
‘ಧುರಂಧರ್ 2’ (Dhurandhar) ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಬಿಡುಗಡೆ ಆದ ವಾರಕ್ಕೂ ಮುಂಚೆಯೇ 500 ಕೋಟಿಗೂ ಹೆಚ್ಚು ಗಳಿಕೆಯನ್ನು ಭಾರತದಲ್ಲಿ ಮಾಡಿದೆ. ಎಲ್ಲೆಡೆ ಸಿನಿಮಾದ ಶೋಗಳು ಹೌಸ್ಫುಲ್ ಆಗುತ್ತಿವೆ. ಅಲ್ಲು ಅರ್ಜುನ್, ರಾಜಮೌಳಿ, ರಜನೀಕಾಂತ್, ರಾಮ್ ಚರಣ್ ಇನ್ನೂ ಹಲವು ಸೆಲೆಬ್ರಿಟಿಗಳು ‘ಧುರಂಧರ್ 2’ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಸಿನಿಮಾವನ್ನು ಕೊಂಡಾಡಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಂತೂ ಸಿನಿಮಾ ಬಗ್ಗೆ ಪ್ರಶಂಸೆಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಇದೀಗ ‘ಧುರಂಧರ್ 2’ ಸಿನಿಮಾದಿಂದಾಗಿ ಅಮಿತಾಬ್ ಬಚ್ಚನ್ ಅವರ ಸಿನಿಮಾ ನಿಂತು ಹೋಗಿದೆ.
ಅಮಿತಾಬ್ ಬಚ್ಚನ್ ಅವರು ‘ಸರ್ಕಾರ್’ ಹೆಸರಿನ ಸಿನಿಮಾನಲ್ಲಿ ವರ್ಷಗಳ ಹಿಂದೆ ನಟಿಸಿದ್ದರು. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಿತ್ತು. ಎರಡೂ ಭಾಗಗಳನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದರು. ಇತ್ತೀಚೆಗಷ್ಟೆ ರಾಮ್ ಗೋಪಾಲ್ ವರ್ಮಾ ‘ಸರ್ಕಾರ್ 3’ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆದರೆ ‘ಧುರಂಧರ್ 2’ ಸಿನಿಮಾ ನೋಡಿದ ಮೇಲೆ ‘ಸರ್ಕಾರ್ 3’ ಸಿನಿಮಾ ಮಾಡುವ ಯೋಚನೆಯನ್ನೇ ಕೈಬಿಟ್ಟಿದ್ದಾರಂತೆ ವರ್ಮಾ.
ಸಂದರ್ಶನವೊಂದರಲ್ಲಿ ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದು, ‘ಧುರಂಧರ್ 2’ ಸಿನಿಮಾ ಶ್ರೇಷ್ಠವಾದ ಸಿನಿಮಾ ಆಗಿದ್ದು, ಆ ಶ್ರೇಷ್ಠತೆಯನ್ನು ನನ್ನಿಂದ ಮುಟ್ಟಲು ಸಾಧ್ಯವಿಲ್ಲ. ಸಿನಿಮಾ ನಿರ್ಮಾಣದ ಒಂದು ಮಾದರಿಯನ್ನು ‘ಧುರಂಧರ್ 2’ ಸಿನಿಮಾ ಸೆಟ್ ಮಾಡಿದೆ, ಆ ಸ್ಟಾಂಡರ್ಡ್ ಅನ್ನು ಈಗ ನನ್ನಿಂದ ತಲುಪಲು ಸಾಧ್ಯವಿಲ್ಲ, ಹಾಗಾಗಿ ‘ಸರ್ಕಾರ್ 3’ ಸಿನಿಮಾ ನಿರ್ದೇಶಿಸುತ್ತಿಲ್ಲ’ ಎಂದು ವರ್ಮಾ ಹೇಳಿದ್ದಾರೆ.
ಇದನ್ನೂ ಓದಿ:ಬರಲಿದೆಯಾ ‘ಧುರಂಧರ್ 3’? ಚಿತ್ರತಂಡದ ಪ್ರಮುಖ ಸದಸ್ಯ ಹೇಳಿದ್ದೇನು?
ಅದೇ ಸಂದರ್ಶನದಲ್ಲಿ ‘ಧುರಂಧರ್ 2’ ಸಿನಿಮಾದ ಬಗ್ಗೆ ಮಾತನಾಡಿರುವ ವರ್ಮಾ, ‘ಸಾಕಷ್ಟು ಸಿನಿಮಾಗಳು ಹಿಟ್, ಸೂಪರ್ ಹಿಟ್ ಆಗುತ್ತವೆ, ಆದರೆ ಈ ಸಿನಿಮಾ ‘ಪ್ರಭಾವ’, ‘ಪರಿಣಾಮ’ಗಳನ್ನು ಸೃಷ್ಟಿಸಿದೆ. ಇದು ಎಲ್ಲರಿಂದ ಸಾಧ್ಯವಿಲ್ಲ. ಬಾಲಿವುಡ್ಗೆ ಹೇಗೆ ಸಿನಿಮಾ ಮಾಡಬೇಕು ಎಂಬುದನ್ನು ಆದಿತ್ಯ ತೋರಿಸಿಕೊಟ್ಟಿದ್ದಾರೆ’ ಎಂದು ವರ್ಮಾ, ‘ಧುರಂಧರ್ 2’ ಸಿನಿಮಾವನ್ನು ಕೊಂಡಾಡಿದ್ದಾರೆ.
‘ಧುರಂಧರ್ 2’ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರು ರಾಮ್ ಗೋಪಾಲ್ ವರ್ಮಾ ಅವರ ಅಭಿಮಾನಿಯಂತೆ. ವರ್ಮಾ ಅವರ ‘ಸತ್ಯ’ ಮತ್ತು ‘ಕಂಪೆನಿ’ಗಳು ತಮ್ಮ ಮೇಲೆ ಪ್ರಭಾವ ಬೀರಿರುವುದಾಗಿ ಆದಿತ್ಯ ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ