ನೈಸ್ ರಸ್ತೆಯಲ್ಲಿ ದಿನಕ್ಕೆ 10 ಕೋಟಿ ರೂ. ಟೋಲ್ ಸಂಗ್ರಹಿಸಿ ಮಜಾ ಮಾಡ್ತಾರೆ, ಸೌಕರ್ಯ ಕೊಡಲ್ಲ: ಶಾಸಕ ಸೋಮಶೇಖರ್ ಆಕ್ರೋಶ

ನೈಸ್ ರಸ್ತೆಯಲ್ಲಿ ದಿನಕ್ಕೆ 10 ಕೋಟಿ ರೂ. ಟೋಲ್ ಸಂಗ್ರಹಿಸಿ ಮಜಾ ಮಾಡ್ತಾರೆ, ಸೌಕರ್ಯ ಕೊಡಲ್ಲ: ಶಾಸಕ ಸೋಮಶೇಖರ್ ಆಕ್ರೋಶ

ಬೆಂಗಳೂರು, ಮಾರ್ಚ್​ 16: ನೈಸ್ ರಸ್ತೆಯ (NICE Road) ನಿರ್ವಹಣೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬಜೆಟ್ ಅಧಿವೇಶನದಲ್ಲಿ ಶಾಸಕ ಎಸ್​ಟಿ ಸೋಮಶೇಖರ್ (ST Somashekhar) ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹೊಸೂರು ರಸ್ತೆಯಿಂದ ಮಾಗಡಿ ರಸ್ತೆ ವರೆಗೆ ನೈಸ್ ರಸ್ತೆಯನ್ನು ಸರ್ಕಾರ ತಕ್ಷಣವೇ ವಶಕ್ಕೆ ಪಡೆಯಬೇಕು ಎಂದು ಅವರು ಸದನದಲ್ಲಿ ಆಗ್ರಹಿಸಿದರು. ಈ ಹಿಂದೆ ಇದೇ ವಿಷಯದ ಕುರಿತು ಪ್ರಶ್ನೆ ಎತ್ತಿದಾಗ ತನಿಖೆಗೆ ಆದೇಶ ನೀಡಲಾಗಿದ್ದರೂ, ನೈಸ್ ರಸ್ತೆಯ ಸೇತುವೆಗಳ ಸ್ಥಿತಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು 30–35 ವರ್ಷಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ನೀಡಿದ ಭೂಮಾಲೀಕರಿಗೆ ಇನ್ನೂ ಪರಿಹಾರ ನಿವೇಶನಗಳನ್ನು ನೀಡಲಾಗಿಲ್ಲ. ನೈಸ್ ಕಂಪನಿಯ ನಿರ್ವಹಣೆ ಹಾಗೂ ವರ್ತನೆ ಸರಿಯಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದು ಅವರು ಹೇಳಿದರು.

ನೈಸ್ ರಸ್ತೆಯಲ್ಲಿ ಪ್ರತಿದಿನ ಸುಮಾರು 10 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗುತ್ತಿದೆ. ಇಷ್ಟು ದೊಡ್ಡ ಆದಾಯವಿದ್ದರೂ ರಸ್ತೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ವಿಶೇಷವಾಗಿ 25–30 ವರ್ಷಗಳ ಹಿಂದೆ ನಿರ್ಮಿಸಲಾದ ಕೆಲವು ಸೇತುವೆಗಳು ದುಸ್ಥಿತಿಯಲ್ಲಿದ್ದು, ಸ್ಕೂಟರ್ ಸಂಚಾರಕ್ಕೂ ಯೋಗ್ಯವಾಗಿಲ್ಲ. ತಮ್ಮ ಕ್ಷೇತ್ರದಲ್ಲಿ ಮಾತ್ರವೇ ಎಂಟು ಸೇತುವೆಗಳು ಅಪಾಯಕರ ಸ್ಥಿತಿಯಲ್ಲಿ ಇರುವುದಾಗಿ ಸೋಮಶೇಖರ್ ಹೇಳಿದರು.

ಸರ್ಕಾರದ ಸೂಚನೆಗಳನ್ನು ಪಾಲಿಸದ ನೈಸ್: ಸೋಮಶೇಖರ್ ಆರೋಪ

ಈ ಕುರಿತು ನೈಸ್ ಕಂಪನಿ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಾಜಿ ಪಿಡಬ್ಲ್ಯೂಡಿ ಸಚಿವ ಹೆಚ್​​ಸಿ ಅವರ ಅವಧಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಸದಸ್ಯರಾಗಿದ್ದ ಡಿಕೆ ಜಯಚಂದ್ರ ಸೇರಿದಂತೆ ಹಲವು ಸದಸ್ಯರು ಸ್ಥಳ ಪರಿಶೀಲನೆ ನಡೆಸಿ ಅನೇಕ ಸಮಸ್ಯೆಗಳನ್ನು ಪತ್ತೆಹಚ್ಚಿದ್ದರು. ಆದರೂ ನೈಸ್ ಕಂಪನಿ ಸರ್ಕಾರ ಅಥವಾ ಸದನದ ಸೂಚನೆಗಳನ್ನು ಪಾಲಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

3 ದಶಕಗಳಿಂದ ರೈತರಿಗೆ ಸಂಕಷ್ಟ

ರಸ್ತೆ ಪಕ್ಕದಲ್ಲಿರುವ ಸುಮಾರು 1,700 ಎಕರೆ ಭೂಮಿಯಲ್ಲಿ ಲೇಔಟ್ ನಿರ್ಮಾಣ ಮಾಡುವ ವಿಚಾರವೂ ನ್ಯಾಯಾಲಯದಲ್ಲಿದೆ. 35 ವರ್ಷಗಳಾದರೂ ಭೂಮಾಲೀಕರಿಗೆ ಹಣ ನೀಡಲಾಗಿಲ್ಲ ಹಾಗೂ ಲೇಔಟ್ ಅಭಿವೃದ್ಧಿಯೂ ಆಗಿಲ್ಲ. ಇದರಿಂದ ಕಳೆದ ಮೂರು ದಶಕಗಳಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸೋಮಶೇಖರ್ ಗಮನ ಸೆಳೆದರು.

ಎಸ್​​ಟಿ ಸೋಮಶೇಖರ್ ಮಾತಿನ ವಿಡಿಯೋ


ಬಿಜೆಪಿ ಸರ್ಕಾರದ ಅವಧಿಯಲ್ಲಾಗಲಿ ಅಥವಾ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾಗಲಿ ಈ ಕಂಪನಿಯ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸರ್ಕಾರ ನೀಡಿದ 30 ವರ್ಷದ ಗುತ್ತಿಗೆ ರದ್ದುಪಡಿಸಿ ರಸ್ತೆ ವಶಕ್ಕೆ ಪಡೆದುಕೊಂಡರೆ ಮಾತ್ರ ಸೇತುವೆಗಳ ದುರಸ್ತಿ ಹಾಗೂ ಇತರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಸೋಮಶೇಖರ್ ಮಾತಿಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ನೈಸ್ ಸಂಸ್ಥೆಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೆ ಸಂಸ್ಥೆಯಿಂದ ಸರ್ಕಾರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​: ದ್ವಿಚಕ್ರ ವಾಹನಗಳಿಗೆ ನೈಸ್​​ ರಸ್ತೆ ಶೀಘ್ರ ಟೋಲ್​​ ಮುಕ್ತ?

ಈ ವಿಚಾರವನ್ನು ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗಿದೆ. ಉಪಸಮಿತಿ ನೀಡುವ ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *