ಬದುಕಿದ್ದ ವ್ಯಕ್ತಿ ಸತ್ತನೆಂದು ತಿಳಿದು ಸಂಬಂಧಿಕರ ಯಡವಟ್ಟು; ಜೀವಂತವಾಗಿದ್ದಾಗಲೇ ನಡೀತಿತ್ತು ಅಂತ್ಯ ಸಂಸ್ಕಾರ!

ಬದುಕಿದ್ದ ವ್ಯಕ್ತಿ ಸತ್ತನೆಂದು ತಿಳಿದು ಸಂಬಂಧಿಕರ ಯಡವಟ್ಟು; ಜೀವಂತವಾಗಿದ್ದಾಗಲೇ ನಡೀತಿತ್ತು ಅಂತ್ಯ ಸಂಸ್ಕಾರ!

ಬಾಗಲಕೋಟೆ, ಮಾರ್ಚ್​ 06: ಜಿಲ್ಲೆಯ ಜಮಖಂಡಿ (Bagalakot) ಪಟ್ಟಣದ ಮೋಮಿನ್ ಗಲ್ಲಿಯಲ್ಲಿ ಬದುಕಿದ್ದ ವ್ಯಕ್ತಿಯನ್ನು ಸತ್ತನೆಂದು ಭಾವಿಸಿ ಅಂತ್ಯ ಸಂಸ್ಕಾರಕ್ಕೆ ಕರೆದೊಯ್ದ ಘಟನೆ ನಡೆದಿದೆ. ಊರಿಗೆ ಕರೆತರುತ್ತಿದ್ದ ವ್ಯಕ್ತಿಯಲ್ಲಿ ಮಾರ್ಗ ಮಧ್ಯೆ ಮತ್ತೆ ಉಸಿರಾಟ ಕಂಡುಬಂದಿದ್ದು, ಸಂಬಂಧಿಕರು ಗಲಿಬಿಲಿಗೊಂಡಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆ ಜಮಖಂಡಿ ಸರ್ಕಾರಿ ಆಸ್ಪತ್ರೆ ಬಳಿ ಸಾವಿರಾರು ಜನರು ರಾತ್ರಿ ವೇಳೆ ಜಮಾಯಿಸಿದ್ದರು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿ!

ಮೋಮಿನ್ ಗಲ್ಲಿಯ ನಿವಾಸಿ ಹಾಜಿ ಮುಬಾರಕ್ ಅವಟಿ (65) ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರಿಗೆ ಹೃದಯಾಘಾತವೂ ಆಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಾದ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಮೇಲೆ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರು ಅವರ ಸ್ಥಿತಿ ಗಂಭೀರವಾಗಿದ್ದು ಬದುಕುವ ಸಾಧ್ಯತೆ ಕಡಿಮೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ವೈದ್ಯರ ಸಲಹೆಗೆ ವಿರುದ್ಧವಾಗಿ ಮುಬಾರಕ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಊರಿಗೆ ಕರೆತರಲು ನಿರ್ಧರಿಸಿದರು. ವೆಂಟಿಲೇಟರ್ ತೆಗೆದ ಬಳಿಕ ಉಸಿರಾಟ ಕಾಣಿಸದ ಹಿನ್ನೆಲೆ ಮುಬಾರಕ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಭಾವಿಸಿ ಅಂತ್ಯಸಂಸ್ಕಾರಕ್ಕೆ ಜಮಖಂಡಿಗೆ ಕರೆತರುತ್ತಿದ್ದರು. ಆದರೆ ಲೋಕಾಪುರ ಸಮೀಪ ರಸ್ತೆಯ ಹಂಪ್ಸ್ ಬಳಿ ವಾಹನ ದಡಕಿದಾಗ ಮುಬಾರಕ್ ಅವಟಿ ಮತ್ತೆ ಉಸಿರಾಡಿದಂತೆ ಕಂಡುಬಂದಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಅವರನ್ನು ಜಮಖಂಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.

ಇದನ್ನೂ ಓದಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ! ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

ವೈದ್ಯರು ಹೇಳಿದ್ದೇನು?

ಜಮಖಂಡಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಕೃಷ್ಣಾ ಬಣ್ಣದ ಅವರು ಈ ಕುರಿತು ಮಾಹಿತಿ ನೀಡಿ, ರಾತ್ರಿ ಸುಮಾರು 7.30 ರಿಂದ 8 ಗಂಟೆ ವೇಳೆಗೆ ಮುಬಾರಕ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅವರ ಬಳಿ ಇದ್ದ ಕೇಸ್ ಪೇಪರ್‌ಗಳನ್ನು ಪರಿಶೀಲಿಸಿದಾಗ ಬೆಳಗಾವಿಯ ಆಸ್ಪತ್ರೆ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಎಲ್ಲಿಯೂ ಉಲ್ಲೇಖ ಮಾಡಿರಲಿಲ್ಲ. ಮುಬಾರಕ್ ಅವರಿಗೆ ಕಿಡ್ನಿ ಫೇಲ್ಯೂರ್ ಪರಿಣಾಮವಾಗಿ ಹೃದಯಾಘಾತವಾಗಿತ್ತು.

ವೆಂಟಿಲೇಟರ್ ತೆಗೆದ ಬಳಿಕ ಉಸಿರಾಟ ಕಾಣಿಸದ ಕಾರಣ ಸಂಬಂಧಿಕರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಮನೆಗೆ ಕರೆತರುತ್ತಿದ್ದರು. ಮಾರ್ಗ ಮಧ್ಯೆ ಹಂಪ್ಸ್ ಬಳಿ ಮತ್ತೆ ಉಸಿರಾಟ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ ಎಂದು ವೈದ್ಯರು ವಿವರಿಸಿದರು. ಜಮಖಂಡಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮುಬಾರಕ್ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *