
ಚಿಕ್ಕಮಗಳೂರು, (ಏಪ್ರಿಲ್ 02): ಕರ್ನಾಟಕದ ನೆಚ್ಚಿನ ಪ್ರವಾಸಿ ತಾಣವಾದ ಕಾಫಿನಾಡು ಚಿಕ್ಕಮಗಳೂರಿನ (Chikmagalur) ಪ್ರಸಿದ್ಧ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹೊಸ ನಿಯಮ ಜಾರಿ ಮಾಡಲಾಗಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ವಿಶ್ವ ಪ್ರಸಿದ್ಧ ಎತ್ತರದ ಶಿಖರ ಮುಳ್ಳಯ್ಯನಗಿರಿ (Mullayanagiri) ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹೊಸ ರೂಲ್ಸ್ ಮಾಡಲಾಗಿದೆ. ಹೌದು…ಮುಳ್ಳಯ್ಯನಗಿರಿಯಲ್ಲಿ ಕಾಲ ಕಳೆಯಲು ಪ್ರವಾಸಿಗರಿಗೆ ಮೂರು ಗಂಟೆಗಳ ಸಮಯ ನಿಗದಿ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಾಗೇ ಮುಳ್ಳಯ್ಯನಗಿರಿ ,ಸೀತಾಳಯ್ಯನಗಿರಿ ಭಾಗದಲ್ಲಿ ಅಡುಗೆ ಮಾಡುವುದು ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ.
ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ತೆರಳದಂತೆ ಪ್ರವಾಸೋದ್ಯಮ ಇಲಾಖೆ ಸೂಚನ ಫಲಕಗಳ ಅಳವಡಿಸಿದೆ. ಇನ್ನು ಪ್ರವಾಸಿಗರು ಝರಿ ಫಾಲ್ಸ್ ಗೆ ಕಾಲ್ನಡಿಗೆಯಲ್ಲಿ ತೆರಳಲು ಅನುಮತಿ ನೀಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ನಾಗರಾಜ್ ವರು ಆದೇಶ ಹೊರಡಿಸಿದ್ದಾರೆ.
ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರು
ಕರ್ನಾಟಕದಲ್ಲಿ ಪ್ರಕೃತಿ ಸೌಂದರ್ಯದೊಂದಿಗೆ ಪ್ರವಾಸಿ ತಾಣಗಳನ್ನು ನೋಡಬೇಕೆಂದರೆ ಚಿಕ್ಕಮಗಳೂರಿಗೆ ಹೋಗಬೇಕು. ಬೆಂಗಳೂರಿನಿಂದ ಚಿಕ್ಕಮಗಳೂರು ಸುಮಾರು 250 ರಿಂದ 265 ಕಿ.ಮೀ ದೂರದಲ್ಲಿದ್ದು, ಚಿಕ್ಕಮಗಳೂರಿನಲ್ಲಿ ನೋಡಬೇಕಾದ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮಾಣಿಕ್ಯಧಾರ ಜಲಪಾತ, ಕಲ್ಹಟ್ಟಿ ಜಲಪಾತ, ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್ಗಿರಿ, ಕೆಮ್ಮಣ್ಣುಗುಂಡಿ, ಭದ್ರಾ ವನ್ಯಜೀವಿ ಧಾಮ, ಕಾಫಿ ವಸ್ತು ಸಂಗ್ರಹಾಲಯ, ಕದಂಬಿ ಜಲಪಾತ, ಝಡ್ ಪಾಯಿಂಟ್ ಸೇರಿದಂತೆ ಇನ್ನು ಹಲವಾರು ಪ್ರವಾಸಿ ತಾಣಗಳು ಪ್ರವಾಸಿಗರ ಕಣ್ಮನಸೆಳೆಯುವಂತಿವೆ.
ಚಳಿಗಾಲದಲ್ಲಿ ಜಿನುಗುವ ಮಂಜು ನೋಡುವುದೇ ಒಂದು ಮಜಾ. ಇನ್ನು ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಅಲ್ಲಿ ಹಚ್ಚ ಹಸಿರಿನಿಂದ ಕೂಡಿರುತ್ತೆ. ಕಣ್ಣು ಹಾಯಿಸುವ ಕಡೆಗಳಲ್ಲಿ ವಿವಿಧ ಬಗೆಯ ಹೂವುಗಳು ಗಿಡಿ ಮರಗಳ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.
ನೀವೇನಾದರೂ ಚಿಕ್ಕಮಗಳೂರು ಟ್ರಿಪ್ ಹೋಗುವ ಪ್ಲ್ಯಾನ್ ಮಾಡಿದರೆ ಮೇಲೆ ತಿಳಿಸಲಾದ ನಿಯಮಗಳನ್ನು ತಿಳಿದುಕೊಂಡು ಹೋಗಿ.