ಸುಶಾಂತ್ ಪೂಜಾರಿ ಹಾಗೂ ಭಾಸ್ಕರ್Image Credit source: tv9
ಮಂಗಳೂರು, ಫೆಬ್ರವರಿ 11: ಆನ್ಲೈನ್ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಲ್ಲಿ ಯುವತಿಯರನ್ನು ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಮಂಗಳೂರು ಪೊಲೀಸರು (Mangalore Police) ಬಂಧಿಸಿದ್ದಾರೆ. ಮ್ಯಾಟ್ರಿಮೋನಿಯಲ್ಲಿ (Matrimony) ವರ ಹುಡುಕುತ್ತಿದ್ದ ಯುವತಿಯರನ್ನು ಗುರಿಯಾಗಿಸಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದ್ದು, ಈತನ ವಂಚನೆಗೆ ಸಾಥ್ ನೀಡಿದ್ದ ಮುಲ್ಕಿ ನಿವಾಸಿ ಭಾಸ್ಕರ್ನನ್ನೂ ಪೊಲೀಸರು ಬಂಧಿಸಿದ್ದಾರೆ. ಸುಶಾಂತ್ ತನ್ನ ಅಳಿಯ ಎಂದು ಹೇಳಿ ಸಂತ್ರಸ್ತೆಯ ಕುಟುಂಬದವರಿಗೆ ನಂಬಿಕೆ ಮೂಡಿಸಲು ಭಾಸ್ಕರ್ ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗವಹಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಇಬ್ಬರ ಜೊತೆ ಮದುವೆ, 9 ಯುವತಿಯರಿಗೆ ವಂಚನೆ!
ಮದುವೆಯ ಹೆಸರಿನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಯುವತಿಯರನ್ನು ಸುಶಾಂತ್ ವಂಚಿಸಿದ್ದಾನೆ. ಈ ಪೈಕಿ ಇಬ್ಬರು ಯುವತಿಯರೊಂದಿಗೆ ಮದುವೆಯಾಗಿ ನಂತರ ಕೈಕೊಟ್ಟಿರುವುದಾಗಿ ತಿಳಿದುಬಂದಿದೆ. ಮ್ಯಾಟ್ರಿಮೋನಿ ವೆಬ್ಸೈಟ್ ಮೂಲಕ ಪರಿಚಯ ಮಾಡಿಕೊಂಡು ನಂಬಿಕೆ ಗಳಿಸಿದ ಬಳಿಕ ಹಂತ ಹಂತವಾಗಿ ಹಣ ಪಡೆದು ಆರೋಪಿ ನಾಪತ್ತೆಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನಲ್ಲಿ ಒಬ್ಬ ಯುವತಿಯನ್ನು ಮದುವೆಯಾಗಿದ್ದು, ಆಕೆಯಿಂದ ಸುಮಾರು 6.6 ಲಕ್ಷ ರೂಪಾಯಿ ಪಡೆದು ಬಳಿಕ ಪರಾರಿಯಾಗಿದ್ದ. ಉಡುಪಿ ಭಾಗದ ಇಬ್ಬರು ಯುವತಿಯರಿಗೆ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾನೆ. ಇದೇ ರೀತಿಯಾಗಿ ಬೆಂಗಳೂರಿನಲ್ಲಿ ಇಬ್ಬರು ಯುವತಿಯರು, ಕಾರ್ಕಳದ ಒಬ್ಬ ಯುವತಿ ಹಾಗೂ ಮಂಗಳೂರಿನ ಮತ್ತೊಬ್ಬ ಯುವತಿಯನ್ನೂ ಮೋಸಗೊಳಿಸಿದ್ದ ಪ್ರಕರಣಗಳು ಈಗ ಬೆಳಕಿಗೆ ಬಂದಿವೆ.
ಈ ಕುರಿತು ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯೊಬ್ಬಳು ದೂರು ನೀಡಿದ್ದಳು. ದೂರು ಆಧಾರಿಸಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯ ಹಿನ್ನಲೆ ಕೆದಕಿದಾಗ ಆತನ ವಂಚನೆಗಳ ಸರಣಿ ಬಯಲಾಗಿತ್ತು. ನಕಲಿ ಮಾವ-ಅಳಿಯರಾಗಿ ನಟನೆ ಮಾಡಿ ಮದುವೆ ನಾಟಕವಾಡಿ ಯುವತಿಯರ ಜೀವನದೊಂದಿಗೆ ಆಟವಾಡಿದ್ದ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಪಡ್ಡೆ ಹುಡುಗರ ಬಲೆಗೆ ಬೀಳಿಸಲು ಹೆಸರೇ ಬದಲಾಯಿಸಿದ್ದ ಸುಚಿತ್ರಾ! ಖತರ್ನಾಕ್ ಪ್ಲಾನ್ ರಹಸ್ಯ ಬಟಾಬಯಲು
ಆನ್ಲೈನ್ ಮ್ಯಾಟ್ರಿಮನಿ ಬಳಕೆ ಮಾಡುವವರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.