Headlines

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಉಖ್ರುಲ್‌ನಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ – Kannada News | Fresh violence erupts in Manipur Ukhrul Over 20 Houses Set Ablaze in Litan Village

ಉಖ್ರುಲ್, ಫೆಬ್ರವರಿ 9: ಮಣಿಪುರದಲ್ಲಿ (Manipur) ನೂತನ ಮುಖ್ಯಮಂತ್ರಿಯಾಗಿ ಖೇಮ್ಚಂದ್ ಸಿಂಗ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಉಖ್ರುಲ್ ಜಿಲ್ಲೆಯ ಲಿಟಾನ್ ಗ್ರಾಮದಲ್ಲಿ ತಂಗ್ಕುಲ್ ನಾಗಾ ಸಮುದಾಯಕ್ಕೆ ಸೇರಿದ 20 ಮನೆಗಳಿಗೆ ಕುಕಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಭಾನುವಾರ ತಂಗ್ಕುಲ್ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ನಂತರ ಈ ಗ್ರಾಮದಲ್ಲಿ ಕರ್ಫ್ಯೂ ವಿಧಿಸಲಾಯಿತು. ಆದೇಶದ ಪ್ರಕಾರ, 2 ಸಮುದಾಯಗಳಾದ ತಂಗ್ಖುಲ್ ಮತ್ತು ಕುಕಿ ನಡುವೆ ಶಾಂತಿ ಮತ್ತು ನೆಮ್ಮದಿಗೆ ಭಂಗವಾಗುವ ಸಾಧ್ಯತೆಯಿರುವುದರಿಂದ ನಿರ್ಬಂಧಗಳನ್ನು ವಿಧಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮತ್ತು ಪ್ರದೇಶದಲ್ಲಿ ಒಟ್ಟಾರೆ ಭದ್ರತೆಯನ್ನು ಪುನಃಸ್ಥಾಪಿಸಲು, ಜಿಲ್ಲಾ ಮ್ಯಾಜಿಸ್ಟ್ರೇಟ್ ಹೆಚ್ಚುವರಿ ಭದ್ರತಾ ಪಡೆಗಳನ್ನು ಕೋರಿದ್ದಾರೆ. ಇದರಲ್ಲಿ ಅಸ್ಸಾಂ ರೈಫಲ್ಸ್‌ನ 4 ಕಾಲಮ್‌ಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) 2 ಹೆಚ್ಚುವರಿ ಕಂಪನಿಗಳು, 8 ಬಿಹಾರ ರೆಜಿಮೆಂಟ್‌ನ 4 ಕಾಲಮ್‌ಗಳು ಮತ್ತು 4ನೇ ಮಹಾರ್ ರೆಜಿಮೆಂಟ್‌ನ ಸಿಬ್ಬಂದಿ ಸೇರಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯ; ಮುಖ್ಯಮಂತ್ರಿಯಾಗಿ ಖೇಮ್‌ಚಂದ್ ಪ್ರಮಾಣವಚನ ಸ್ವೀಕಾರ

ಶನಿವಾರ ರಾತ್ರಿ ಲಿಟಾನ್ ಗ್ರಾಮದಲ್ಲಿ ತಂಗ್ಖುಲ್ ನಾಗಾ ಸಮುದಾಯದ ಸದಸ್ಯರ ಮೇಲೆ 7ರಿಂದ 8 ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ನಂತರ ಈ ಪ್ರದೇಶದಲ್ಲಿ ಮೊದಲು ಹಿಂಸಾಚಾರ ಭುಗಿಲೆದ್ದಿತು. ಮೊದಲು ಈ ಸಮಸ್ಯೆಯನ್ನು ಸಂತ್ರಸ್ತರ ಕಡೆಯವರು ಮತ್ತು ಲಿಟಾನ್ ಸರೀಖಾಂಗ್ ಮುಖ್ಯಸ್ಥರ ನಡುವೆ ಇತ್ಯರ್ಥಪಡಿಸಲಾಯಿತು. ಎರಡೂ ಕಡೆಯವರು ಮಾತುಕತೆಯ ಮೂಲಕ ವಿಷಯವನ್ನು ಪರಿಹರಿಸಲು ಒಪ್ಪಿಕೊಂಡವು. ಭಾನುವಾರ ಸಭೆ ನಿಗದಿಯಾಗಿತ್ತು, ಆದರೆ ಅದು ನಡೆಯಲಿಲ್ಲ.

ಅದರ ಬದಲು ಹತ್ತಿರದ ಸಿಕಿಬಂಗ್‌ನ ಗ್ರಾಮಸ್ಥರು ಲಿಟಾನ್ ಸರೀಖಾಂಗ್ ಮುಖ್ಯಸ್ಥರ ನಿವಾಸದ ಮೇಲೆ ದಾಳಿ ನಡೆಸಿದರು. ಲಿಟಾನ್ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಮೂಲಕ ಹಾದುಹೋಗುವಾಗ ಗುಂಪು ಹಲವಾರು ಸುತ್ತು ಗುಂಡು ಹಾರಿಸಿತ್ತು. ಭಾನುವಾರ ರಾತ್ರಿ 2 ಬುಡಕಟ್ಟು ಗುಂಪುಗಳು ಗ್ರಾಮದಲ್ಲಿ ತೀವ್ರವಾದ ಕಲ್ಲು ತೂರಾಟ ನಡೆಸಿದ್ದರಿಂದ ನಿಷೇಧಾಜ್ಞೆಗಳನ್ನು ವಿಧಿಸಲಾಯಿತು.

ಇದನ್ನೂ ಓದಿ: ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಾಹನದ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ; ಇಬ್ಬರು ಸೈನಿಕರ ಸಾವು

ನಿನ್ನೆ ಮಧ್ಯರಾತ್ರಿ ಲಿಟಾನ್ ಸರೀಖಾಂಗ್‌ನಲ್ಲಿ ಕುಕಿ ಉಗ್ರಗಾಮಿಗಳು ತಂಗ್ಖುಲ್ ನಾಗಾ ಸಮುದಾಯದ ಸದಸ್ಯರಿಗೆ ಸೇರಿದ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಹತ್ತಿರದ ಪ್ರದೇಶದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಕೆಲವು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. ಇದರಿಂದ 21 ಮನೆಗಳು ಸುಟ್ಟುಹೋಗಿವೆ, ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ನಿರಂತರ ಹಿಂಸಾಚಾರದ ನಂತರ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಇಂದು ಬೆಳಿಗ್ಗೆ ಮಣಿಪುರದ ಮುಖ್ಯಮಂತ್ರಿ ಖೇಮ್‌ಚಂದ್ ಸಿಂಗ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಸಂಯಮ ಮತ್ತು ಶಾಂತಿಗಾಗಿ ಮನವಿ ಮಾಡಿದರು. “ಉಖ್ರುಲ್ ಜಿಲ್ಲೆಯಲ್ಲಿ ನಡೆದ ದುರದೃಷ್ಟಕರ ಲಿಟಾನ್ ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಇಂದು ಬೆಳಿಗ್ಗೆ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅವರು ಬೇಗನೆ ಚೇತರಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ವೈದ್ಯಕೀಯ ಸಹಾಯವನ್ನು ಭರವಸೆ ನೀಡಿದ್ದೇನೆ” ಎಂದು ಅವರು ಹೇಳಿದ್ದಾರೆ.

“ತಪ್ಪು ತಿಳುವಳಿಕೆಯಿಂದ ಉಂಟಾದ ಈ ಘಟನೆ ಈಗ ನಿಯಂತ್ರಣದಲ್ಲಿದೆ. ಎಲ್ಲಾ ಸಮುದಾಯಗಳು ಸಂಯಮದಿಂದ ವರ್ತಿಸಬೇಕು, ಕಾನೂನಿನ ನಿಯಮವನ್ನು ಎತ್ತಿಹಿಡಿಯಬೇಕು ಮತ್ತು ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *