ದಾಂಡೇಲಿ, ಫೆ.20: ಬಡತನವು ಸಾಧನೆಗೆ ಅಡ್ಡಿಯಲ್ಲ, ಬದಲಾಗಿ ಅದು ಛಲವನ್ನು ಹೆಚ್ಚು ಮಾಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ದಾಂಡೇಲಿಯ ಯುವತಿ ಪದ್ಮಾವತಿ ನಾಗಣ್ಣ ಮಾದಿಗ ಅವರು ಸಿವಿಲ್ ನ್ಯಾಯಾಧೀಶರಾಗಿ (Civil Judge) ಆಯ್ಕೆಯಾಗುವ ಮೂಲಕ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಆದರೆ ಈ ಸಾಧನೆಯ ಹಿಂದೆ ಅವರಿಗಿಂತ ಹೆಚ್ಚಾಗಿ ಶ್ರಮಿಸಿದ್ದು ಅವರ ಅಣ್ಣಂದಿರು. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರನ್ನು ಬೇಗ ಮದುವೆ ಮಾಡಿಕೊಡುವ ಎಂಬ ಯೋಚನೆಯಲ್ಲಿರುವ ಈ ಕಾಲದಲ್ಲಿ ನಮ್ಮ ಮನೆಯ ಮಗಳು ಸಾಧನೆ ಮಾಡಿ ಒಳ್ಳೆಯ ಸ್ಥಾನವನ್ನು ಪಡೆಯಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದರು. ತಮ್ಮ ತಂಗಿಗಾಗಿ ಇಡೀ ಜೀವನನ್ನೇ ಮುಡಪಾಗಿಟ್ಟಿದ್ದಾರೆ. ತಂಗಿಯ ಕನಸಿಗೆ ರೆಕ್ಕೆ ಪುಕ್ಕ ಕಟ್ಟಿದ್ದೇ ಈ ಅಣ್ಣಂದಿರು.
ಪದ್ಮಾವತಿ ಅವರ ಕುಟುಂಬದ ಹಿನ್ನೆಲೆ ಅತ್ಯಂತ ಸಾಮಾನ್ಯವಾದುದು. ತಂದೆ ನಾಗಣ್ಣ ಅವರು ನಿಧನರಾದ ಮೇಲೆ ಕುಟುಂಬದ ಜವಾಬ್ದಾರಿ ಅಣ್ಣಂದಿರ ಹೆಗಲ ಮೇಲೆ ಬಿತ್ತು. ಮನೆಯಲ್ಲಿ ಸರಿಯಾದ ಆರ್ಥಿಕ ವ್ಯವಸ್ಥೆ ಇಲ್ಲದಿದ್ದರೂ, ತಂಗಿಯ ಓದಿಗೆ ತೊಂದರೆಯಾಗಬಾರದೆಂದು ಅಣ್ಣಂದಿರು ರಸ್ತೆ ಬದಿಯಲ್ಲಿ ಕುಳಿತು ಚಪ್ಪಲಿ ಹೊಲಿಯುವ ಕಾಯಕ ಮಾಡುತ್ತಾ ಆಕೆಯನ್ನು ಓದಿಸಿದರು.
ಪದ್ಮಾವತಿ ಅವರು ಆರಂಭದಿಂದಲೂ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದವರು. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸುವುದು ಕಷ್ಟ ಎಂಬ ಸವಾಲನ್ನು ಮೆಟ್ಟಿ ನಿಂತ ಅವರು, ಕಾನೂನು ಪದವಿ (Law) ಪಡೆದು ನಂತರ ನ್ಯಾಯಾಂಗ ಪರೀಕ್ಷೆಗೆ ಸಿದ್ಧತೆ ನಡೆಸಿದರು. ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡು ಇಂದು ಅವರು ನ್ಯಾಯಪೀಠದ ಮೇಲೆ ಕುಳಿತು ನ್ಯಾಯ ನೀಡುವ ಸ್ಥಾನಕ್ಕೆ ಏರಿದ್ದಾರೆ. ಅಣ್ಣಂದಿರ ಬೆವರಿನ ಬೆಲೆಯನ್ನು ಅರಿತಿದ್ದ ಪದ್ಮಾವತಿ, ಹಗಲು-ರಾತ್ರಿ ಕಷ್ಟಪಟ್ಟು ಓದಿ ಮೊದಲ ಪ್ರಯತ್ನದಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾದರು.
ಇದನ್ನೂ ಓದಿ: ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಉತ್ತರ ಕನ್ನಡ ಜಿಲ್ಲೆಯಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮಾದಿಗ ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದರೆ ಏನು ಸಾಧಿಸಲು ಸಾಧ್ಯವಿಲ್ಲ ಎನ್ನುವವರಿಗೆ ಇವರ ಸಾಧನೆಯೇ ದೊಡ್ಡ ಉತ್ತರವಾಗಿದ್ದಾರೆ. ನಾವು ಪಟ್ಟ ಕಷ್ಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ನಮ್ಮ ತಂಗಿ ಸಮಾಜಕ್ಕೆ ನ್ಯಾಯ ನೀಡುವ ಕೆಲಸ ಮಾಡುತ್ತಾಳೆ ಎಂಬ ನಂಬಿಕೆ ನಮಗಿದೆ ಎಂದು ಹೆಮ್ಮೆಯ ಮಾತುಗಳನ್ನು ಅಣ್ಣಂದಿರು ಮಾತನಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:35 pm, Fri, 20 February 26