ನವದೆಹಲಿ, ಫೆಬ್ರವರಿ 26: ಮಹಿಳೆಯೊಬ್ಬಳು ತನಗೆ ಕೆಲಸ ನೀಡಿದ್ದ ಮನೆಯ ಒಡೆಯನ ಮನೆಗೇ ಕನ್ನ ಹಾಕಲು ಪ್ಲಾನ್ ಮಾಡಿದ್ದಳು. ಅದಕ್ಕಾಗಿ ಆಕೆ ಹೆಣೆದ ಪ್ಲಾನ್ ಅಂತಿಂಥದ್ದಲ್ಲ. ಮನೆಕೆಲಸ ಮಾಡುತ್ತಿದ್ದ ಆಕೆಗೆ ಆ ಮನೆಯ ಎಲ್ಲ ವಿಚಾರವೂ ಗೊತ್ತಿತ್ತು. ಆ ಮನೆಯಲ್ಲಿ ಸಾಕಷ್ಟು ಹಣ, ಒಡವೆಯಿದೆ ಎಂಬುದು ಕೂಡ ತಿಳಿದಿತ್ತು. ಹೀಗಾಗಿ, ಅದನ್ನೆಲ್ಲ ದೋಚಲು ಆಕೆ ಪ್ಲಾನ್ ಮಾಡಿದ್ದಳು. ಆದರೆ, ಕದ್ದುಕೊಂಡು ಹೋದರೆ ತಾನು ಖಂಡಿತ ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬುದು ಆಕೆಗೆ ತಿಳಿದಿತ್ತು. ಹೀಗಾಗಿ, ತನ್ನ ಗೆಳೆಯರ ಜೊತೆ ಸೇರಿ ಇಡಿ ದಾಳಿಯ (ED Raid) ನಾಟಕವಾಡಿ ಹಣ ದೋಚಲು ಪ್ಲಾನ್ ಮಾಡಿದ್ದಳು.
ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ಅವರ ಉದ್ಯೋಗದಾತರ ನಿವಾಸದ ಮೇಲೆ ನಕಲಿ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಆರೋಪದ ಮೇಲೆ ಮನೆಕೆಲಸದವಳನ್ನು ಬಂಧಿಸಲಾಗಿದೆ. ಪೊಲೀಸ್ ಸಮವಸ್ತ್ರದಲ್ಲಿದ್ದ ಮೂವರು ವ್ಯಕ್ತಿಗಳು ಫೆಬ್ರವರಿ 11ರಂದು ಇಡಿ ಅಧಿಕಾರಿಗಳೆಂದು ಹೇಳಿಕೊಂಡು ನಿವೃತ್ತ ವಾಸ್ತುಶಿಲ್ಪಿಯಾದ 86 ವರ್ಷದ ಆರ್ಸಿ ಸಭರ್ವಾಲ್ ಅವರ ನಿವಾಸಕ್ಕೆ ಬಲವಂತವಾಗಿ ಪ್ರವೇಶಿಸಿದ್ದರು. ಅವರು ಸಭರ್ವಾಲ್ ಅವರ ಕುಟುಂಬವನ್ನು ಹೆದರಿಸಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡರು. ಅಷ್ಟರಲ್ಲೇ ಸಭರ್ವಾಲ್ ಅವರ ಮೊಮ್ಮಗ ಅವರ ಬಳಿ ಇಡಿ ದಾಳಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದ್ದರಿಂದ ಅವರು ಮನೆಯಲ್ಲಿದ್ದ ಮೂರ್ನಾಲ್ಕು ಲಕ್ಷ ಹಣ, ಚಿನ್ನವನ್ನು ತೆಗೆದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಸಿಎಂ ಕುರ್ಚಿ ಕದನದ ನಡುವೆ ಬೆಂಗಳೂರಿನಲ್ಲಿ ಸಚಿವರ ಆಪ್ತರ ಮೇಲೆ ಇಡಿ ದಾಳಿ
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ದರೋಡೆ ನಡೆದ ವಸತಿ ಪ್ರದೇಶದ ಖಾಸಗಿ ಕ್ಯಾಮೆರಾಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಹೈ-ಸ್ಪೀಡ್ ಟ್ರಾಫಿಕ್ ಕ್ಯಾಮೆರಾಗಳು ಸೇರಿದಂತೆ 350ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅವರು ಪರಿಶೀಲಿಸಿದರು. ಅಲ್ಲಿಗೆ ಬಂದಿದ್ದ ಕಾರು ಎಲ್ಲೆಲ್ಲ ಓಡಾಡಿದೆ ಎಂದು ಪೊಲೀಸರು ಸಿಸಿಟಿವಿ ದೃಶ್ಯವನ್ನು ಆಧರಿಸಿ ತನಿಖೆ ನಡೆಸಿದಾಗ ಪೂಜಾ ರಜಪೂತ್ ಎಂಬ ಮಹಿಳೆಯ ಬಳಿ ಆ ಕಾರು ನಿಂತಿದ್ದು ಗೊತ್ತಾಯಿತು. ಆಕೆ ದರೋಡೆ ನಡೆದ ಮನೆಯ ಕೆಲಸದಾಕೆ ರೇಖಾ ದೇವಿಯ ಅತ್ತಿಗೆ ಎಂದು ತಿಳಿದುಬಂದಿದೆ. ಇದರಿಂದ ಪೊಲೀಸರು ರೇಖಾ ದೇವಿಯ ಮೇಲೆ ಕಣ್ಣಿಟ್ಟರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ಕಾಲ್ ಸೆಂಟರ್ ಮೇಲೆ ಪೊಲೀಸರ ದಾಳಿ: ಷೇರು ಮಾರುಕಟ್ಟೆ ಹೆಸರಲ್ಲಿ ವಂಚಿಸುತ್ತಿದ್ದ ಇಬ್ಬರ ಬಂಧನ!
ಬಳಿಕ, ಪೊಲೀಸರ ತಂಡವು ಪೂಜಾ ಅವರ ಮನೆಯ ಮೇಲೆ ದಾಳಿ ಮಾಡಿದಾಗ ಅಲ್ಲಿ ಇಡಿ ದಾಳಿಯಲ್ಲಿ ಬಳಸಲಾದ ಪೊಲೀಸ್ ಯೂನಿಫಾರಂ ಸಿಕ್ಕಿತು. ಆ ಮನೆಯಿಂದ ಕದ್ದ ಐಷಾರಾಮಿ ಕೈಗಡಿಯಾರಗಳು ಮತ್ತು ಆಭರಣಗಳು ಸಹ ಅಲ್ಲೇ ಸಿಕ್ಕಿತು. ಈ ಹಿನ್ನೆಲೆಯಲ್ಲಿ ರೇಖಾ (40) ಮತ್ತು 45 ವರ್ಷದ ಪೂಜಾ ಅವರನ್ನು ಬಂಧಿಸಲಾಗಿದ್ದು, ಪೊಲೀಸರು ಇತರ ಆರೋಪಿಗಳಾದ ಐಟಿಬಿಪಿ ಕಾನ್ಸ್ಟೆಬಲ್ ಪ್ರಕಾಶ್, ನಿವೃತ್ತ ಸೇನಾ ಸಿಬ್ಬಂದಿ ಉಪದೇಶ್ ಸಿಂಗ್ ಥಾಪಾ ಮತ್ತು ಮನೀಶ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ