
ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ‘ಧುರಂಧರ್ 2’ (Dhurandhar 2) ಚಿತ್ರಕ್ಕೆ ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ಸುದೀರ್ಘ ವಿಡಿಯೋ ಹಂಚಿಕೊಂಡಿರುವ ಅವರು, ‘ಇದೊಂದು ಕೇವಲ ಸಿನಿಮಾವಲ್ಲ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತಹ ಅನುಭವ’ ಎಂದು ಬಣ್ಣಿಸಿದ್ದಾರೆ. ಮಾರ್ಚ್ 21ರಂದು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡ ಅನುಪಮ್ ಖೇರ್ (Anupam Kher), ಸಿನಿಮಾ ನೋಡಿದ ತಕ್ಷಣ ನಿರ್ದೇಶಕ ಆದಿತ್ಯ ಧರ್ ಅವರಿಗೆ ಫೋನ್ ಮಾಡಿ ಅಭಿನಂದಿಸಿರುವುದಾಗಿ ತಿಳಿಸಿದ್ದಾರೆ.
‘ಕೆಲವೊಮ್ಮೆ ಪದಗಳು ಸಾಲುವುದಿಲ್ಲ. ಸಿನಿಮಾ ಮುಗಿಸಿ ಹೊರಬಂದಾಗ ನಿಮ್ಮೊಳಗೆ ಒಂದು ಮೌನವಿರುತ್ತದೆ, ಅದು ಎಲ್ಲವನ್ನೂ ಹೇಳುತ್ತದೆ. ಧುರಂಧರ್ ಅಂತಹದ್ದೇ ಒಂದು ಅನುಭವ. ಇದು ನಿಮ್ಮ ಹೃದಯವನ್ನು ತಟ್ಟುತ್ತದೆ’ ಎಂದು ಬರೆದುಕೊಂಡಿದ್ದಾರೆ. ಚಿತ್ರದ ವಿರುದ್ಧ ಕೇಳಿಬರುತ್ತಿರುವ ಪ್ರೊಪಗಾಂಡ ಅಥವಾ ಅತಿರೇಕದ ದೇಶಭಕ್ತಿ ಎಂಬ ಟೀಕೆಗಳ ಬಗ್ಗೆ ಅನುಪಮ್ ಖೇರ್ ಕಿಡಿಕಾರಿದ್ದಾರೆ.
‘ಈ ಚಿತ್ರವನ್ನು ಪ್ರೊಪಗಾಂಡ ಎಂದು ಕರೆಯುವವರ ಬಗ್ಗೆ ನನಗೆ ಕನಿಕರವೆನಿಸುತ್ತದೆ. ಅವರಿಗೆ ನಾಚಿಕೆಯಾಗಬೇಕು. ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೂ ಹೀಗೆಯೇ ಹೇಳಿದ್ದರು. ನಿಮಗೆ ಇಂತಹ ಚಿತ್ರಗಳನ್ನು ಸಹಿಸಲು ಸಾಧ್ಯವಾಗದಿದ್ದರೆ, ನೀವೇ ಹಣ ಹೂಡಿ, ಬರಹಗಾರರನ್ನು ಇಟ್ಟುಕೊಂಡು ಸಿನಿಮಾ ಮಾಡಿ’ ಎಂದು ಅನುಪಮ್ ಖೇರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆಧುನಿಕ ಭಾರತದ ವ್ಯವಸ್ಥೆ ಮತ್ತು ಏಜೆನ್ಸಿಗಳು ಎಷ್ಟು ಸಮರ್ಥವಾಗಿವೆ ಎಂಬುದನ್ನು ಈ ಸಿನಿಮಾ ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
View this post on Instagram
ನಟನೆಯ ಶಾಲೆಯನ್ನು ನಡೆಸುತ್ತಿರುವ ಅನುಪಮ್ ಖೇರ್ ಅವರು ‘ಧುರಂಧರ್ 2’ ಸಿನಿಮಾದಲ್ಲಿನ ರಣವೀರ್ ಸಿಂಗ್ ಅಭಿನಯವನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. ‘ನಾನೊಬ್ಬ ನಟನಾ ಶಿಕ್ಷಕ. ಒಬ್ಬ ನಟನಿಗೆ ನಾನು ಸಲಾಂ ಹೊಡೆಯಬೇಕೆಂದರೆ ಅದಕ್ಕೆ ಬಹಳ ಸಮಯ ಮತ್ತು ಮನವರಿಕೆ ಬೇಕು. ಆದರೆ ರಣವೀರ್, ನಿಮ್ಮ ಬಾಡಿ ಲಾಂಗ್ವೇಜ್, ನಿಮ್ಮ ಒಳಗಿನ ಸಿಟ್ಟು ಮತ್ತು ನೋವು ಅದ್ಭುತವಾಗಿ ಮೂಡಿಬಂದಿದೆ. ಕೆಲವು ದೃಶ್ಯಗಳಲ್ಲಿ ನಿಮ್ಮ ಕಣ್ಣಲ್ಲಿನ ನೋವು ನೋಡಿ ನನ್ನ ಹೃದಯ ಭಾರವಾಯಿತು’ ಎಂದು ಅನುಪಮ್ ಖೇರ್ ಹೊಗಳಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್ 2’ ಸುನಾಮಿ: 3 ದಿನಕ್ಕೆ 300 ಕೋಟಿ ರೂಪಾಯಿ ಮೀರಿದ ಗಳಿಕೆ
‘ಧುರಂಧರ್ 2’ ಸಿನಿಮಾಗೆ ನೆಗೆಟಿವ್ ವಿಮರ್ಶೆಗಳು ಕೂಡ ವ್ಯಕ್ತವಾಗುತ್ತಿದೆ. ಇದು ಬಿಪಿಜೆ ಪಕ್ಷದ ತಪ್ಪುಗಳನ್ನು ಸಮರ್ಥಿಸುವ ಸಿನಿಮಾ ಎಂದು ಅನೇಕರು ಟೀಕೆ ಮಾಡಿದ್ದಾರೆ. ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಮ್ಪಾಲ್, ರಣವೀರ್ ಸಿಂಗ್, ಸಾರಾ ಅರ್ಜುನ್, ರಾಕೇಶ್ ಬೇಡಿ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.