
ನವದೆಹಲಿ, ಮಾರ್ಚ್ 9: ಬಿಜೆಪಿಯಿಂದ ಉಚ್ಚಾಟನೆಯಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಬಗ್ಗೆ ಸಮವಾರ ಮಹತ್ವದ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿಯ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಬಂದಿಲ್ಲ. ಪುತ್ರನ ಮದುವೆಯ ಆಹ್ವಾನ ನೀಡಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯ್ಷ ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ ಅವರಂತಹ ಕಡು ಭ್ರಷ್ಟ ಕುಟುಂಬ ಬಿಜೆಪಿಯಲ್ಲಿ ಇರುವವರೆಗೂ ಪಕ್ಷ ಸೇರಲು ಇಷ್ಟಪಡುವುದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಬಿಜೆಪಿ ಕರೆಯುವ ನಿರೀಕ್ಷೆಯಲ್ಲಿ ಇರಲು ತಾನು ಹುಚ್ಚನಲ್ಲ ಎಂದು ಹೇಳಿದ ಅವರು, ಪಶ್ಚಿಮ ಬಂಗಾಳ, ಬಿಹಾರ್ ಅಥವಾ ಉತ್ತರ ಪ್ರದೇಶ ಚುನಾವಣೆಗಳ ನಂತರ ಬಿಜೆಪಿ ಕರೆದರೂ ನಿರ್ಧಾರ ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಾದೇಶಿಕ ಪಕ್ಷವನ್ನು ಕಟ್ಟುವುದಾಗಿ ಘೋಷಿಸಿದ ಅವರು, ಸೂಕ್ತ ಸಮಯದಲ್ಲಿ ಪಕ್ಷ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅದು ಜೆಸಿಬಿ ಚಿಹ್ನೆಯಡಿ ಕಾರ್ಯನಿರ್ವಹಿಸಲಿದೆಯೇ ಎಂಬ ಪ್ರಶ್ನೆಗೆ, ನೋಡೋಣ ಎಂದು ಉತ್ತರಿಸಿದ್ದಾರೆ. ತಮ್ಮದೇ ಪಕ್ಷ ರಚನೆಯಾಗಲಿದ್ದು, ಮುಂದಿನ ಬಾರಿ ನಾವೇ ಅಧಿಕಾರ ಹಿಡಿಯಲಿದ್ದೇವೆ. ಮುಖ್ಯಮಂತ್ರಿಯಾಗಲಿದ್ದೇನೆ ಎಂದು ಯತ್ನಾಳ್ ದೃಢವಾಗಿ ಹೇಳಿದ್ದಾರೆ.