ಭಾರತವನ್ನು ಹೊರಹಾಕಬಹುದಿತ್ತು, ಸೌತ್ ಆಫ್ರಿಕನ್ನರು ದಡ್ಡರು..!

ಭಾರತವನ್ನು ಹೊರಹಾಕಬಹುದಿತ್ತು, ಸೌತ್ ಆಫ್ರಿಕನ್ನರು ದಡ್ಡರು..!

ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬ ಮಾತಿನಂತೆ ಟಿ20 ವಿಶ್ವಕಪ್ ಕಳೆದು ವಾರವಾದರೂ ಅದರ ಬಗ್ಗೆ ಚರ್ಚೆಗಳು ಮಾತ್ರ ಮುಂದುವರೆದಿದೆ. ಆದರೆ ಈ ಬಾರಿ ಚರ್ಚೆಯ ನಡುವೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಪ್ರಸ್ತಾಪಿಸಿರುವ ವಿಷಯವೇ ದೊಡ್ಡ ಚರ್ಚೆಯಾಗಿ ಮಾರ್ಪಟ್ಟಿದೆ. ಅದು ಸಹ ಟೀಮ್ ಇಂಡಿಯಾವನ್ನು ಟೂರ್ನಿಯಿಂದ ಹೊರಹಾಕಬಹುದಾಗಿದ್ದ ಕುತಂತ್ರವನ್ನು ಪ್ರಸ್ತಾಪಿಸಿ ಮಾತನಾಡಿ ವಾನ್ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

ಪಾಡ್​ಕಾಸ್ಟ್​ವೊಂದರಲ್ಲಿ ಮಾತನಾಡಿದ ಮೈಕಲ್ ವಾನ್, ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದರೆ, ಭಾರತ ತಂಡ ಟೂರ್ನಿಯಿಂದ ಹೊರಬೀಳುತ್ತಿತ್ತು ಎಂಬ ವಾದ ಮುಂದಿಟ್ಟಿದ್ದಾರೆ.

ಸೂಪರ್ 8 ಹಂತದ ಆರಂಭದಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ ಭಾರಿ ಅಂತರದ ಸೋಲು ಕಂಡಿತ್ತು. ಇದರಿಂದ ಟೀಮ್ ಇಂಡಿಯಾದ ‘ನೆಟ್ ರನ್ ರೇಟ್’ ಕುಸಿದಿತ್ತು.

ಒಂದು ವೇಳೆ ಸೌತ್ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಉದ್ದೇಶಪೂರ್ವಕವಾಗಿ ಸೋತಿದ್ದರೆ, ಅಂಕಪಟ್ಟಿಯ ಲೆಕ್ಕಾಚಾರದಲ್ಲಿ ಭಾರತ ತಂಡಕ್ಕೆ ಸೆಮಿಫೈನಲ್ ತಲುಪಲು ಸಾಧ್ಯವಾಗುತ್ತಿರಲಿಲ್ಲ.

ಭಾರತದಂತಹ ಬಲಿಷ್ಠ ತಂಡವನ್ನು ಟೂರ್ನಿಯಿಂದ ಹೊರಹಾಕುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳದ ಸೌತ್ ಆಫ್ರಿಕಾವನ್ನು ಮೈಕಲ್ ವಾನ್ “ಮುಠ್ಠಾಳರ ತಂಡ” ಎಂದು ಕರೆದಿದ್ದಾರೆ.

ಸೌತ್ ಆಫ್ರಿಕಾ ಆ ಪಂದ್ಯವನ್ನು ಗೆದ್ದಿದ್ದರಿಂದ ಭಾರತಕ್ಕೆ ಸೆಮಿಫೈನಲ್ ತಲುಪಲು ದಾರಿ ಸುಲಭವಾಯಿತು. ಅಂತಿಮವಾಗಿ ಭಾರತ ವಿಶ್ವಕಪ್ ಗೆದ್ದರೆ, ದಕ್ಷಿಣ ಆಫ್ರಿಕಾ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತು.

ವಿಶ್ವಕಪ್ ಗೆಲ್ಲಲು ಬಲಿಷ್ಠ ತಂಡಗಳನ್ನು ಮೊದಲೇ ಟೂರ್ನಿಯಿಂದ ಹೊರಹಾಕಬೇಕು ಎನ್ನುವುದು ವಾನ್ ಅವರ ವಾದ. ಒಂದು ವೇಳೆ ಸೌತ್ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದರೆ, ಟೀಮ್ ಇಂಡಿಯಾಗೆ ಕೊನೆಯ ಮ್ಯಾಚ್​ನಲ್ಲಿ ನೆಟ್ ರನ್ ರೇಟ್​ ಮೂಲಕ ಗೆಲ್ಲಬೇಕಾದ ಅವಶ್ಯಕತೆ ಎದುರಾಗುತ್ತಿತ್ತು.

ಇತ್ತ ಸೌತ್ ಆಫ್ರಿಕಾ ತಂಡ ಝಿಂಬಾಬ್ವೆ ವಿರುದ್ಧ ಗೆದ್ದು ಸೆಮಿಫೈನಲ್​ಗೇರಬಹುದಿತ್ತು. ಅತ್ತ ವೆಸ್ಟ್ ಇಂಡೀಸ್ ತಂಡಕ್ಕೂ ಸೆಮಿಫೈನಲ್​ಗೇರುವ ಅವಕಾಶ ದೊರೆಯುತ್ತಿತ್ತು. ಇಲ್ಲಿ ನೆಟ್ ರನ್ ರೇಟ್ ಆಧಾರದ ಮೇಲೆ ಟೀಮ್ ಇಂಡಿಯಾ ಗೆಲ್ಲಬೇಕಾದ ಅನಿವಾರ್ಯ ಎದುರಾಗುವುದರಿಂದ ಅವರು ಟೂರ್ನಿಯಿಂದ ಹೊರಬೀಳುತ್ತಿದ್ದರು.

ಆದರೆ ಸೌತ್ ಆಫ್ರಿಕಾ ಇಡೀ ಟೂರ್ನಿಯ ದಡ್ಡರ ತಂಡ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರು. ಇದರಿಂದ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಸುಲಭವಾಯಿತು. ಆ ಬಳಿಕ ಸೌತ್ ಆಫ್ರಿಕಾ ಸೆಮಿಫೈನಲ್​ನಲ್ಲಿ ಸೋತರು. ಅತ್ತ ಸೆಮಿಫೈನಲ್​ನಲ್ಲಿ ಗೆದ್ದು ಭಾರತ ತಂಡವು ಇದೀಗ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಒಂದು ವೇಳೆ ಸೌತ್ ಆಫ್ರಿಕಾ ತಂಡ ಸ್ವಲ್ಪ ಬುದ್ಧಿ ಉಪಯೋಗಿಸಿದ್ದರೆ ಟೀಮ್ ಇಂಡಿಯಾವನ್ನು ಹೊರಹಾಕಬಹುದಿತ್ತು ಎಂದು ಮೈಕಲ್ ವಾನ್ ಹೇಳಿದ್ದಾರೆ.

ಕ್ರೀಡಾ ಸ್ಫೂರ್ತಿ ವಿರುದ್ಧ:

ಮೈಕಲ್ ವಾನ್ ಅವರ ಈ ಹೇಳಿಕೆಯು ಕ್ರೀಡಾ ಸ್ಫೂರ್ತಿಗೆ  ವಿರುದ್ಧ. ಏಕೆಂದರೆ  ಪ್ರತಿಯೊಂದು ಪಂದ್ಯವನ್ನೂ ಗೆಲ್ಲುವ ಉದ್ದೇಶದಿಂದಲೇ ಆಡುವುದು ಕ್ರೀಡೆಯ ಮೂಲ ನಿಯಮ. ಉದ್ದೇಶಪೂರ್ವಕವಾಗಿ ಸೋಲುವುದು ಅಭಿಮಾನಿಗಳಿಗೆ ಮತ್ತು ಕ್ರೀಡೆಗೆ ಮಾಡುವ ಅಪಚಾರವೆಂದು ಪರಿಗಣಿಸಲಾಗುತ್ತದೆ.

ಇನ್ನು ಐಸಿಸಿ ನಿಯಮಾವಳಿಗಳ ಪ್ರಕಾರ, ಪಂದ್ಯದ ಫಲಿತಾಂಶವನ್ನು ಮ್ಯಾನಿಪುಲೇಟ್ ಮಾಡುವುದು ಅಥವಾ ಉದ್ದೇಶಪೂರ್ವಕವಾಗಿ ಕಳಪೆ ಪ್ರದರ್ಶನ ನೀಡುವುದು ಶಿಕ್ಷಾರ್ಹ ಅಪರಾಧ. ಹೀಗೆ ಮಾಡಿದರೆ ತಂಡದ ನಾಯಕನಿಗೆ ನಿಷೇಧ ಹೇರುವ ಅವಕಾಶವೂ ಇರುತ್ತದೆ.

ಇದನ್ನೂ ಓದಿ: ಯಾರೂ ಸಹ ಈ ರೀತಿ ರನೌಟ್ ಮಾಡಬೇಡಿ: ಕೈಫ್ ಕಿವಿಮಾತು

ಇತ್ತ ಕ್ರೀಡಾ ಸ್ಫೂರ್ತಿಯಿಂದಲೇ ಆಡಿ ಗೆದ್ದ ಸೌತ್ ಆಫ್ರಿಕಾ ತಂಡವನ್ನು ಮೈಕಲ್ ವಾನ್ ದಡ್ಡರು ಎಂದು ಕರೆದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ಸಲಹೆ ನೀಡಿರುವುದು ಕೂಡ ಇದೀಗ ಚರ್ಚೆಗೆ ಗ್ರಾಸವಾಗಿದೆ.

 

 

Source link

Leave a Reply

Your email address will not be published. Required fields are marked *