ಪ್ರಭಾಸ್ (Prabhas) ಖ್ಯಾತ ನಟನಾಗಿರುವ ಜೊತೆಗೆ ತಮ್ಮ ಅತಿಥಿ ಸತ್ಕಾರದಿಂದಲೂ ಅವರು ಬಲು ಜನಪ್ರಿಯ. ಪ್ರಭಾಸ್ ಜೊತೆಗೆ ನಟಿಸಿದವರೆಲ್ಲ ಪ್ರಭಾಸ್ ಅವರ ಸರಳತೆ, ವಿನಯ ಸ್ವಭಾವದ ಜೊತೆಗೆ ಪ್ರಭಾಸ್ ಅವರ ಅತಿಥಿ ಸತ್ಕಾರವನ್ನು ಮನಸಾರೆ ಹೊಗಳಿದ್ದಾರೆ. ಅದರಲ್ಲೂ ಪ್ರಭಾಸ್ ಜೊತೆಗೆ ಕೆಲಸ ಮಾಡಿದರೆ ಅವರು ಭರಪೂರ ಊಟ ಹಾಕಿಸುತ್ತಾರೆ. ಅದರಲ್ಲೂ ಅವರು ನಾನಾ ಬಗೆಯ ಭಕ್ಷ್ಯ ಭೋಜನಗಳನ್ನು ಉಣಬಡಿಸುತ್ತಾರೆ ಎಂದು ಹಲವಾರು ನಟ-ನಟಿಯರು ಹೇಳಿದ್ದಾರೆ. ಸ್ವತಃ ಪ್ರಭಾಸ್ಗೆ ಸಹ ಊಟವೆಂದರೆ ಮಹಾ ಇಷ್ಟ. ಇದೀಗ ಅವರೇ ತಮ್ಮ ಆಹಾರ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
ತೆಲುಗು ಹೊಸ ಸಿನಿಮಾ ‘ಕ್ಯೂಟ್ ಕಪಲ್’ ಪ್ರಚಾರದಲ್ಲಿ ಪ್ರಭಾಸ್ ಭಾಗಿ ಆಗಿದ್ದು, ಈ ವೇಳೆ ಆ ಚಿತ್ರದ ನಾಯಕ ಪ್ರಭಾಸ್ ಕುರಿತು, ‘ಸರ್, ನೀವು ಬೇರೆ ರಾಜ್ಯದಿಂದ ಸಹ ಊಟವನ್ನು ಸ್ವಿಗ್ಗಿ ಮಾಡಿಸಿಕೊಳ್ಳುತ್ತೀರಂತೆ ನಿಜವೇ?’ ಎಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿರುವ ಪ್ರಭಾಸ್, ‘ರಾಜಮೌಳಿ ಸೇರಿದಂತೆ ಎಲ್ಲರಿಗೂ ನನ್ನ ಊಟದ ಮೇಲೆ ಕಣ್ಣು’ ಎಂದ ಪ್ರಭಾಸ್, ‘ಹೌದು ನಾನು ಕೆಲವು ಬಾರಿ ಬೇರೆ ರಾಜ್ಯದಿಂದ ಊಟ ತರಿಸಿಕೊಂಡಿದ್ದೂ ಸಹ ಇದೆ’ ಎಂದಿದ್ದಾರೆ.
ಬಳಿಕ ಅದರ ಬಗ್ಗೆ ವಿವರವಾಗಿ ಹೇಳಿದ ಪ್ರಭಾಸ್, ‘ಆದಿಪುರುಷ್’ ಸಿನಿಮಾ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿತ್ತು. ಆ ದಿನದ ಚಿತ್ರೀಕರಣವೆಲ್ಲ ಮುಗಿಯಿತು, ಅಂದು ನನಗೂ ಸಹ ಚೀಟ್ ಡೇ ಆಗಿತ್ತು. ನಾನು ನಿರ್ದೇಶಕ ಓಂ ರಾವತ್ ಇನ್ನೂ ಕೆಲವರೆಲ್ಲ ಕೂತಿದ್ದರು. ಆಗ ನಾನು, ‘ಇಂದು ಬಾಂಬೆ ಊಟ ಬೇಡ, ಚೆನ್ನೈ ಊಟ ತಿನ್ನೋಣ, ನಾನೇ ತರಿಸುತ್ತೇನೆ’ ಎಂದೆ ಸರಿ ಎಂದು ಒಪ್ಪಿಕೊಂಡರು. ಆದರೆ ಎರಡು ಗಂಟೆಗಳಾದರೂ ಊಟ ಬಾರದೆ ಇರುವುದು ನೋಡಿ, ಎಲ್ಲಿ ಊಟ ಇನ್ನೂ ಬಂದಿಲ್ಲ ಎಂದು ಓಂ ರಾವತ್ ಕೇಳಿದರು. ಆಗ ನಾನು, ‘ಊಟ ಬರುತ್ತಿರುವುದು ಚೆನ್ನೈನಿಂದ ಅದಕ್ಕಾಗಿ ತಡ ಆಗುತ್ತಿದೆ’ ಎಂದೆ. ನನ್ನ ಮಾತು ಕೇಳಿ ಓಂ ರಾವತ್ ಶಾಕ್ ಆಗಿಬಿಟ್ಟರು’ ಎಂದು ಪ್ರಭಾಸ್ ವಿವರಿಸಿದ್ದಾರೆ.
ಇದನ್ನೂ ಓದಿ:ಶೂಟಿಂಗ್ ವೇಳೆ ಪ್ರಭಾಸ್ಗೆ ಗಾಯ; ಇದರಿಂದಲೂ ಲಾಭ ಪಡೆದ ಫ್ಯಾನ್ಸ್
ಪ್ರಭಾಸ್ ಅವರು ವ್ಯಕ್ತಿಯೊಬ್ಬನಿಗೆ ಹೇಳಿ, ಚೆನ್ನೈನಿಂದ ತಮಗೆ ಇಷ್ಟವಾದ ಆಹಾರಗಳನ್ನು ವಿಮಾನದಲ್ಲಿ ಮುಂಬೈಗೆ ತರಿಸಿಕೊಂಡಿದ್ದರು. ಪ್ರಭಾಸ್ ಅವರಿಗಾಗಿ ವ್ಯಕ್ತಿಯೊಬ್ಬ ಚೆನ್ನೈನಲ್ಲಿ ಅವರಿಗೆ ಬೇಕಾದ ಆಹಾರಗಳನ್ನೆಲ್ಲ ಆಯಾ ಹೋಟೆಲ್ಗಳಿಂದ ತೆಗೆದುಕೊಂಡು ಅವನ್ನು ಬಿಸಿ ಆರದ ದೊಡ್ಡ ಬಾಕ್ಸ್ ಒಂದಕ್ಕೆ ಹಾಕಿಕೊಂಡು ಅದನ್ನು ವಿಮಾನದಲ್ಲಿ ಮುಂಬೈಗೆ ತೆಗೆದುಕೊಂಡು ಬಂದಿದ್ದನಂತೆ.
ಇನ್ನು ಅದೇ ಸಂದರ್ಶನದಲ್ಲಿ ಪ್ರಭಾಸ್ ತಮ್ಮಿಷ್ಟದ ‘ಪುನುಗುಲು’ ಕುರಿತು ಸಹ ಮಾತನಾಡಿದ್ದಾರೆ. ಅದರಲ್ಲೂ ಅವರಿಗೆ ವಿಜಯವಾಡ ನಗರದಲ್ಲಿ ಮಾಡುವ ಪುನುಗುಲು ಎಂದರೆ ಬಹಳ ಪ್ರೀತಿಯಂತೆ. ಅಷ್ಟು ಕ್ರಿಸ್ಪಿ ಮತ್ತು ರುಚಿಯಾದ ಪುನುಗುಲು ನಾನೆಂದೂ ತಿಂದಿಲ್ಲ. ನೆನಪಿಸಿಕೊಂಡರೆ ನನಗೆ ಬಾಯಿಯಲ್ಲಿ ನೀರು ಬರುತ್ತದೆ ಎಂದಿದ್ದಾರೆ ಪ್ರಭಾಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ