Headlines

ಧಾರವಾಡ: ಇಲ್ಲಿ ಇಡೀ ಗ್ರಾಮಕ್ಕೇ ಸಿಸಿಟಿವಿ ಕಣ್ಗಾವಲು! ಅಪರಾಧ ಕೃತ್ಯವೂ ಇಳಿಕೆ – Kannada News | Dharwad Mummigatti Village Under Full CCTV Surveillance: Crime Rate Drops, Model Gram Panchayat Emerges

ಇಡೀ ಮುಮ್ಮಿಗಟ್ಟಿ ಗ್ರಾಮಕ್ಕೇ ಸಿಸಿಟಿವಿ ಕಣ್ಗಾವಲು!Image Credit source: tv9

ಧಾರವಾಡ, ಫೆಬ್ರವರಿ 3: ಧಾರವಾಡ (Dharawad) ತಾಲೂಕಿನ ಮುಮ್ಮಿಗಟ್ಟಿ ಗ್ರಾಮ ಸುಮಾರು 12 ಸಾವಿರ ಜನಸಂಖ್ಯೆ ಹೊಂದಿದ್ದು, ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡೇ ಇದೆ. ಈ ಗ್ರಾಮದ ಪಕ್ಕ ಹೋಗುವ ವಾಹನಗಳ ಮೂಲಕ ಹೊರಗಿನ ಜನರು ಅಕ್ರಮಗಳನ್ನು ಎಸಗುವುದು ಸಾಮಾನ್ಯದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್​ನಲ್ಲಿ ಮುಖ್ಯವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಗ್ರಾಮ ಪಂಚಾಯತ್​​ಗಳ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡಬೇಕೆಂದರೂ ಅನುದಾನದ ಕೊರತೆ ಎದ್ದು ಕಾಣುತ್ತೆ. ಆದರೆ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವರ್ಷಕ್ಕೆ 50 ಲಕ್ಷ ರೂಪಾಯಿ ತೆರಿಗೆ ಸಂಗ್ರಹಿಸಿದ ಸಾಧನೆ ಒಂದು ಕಡೆಯಾದರೆ, ಇದೀಗ ಇಡೀ ಗ್ರಾಮದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿರುವುದು ಮತ್ತೊಂದು ಸಾಧನೆ.

ಬಹುತೇಕ ಗ್ರಾಮ ಪಂಚಾಯತ್​ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೆರವೇರಿಸಲು ಅನುದಾನ ಕೊರತೆ ಇರುತ್ತದೆ. ಆದರೆ, ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಿದ ಮೇಲೂ ಉಳಿದ ಹಣದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಅಹಿತರ ಘಟನೆಗಳು ನಡೆಯುವುದು ನಿಂತು ಹೋಗಿವೆ.

7.5 ಲಕ್ಷ ರೂ.ನಲ್ಲಿ ಹೆಚ್​ಡಿ ಸಿಸಿಟಿವಿ ಕ್ಯಾಮರಾ ಅಳವಡಿಕೆ

ಇದೀಗ ಒಟ್ಟು 22 ಹೈ ಡೆಫಿನಿಶನ್ ಸಿಸಿ ಟಿವಿ ಕ್ಯಾಮರಾಗಳನ್ನು ಗ್ರಾಮದಲ್ಲಿ ಅಳವಡಿಸಲಾಗಿದ್ದು, ಇದಕ್ಕೆ ಸುಮಾರು 7.5 ಲಕ್ಷ ರೂಪಾಯಿ ಖರ್ಚಾಗಿದೆ. ಅಲ್ಲದೇ ಸುಮಾರು ಒಂದು ತಿಂಗಳವರೆಗೆ ಬ್ಯಾಕ್ ಅಪ್ ಇಟ್ಟುಕೊಳ್ಳಬಹುದಾಗಿದೆ. ಎಲ್ಲವನ್ನೂ ಗ್ರಾಮ ಪಂಚಾಯತ್ ಕಚೇರಿಯಿಂದಲೇ ನಿರ್ವಹಿಸಲಾಗುತ್ತಿದೆ. ಅಲ್ಲದೇ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಉಳಿದ ಸದಸ್ಯರೆಲ್ಲ ಸೇರಿ ಸಭೆ ನಡೆಸಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಮೊದಲಿಗೆ ಎಲ್ಲರೂ ಗ್ರಾಮದಲ್ಲಿ ತಿರುಗಾಡಿ ಎಲ್ಲೆಲ್ಲ ಈ ಕ್ಯಾಮೆರಾಗಳನ್ನು ಅಳವಡಿಸಬೇಕು ಅನ್ನೋದನ್ನು ನಿರ್ಧರಿಸಿದರು. ಬಳಿಕ ಗರಗ್ ಠಾಣೆಯ ಪೊಲೀಸರಿಗೂ ಈ ಮಾಹಿತಿಯನ್ನು ನೀಡಲಾಗಿ, ಅವರು ಕೂಡ ಸಲಹೆಗಳನ್ನು ನೀಡಿದರು. ಅದೆಲ್ಲದರ ಪರಿಣಾಮವಾಗಿ ಇಂದು ಇಡೀ ಗ್ರಾಮವೇ ಸಿಸಿ ಟಿವಿ ಕ್ಯಾಮೆರಾಗಳ ಕಣ್ಗಾವಲಿಗೆ ಬಂದಿದೆ.

ಇನ್ನು ಗ್ರಾಮದ ಪಕ್ಕದಲ್ಲಿಯೇ ಸಾಕಷ್ಟು ಕೈಗಾರಿಕೆಗಳಿದ್ದು, ಬೇರೆ ಕಡೆಯಿಂದ ಬಂದಿರುವ ಅನೇಕರು ಇಲ್ಲಿಯೇ ನೆಲೆಸಿದ್ದಾರೆ. ಅಂಥವರೇನಾದರೂ ಅಕ್ರಮ ಕೃತ್ಯ ಎಸಗಿದರೆ ಪತ್ತೆಹಚ್ಚಲು ಈ ಕ್ಯಾಮರಾಗಳ ಮೂಲಕ ಸಾಕಷ್ಟು ಸಹಾಯವಾಗುತ್ತದೆ. ಅಲ್ಲದೇ ಗ್ರಾಮದಲ್ಲಿ ಯುವತಿಯರನ್ನು ಚುಡಾಯಿಸುವುದು, ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಇದೀಗ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದರಿಂದಾಗಿ, ಅಂಥ ಕೃತ್ಯಗಳಿಗೆ ಬ್ರೇಕ್ ಬಿದ್ದಿದೆ. ಅಲ್ಲದೆ ಮಹಿಳೆಯರು, ಯುವತಿಯರು, ಮಕ್ಕಳು ನೆಮ್ಮದಿಯಾಗಿ ಓಡಾಡಬಹುದು ಎಂಬುದು ಸ್ಥಳೀಯರ ಅನಿಸಿಕೆ.

ಹಿಟ್ ಆ್ಯಂಡ್ ರನ್ ಪ್ರಕರಣಗಳ ಪತ್ತೆಗೂ ನೆರವಾಗ್ತಿವೆ ಸಿಸಿಟಿವಿ

ಜಿಲ್ಲೆಯಲ್ಲಿ ಅತಿ ಹೆಚ್ಚು ಅಪಘಾತ ನಡೆಯುವ ಸ್ಥಳಗಳ ಪೈಕಿ ಈ ಗ್ರಾಮವೂ ಒಂದು. ಅಂಥ ಅಪಘಾತಗಳ ಪೈಕಿ ಹಿಟ್ ಆ್ಯಂಡ್ ರನ್ ಕೇಸುಗಳೇ ಹೆಚ್ಚಾಗಿರುತ್ತವೆ. ಇದೀಗ ಕ್ಯಾಮರಾ ಅಳವಡಿಸಿರುವುದರಿಂದ ಅಪಘಾತ ಮಾಡಿ ಪರಾರಿಯಾದವರು ತಪ್ಪಿಸಿಕೊಳ್ಳುವುದು ಸುಲಭವಲ್ಲ.

ಇದನ್ನೂ ಓದಿ: ಸಾಲ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯ ಕತ್ತು ಸೀಳಿದ ಪತಿ: ಜೀವ ಉಳಿಸೆಂದು ಬೇಡಿಕೊಂಡರೂ ಕರಗಲಿಲ್ಲ ಕ್ರೂರಿಯ ಮನ

ಒಟ್ಟಿನಲ್ಲಿ ಎಷ್ಟೋ ಗ್ರಾಮ ಪಂಚಾಯತ್​ಗಳು ಕುಡಿಯುವ ನೀರನ್ನು ಪೂರೈಸಲು ಹಣವಿಲ್ಲದೇ ಒದ್ದಾಡುವ ಪರಿಸ್ಥಿತಿಯಲ್ಲಿರುವಾಗ ಈ ಗ್ರಾಮ ಪಂಚಾಯತ್ ಅಚ್ಚರಿ ಮೂಡಿಸುವಂಥ ಅಭಿವೃದ್ಧಿಗೆ ಮುಂದಾಗಿರುವುದು ನಿಜಕ್ಕೂ ಅಚ್ಚರಿಯೇ ಸರಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *