್ಗಗಳು ಸಾಥ್ ಕೊಡುತ್ತಲೇ ಬಂದಿವೆ. ಆದರೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಒತ್ತಾಯದೊಂದಿಗೆ ಹಿಂದುಳಿದ ಸಮುದಾಯದ ಮಠಾಧೀಶರು ಮುನ್ನಡೆಸಿರುವ ಮಹತ್ವದ ಚಳವಳಿ ಕಲಬುರಗಿಯಲ್ಲಿ ಆರಂಭವಾಗಿದೆ. ಬ್ರಹ್ಮ ಶ್ರೀ ನಾರಾಯಣ ಗುರುಶಕ್ತಿಪೀಠದ ರಾಜ್ಯಾಧ್ಯಕ್ಷರಾದ ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಹಿಂದುಳಿದ ಮಠಾಧೀಶರ ಮಹಾಸಭೆ ಡಿಕೆಶಿ ಪರ ಬಹಿರಂಗ ಬೆಂಬಲ ವ್ಯಕ್ತಪಡಿಸಿದೆ.
ಈ ಸಂಬಂಧ ಹತ್ತರಿಂದ ಹದಿನೈದು ಮಂದಿ ಮಠಾಧೀಶರು ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದೇ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಪ್ರಣವಾನಂದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಡಿಕೆಶಿಗೆ ಅವಕಾಶ ನೀಡದಿದ್ದರೆ ಪಕ್ಷ ಸರ್ವನಾಶದ ಹಾದಿಗೆ ಹೋಗುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.