ಬಾಗಲಕೋಟೆ, ಫೆ.26: ಜಿಲ್ಲೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆದಿರುವ ಘಟನೆಯ ಬಗ್ಗೆ ಅಕ್ರೋಶದ ವ್ಯಕ್ತಪಡಿಸಿರುವ ಮಾಜಿ ಸಚಿವ ಹಾಗೂ ಸಂಸದ ಬಿ. ಶ್ರೀರಾಮುಲು, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಕಳೆದ ಫೆಬ್ರವರಿ 19 ರಂದು ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಸಾಗುತ್ತಿದ್ದಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಮೆರವಣಿಗೆಯ ಮೇಲೆ ಚಪ್ಪಲಿ ಎಸೆಯುವ ಮೂಲಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದು ಕೇವಲ ಸ್ಥಳೀಯ ಕಿಡಿಗೇಡಿತನವಲ್ಲ, ಇದರ ಹಿಂದೆ ದೊಡ್ಡ ಸಂಚು ಇರುವ ಸಾಧ್ಯತೆ ಇದೆ. ಹೀಗಾಗಿ ಸತ್ಯಾಸತ್ಯತೆ ಹೊರಬರಲು ಎನ್ಐಎ ತನಿಖೆ ಅಗತ್ಯ ಎಂದು ಅವರು ಹೇಳಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಗಳು ಸೇರಿದಂತೆ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಮೆರವಣಿಗೆ ಮೇಲೆ ನಡೆಯುತ್ತಿರುವ ದಾಳಿಗಳ ಮಾದರಿಯಲ್ಲೇ ಈ ಘಟನೆಯೂ ನಡೆದಿದೆ. ಇಂತಹ ಕೃತ್ಯಗಳು ಮರುಕಳಿಸದಂತೆ ಕಠಿಣ ಕ್ರಮಕ್ಕೆ ಶ್ರೀರಾಮುಲು ಒತ್ತಾಯಿಸಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದ್ದು, ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ. ಇನ್ನು ಇದಕ್ಕೂ ಮುನ್ನ ಕೆಲ ಮುಸ್ಲಿಂ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಾಕಾರಿ ವಿಡಿಯೋ ಹರಿಬಿಟ್ಟಿದ್ದು, ವಿವಾದಕ್ಕೆ ಗುರಿಯಾಗಿದೆ. ‘15 ನಿಮಿಷ ಪೊಲೀಸರು ಸುಮ್ಮನಿರಲಿ, ಇಸ್ಲಾಂ ಪವರ್ ತೋರಿಸುತ್ತೇವೆ’ ಎಂಬ ಅರ್ಥದ ಹೇಳಿಕೆಯನ್ನು ಪೋಸ್ಟ್ನಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ಬಾಗಲಕೋಟೆ: ಕಲ್ಲು ತೂರಾಟದ ಕಾವು ಆರುವ ಮುನ್ನವೇ ಜಾಲತಾಣದಲ್ಲಿ ಮುಸ್ಲಿಂ ಯುವಕರಿಂದ ವಿವಾದಾತ್ಮಕ ಪೋಸ್ಟ್
ಕಲ್ಲು ತೂರಾಟ ಖಂಡಿಸಿ ಇಂದು ‘ಬೃಹತ್ ಪ್ರತಿಭಟನೆ’ – ನಗರದಾದ್ಯಂತ ಬಿಗಿ ಭದ್ರತೆ:
ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಪಂಕಾ ಮಸೀದಿ ಬಳಿ ನಡೆದ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆತ ಪ್ರಕರಣ ಈಗ ಜಿಲ್ಲೆಯಲ್ಲಿ ಕಿಚ್ಚು ಹಚ್ಚಿದೆ. ಈ ಘಟನೆಯನ್ನು ಖಂಡಿಸಿ ಇಂದು ಹಿಂದೂಪರ ಸಂಘಟನೆಗಳು ಬಾಗಲಕೋಟೆ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ. ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 3,000 ರಿಂದ 4,000 ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಪ್ರತಿಭಟನೆ ಮೂಲಕ ಪಂಕಾ ಮಸೀದಿ ಅಧ್ಯಕ್ಷ ಮತ್ತು ಕಮಿಟಿ ಸದಸ್ಯರ ತಕ್ಷಣದ ಬಂಧನ ಮಾಡಬೇಕು ಎಂಬ ಬೇಡಿಕೆಯನ್ನು ಇಡಲಾಗುವುದು. ಹಾಗೂ ಕಲ್ಲು ಮತ್ತು ಚಪ್ಪಲಿ ಎಸೆದ ಕಿಡಿಗೇಡಿಗಳ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಬೇಕು. ತಪ್ಪಿತಸ್ಥರನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹ ಮಾಡಲಾಗುವುದು ಎಂದು ಹೇಳಲಾಗಿದೆ. ಇನ್ನು ಈ ಪ್ರತಿಭಟನೆ ಇಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿದ್ದು, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್ಪಿ ಸಿದ್ದಾರ್ಥ ಗೋಯೆಲ್ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ