ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ಯುವತಿಯೊಂದಿಗಿನ ಫೋಟೋ ಕಳುಹಿಸಿದ ಪ್ರೇಮಿ; ಮುಂದಾಗಿದ್ದು ದುರಂತ

ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ಯುವತಿಯೊಂದಿಗಿನ ಫೋಟೋ ಕಳುಹಿಸಿದ ಪ್ರೇಮಿ; ಮುಂದಾಗಿದ್ದು ದುರಂತ

ವಿಜಯಪುರ, ಏಪ್ರಿಲ್​​ 13: ಹದಿಹರೆಯದ ಪ್ರೇಮ ಪ್ರಕರಣಗಳು ಕೆಲವೊಮ್ಮೆ ಜೀವಕ್ಕೇ ಕಂಟಕವಾಗಿಬಿಡುತ್ತವೆ. ಪ್ರೀತಿಸಿದ ಹುಡುಗ ಅಥವಾ ಹುಡುಗಿ ಸಿಗದ ಕಾರಣಕ್ಕೆ ಮನನೊಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ತೆಗೆದುಕೊಂಡು ಬಲಿಯಾದವರ ಸಂಖ್ಯೆ ದೊಡ್ಡದ್ದೇ ಇದೆ. ಆದರೆ ವಿಜಯಪುರದಲ್ಲಿ ಇದಕ್ಕೆ ತುಸು ಭಿನ್ನವೆಂಬಂತಹ ಪ್ರಕರಣವೊಂದು ನಡೆದಿದೆ. ತಾನು ಪ್ರೀತಿಸಿದ್ದ ಯುವತಿಗೆ ಮತ್ತೊಬ್ಬನ ಜೊತೆ ವಿವಾಹ ನಿಶ್ಚಯವಾಗಿದ್ದಕ್ಕೆ ರೊಚ್ಚಿಗೆದ್ದ ಯುವಕ ಮಾಡಿದ ಕೆಲಸ, ಮದುವೆಯ ಕನಸು ಕಂಡಿದ್ದ ಯುವತಿಯ ಪ್ರಾಣವನ್ನೇ ತೆಗೆದಿದೆ.

ಹೌದು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ 22 ವರ್ಷದ ಯುವತಿ ಜಯಶ್ರೀ ಬಿರಾದಾರ್​​ಗೆ ಮದುವೆ ಮಾಡಲು ಮುಂದಾಗಿದ್ದ ಕುಟುಂಬಸ್ಥರು, ಈ ಸಂಬಂಧ ನಿಶ್ಚಿತಾರ್ಥವನ್ನೂ ನಡೆಸಿದ್ದರು. ಆದರೆ ಜಯಶ್ರೀ ಈ ಮೊದಲು ಶ್ರೀಶೈಲ್ ಬಡಾನೂರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಈಕೆಯ ವಿವಾಹದ ವಿಷಯ ತಿಳಿದ ಆತ ವ್ಯತಿರಿಕ್ತವಾಗಿ ವರ್ತಿಸಿದ್ದಾನೆ. ಜಯಶ್ರೀ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕುಟುಂಬಸ್ಥರಿಗೆ ಆಕೆ ತನ್ನ ಜೊತೆಗಿರುವ ಫೋಟೋಗಳನ್ನು ಶ್ರೀಶೈಲ್ ಕಳುಹಿಸಿದ್ದಾನೆ. ಅವನ್ನು ನೋಡಿರುವ ಯುವಕನ ಕಡೆಯವರು ಏಪ್ರಿಲ್​​ 27ರಂದು ನಿಗದಿಯಾಗಿದ್ದ ಮದುವೆಯನ್ನು ಕ್ಯಾನ್ಸಲ್​​ ಮಾಡಿದ್ದಾರೆ. ಘಟನೆಯಿಂದ ತೀವ್ರವಾಗಿ ನೊಂದ ಜಯಶ್ರೀ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಸ್ವಾಮೀಜಿ ಬೆತ್ತಲೆ ವೀಡಿಯೋ ಕಾಲ್ ಕೇಸಿಗೆ ಸ್ಫೋಟಕ ಟ್ವಿಸ್ಟ್​; ಆರೋಪಿಸಿದ ಮಹಿಳೆಯೇ ನಾಪತ್ತೆ

ಪ್ರೇಮ ಪ್ರಕರಣ ಹೊರ ಬಂದ ಕಾರಣ ಅವಮಾನವಾಗಿ ಬಂದಾಳ ಗ್ರಾಮದ ಮದಿನಾ ಮಸೀದಿ ಪಕ್ಕದ ಬಾವಿಗೆ ಜಯಶ್ರೀ ಹಾರಿದ್ದಾಳೆ. ನಿನ್ನೆ ಸಾಯಂಕಾಲ ಘಟನೆ ನಡೆದಿದ್ದು, ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮನೆ ಮಗಳ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಡಬಾರದ ಕೃತ್ಯ ಮಾಡಿರುವ ಪಾಗಲ್ ಪ್ರೇಮಿ ಶ್ರೀಶೈಲ್ ಬಡಾನೂರ್ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಘಟನೆ ಸಂಬಂಧ ಸಿಂದಗಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *