
ಬೆಂಗಳೂರು, ಜ.23: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ(Karnataka Assembly) ನಡೆದ ಘಟನೆಯೊಂದು ಸದನದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಏಳು ತಿಂಗಳಿಗೆ ಹುಟ್ಟಿದವರಂತೆ ಆಡಬೇಡಿ ಎಂಬ ಹೇಳಿಕೆಯು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಸಚಿವ ಭೈರತಿ ಸುರೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್ ಮಾತನಾಡುತ್ತಿದ್ದಾಗ ಭೈರತಿ ಸುರೇಶ್ ಮಧ್ಯಪ್ರವೇಶಿಸಿದ್ದರೆ ಈ ವೇಳೆ ಸುರೇಶ್ ಕುಮಾರ್ “ಒಂಭತ್ತು ತಿಂಗಳಿಗೆ ಹುಟ್ಟಿದ್ರೆ ಸರಿಯಾಗುತ್ತಿತ್ತು, ಏಳು ತಿಂಗಳಿಗೆ ಹುಟ್ಟಿದ್ದೀರಾ” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಸುರೇಶ್ ಕುಮಾರ್ ಅವರ ಈ ಮಾತು ಸದನದಲ್ಲಿ ಆಕ್ರೋಶದ ಅಲೆಯ್ನುಎಬ್ಬಿಸಿದೆ. ಹಲವಾರು ಸದಸ್ಯರು, ಅದರಲ್ಲಿಯೂ ಪ್ರಿಯಾಂಕಾ ಮತ್ತು ಭೈರತಿ ಸುರೇಶ್ ಅವರು ತೀವ್ರವಾಗಿ ವಿರೋಧಿಸಿ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಈ ಹೇಳಿಕೆ ಅನ್ ಪಾರ್ಲಿಮೆಂಟರಿ (ಅಸಂಸದೀಯ) ಎಂದು ಹಲವರು ವಾದಿಸಿದರು. “ನೀವು ಹೆಲ್ತ್ ಮಿನಿಸ್ಟರ್ ಆಗಿದ್ದೀರಾ. ಏಳು ತಿಂಗಳಲ್ಲಿ ಯಾರೂ ಹುಟ್ಟೋದೇ ಇಲ್ವಾ? ಪ್ರೀ ಮೆಚ್ಯೂರ್ ಬೇಬಿ ಹುಟ್ಟಲ್ವಾ? ಏಳು ತಿಂಗಳಲ್ಲಿ ಹುಟ್ಟೋರಿಗೆ ಮಾನ ಮರ್ಯಾದೆ ಇಲ್ವಾ?” ಸದನದಲ್ಲಿ ಶಾಸಕರೊಬ್ಬರು ಹೇಳಿದ್ದಾರೆ. ಈ ಮಾತಿನಿಂದ ಏಳು ತಿಂಗಳಲ್ಲಿ ಜನಿಸಿದವರ ಕುರಿತು ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ವಾಗ್ವಾದ ತಾರಕಕ್ಕೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ಸುರೇಶ್ ಕುಮಾರ್ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಅವರು ಹೇಳಿದ ಮಾತನ್ನು ಕಡತದಿಂದ ತೆಗೆದುಹಾಕಿ ಎಂದು ಸ್ಪೀಕರ್ಗೆ ಹೇಳಿದ್ರು, ತಕ್ಷಣ ಎದ್ದು ನಿಂತು ಸುರೇಶ್ ಕುಮಾರ್ ಅವರು ತಾವು ಏಳು ತಿಂಗಳು, ಒಂಬತ್ತು ತಿಂಗಳು ಎಂದು ಹೇಳಿದ ಮಾತನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ