ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ತೆಲುಗು ರಾಜ್ಯಗಳಲ್ಲಿ ಫ್ಯಾನ್ಸ್ ವಾರ್​​ಗಳು ಸಾಮಾನ್ಯ. ಕರ್ನಾಟಕಕ್ಕೆ ಹೋಲಿಸಿದರೆ ತುಸು ಹೆಚ್ಚೇ ಎನ್ನಬಹುದು. ಮೆಗಾಸ್ಟಾರ್ ಅಭಿಮಾನಿಗಳು ಮತ್ತು ನಂದಮೂರಿ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್​​ಗೆ ದಶಕಗಳ ಇತಿಹಾಸವಿದೆ. ಇವುಗಳ ನಡುವೆ ಜೂ ಎನ್​​ಟಿಆರ್ vs ಪವನ್ ಕಲ್ಯಾಣ್, ಪವನ್ ಕಲ್ಯಾಣ್ (Pawan Kalyan) vs ಮಹೇಶ್ ಬಾಬು ಹೀಗೆ ಬೇರೆ ಬೇರೆ ಫ್ಯಾನ್ಸ್ ವಾರ್​​ಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಮ್ಮೆ ಪವನ್ ಕಲ್ಯಾಣ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ನಡುವೆ ಕಿರಿಕ್ ಶುರುವಾಗಿದೆ. ಇದಕ್ಕೆ ಕಾರಣ ಆಗಿರುವುದು ಪವನ್ ಕಲ್ಯಾಣ್ ಅವರ ಆಪ್ತ ನಿರ್ದೇಶಕರೊಬ್ಬರ ಟ್ವೀಟ್.

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಮಾರ್ಚ್ 19 ರಂದು ‘ಧುರಂಧರ್ 2’ ಸಿನಿಮಾದ ಎದುರು ಅದು ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶನ ಮಾಡಿದ್ದು, ಪವನ್ ಕಲ್ಯಾಣ್​​ರ ಆಪ್ತ ನಿರ್ದೇಶಕರುಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ಸಹಜವಾಗಿಯೇ ಪವನ್ ಕಲ್ಯಾಣ್ ಅಭಿಮಾನಿಗಳು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.

ಇತ್ತೀಚೆಗೆ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿ, ಮಹೇಶ್ ಬಾಬು ಸಿನಿಮಾಗಳ ರೆಕಾರ್ಡ್ ಅನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬ್ರೇಕ್ ಮಾಡಬೇಕು ಎಂದಿದ್ದ. ಮಹೇಶ್ ಬಾಬು ಎಂದು ನೇರವಾಗಿ ಹೆಸರು ಬಳಸುವ ಬದಲಿಗೆ ಮಹೇಶ್ ಬಾಬು ಅಡ್ಡ ಹೆಸರಾದ ‘ಬಾಬ್’ ಎಂದು ಬರೆದಿದ್ದ. ಆ ಟ್ವೀಟ್​​ಗೆ ಪ್ರತಿಕ್ರಿಯೆ ನೀಡಿದ್ದ ಹರೀಶ್ ಶಂಕರ್ ‘ತಥಾಸ್ತು’ ಎಂದಿದ್ದರು. ಆ ಮೂಲಕ ಮಹೇಶ್ ಬಾಬು ರೆಕಾರ್ಡ್​​ಗಳನ್ನು ಬ್ರೇಕ್ ಮಾಡುತ್ತೇನೆ ಎಂದಿದ್ದರು. ಹರೀಶ್ ಶಂಕರ್ ಅವರ ಈ ಟ್ವೀಟ್ ಮಹೇಶ್ ಅಭಿಮಾನಿಗಳನ್ನು ಕೆರಳಿಸಿದೆ.

ಆದರೆ ಶೀಘ್ರವೇ ತಮ್ಮ ತಪ್ಪು ತಿಳಿದುಕೊಂಡ ಹರೀಶ್ ಶಂಕರ್ ಕೂಡಲೇ ತಮ್ಮ ‘ತಥಾಸ್ತು’ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಲ್ಲದೆ, ತಾವು ಟ್ವೀಟ್​​ ಅನ್ನು ಪೂರ್ಣವಾಗಿ ಓದದೆ ಹಾಗೂ ಸರಿಯಾಗಿ ಅರ್ಥೈಸಿಕೊಳ್ಳದೆ ಪ್ರತಿಕ್ರಿಯೆ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ಟ್ವೀಟ್​​ನಿಂದ ಮಹೇಶ್ ಬಾಬು ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದರೆ ಕ್ಷಮೆ ಕೇಳುವುದಾಗಿ ಸಹ ಹರೀಶ್ ಶಂಕರ್ ಹೇಳಿದ್ದಾರೆ.

ಇದನ್ನೂ ಓದಿ:ತೆಲುಗು ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಹೊಡೆತ ಕೊಟ್ಟ ‘ಧುರಂಧರ್ 2’

ಟಾಲಿವುಡ್ ಖ್ಯಾತ ನಿರ್ದೇಶಕ ಹರೀಶ್ ಶಂಕರ್ ಅವರು ತಮ್ಮ ಮುಂಬರುವ ಚಿತ್ರ ‘ಉಸ್ತಾದ್ ಭಗತ್ ಸಿಂಗ್’ (ಪವನ್ ಕಲ್ಯಾಣ್ ನಟನೆಯ ಸಿನಿಮಾ) ಪ್ರಚಾರದ ಸಂದರ್ಭದಲ್ಲಿ ಮಾಡಿದ್ದ ಒಂದು ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಅವರು ಮಹೇಶ್ ಬಾಬು ಮತ್ತು ಅವರ ಅಭಿಮಾನಿಗಳಿಗೆ ಬೇಷರತ್ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಟ್ವೀಟ್ ಮಾಡಿರುವ ಹರೀಶ್ ಶಂಕರ್, ‘ಸೆನ್ಸಾರ್ ಮಂಡಳಿ ಅಧಿಕಾರಿಗಳ ಭೇಟಿ, ಪೆದ್ದಮ್ಮ ದೇವಸ್ಥಾನದ ದರ್ಶನ ಮತ್ತು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತಾನು ತುಂಬಾ ಬ್ಯುಸಿಯಾಗಿದ್ದೆ. ಆ ಹಡಬಡಿಕೆಯಲ್ಲಿ ಅಭಿಮಾನಿಗಳ ಶುಭಾಶಯಗಳಿಗೆ ಪ್ರತಿಕ್ರಿಯಿಸುವಾಗ, ಟ್ವೀಟ್ ಅನ್ನು ಪೂರ್ತಿಯಾಗಿ ಓದದೆ ಕೇವಲ ಮೊದಲ ಅರ್ಧ ಭಾಗವನ್ನು ನೋಡಿ ‘ತಥಾಸ್ತು’ ಎಂದು ಉತ್ತರಿಸಿದ್ದೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮೇಲೆ ನನಗೆ ಅಪಾರ ಗೌರವವಿದೆ. ರಾಜಮೌಳಿ-ಮಹೇಶ್ ಬಾಬು ಅವರ ‘ವಾರಣಾಸಿ’ ಸಿನಿಮಾ ದೊಡ್ಡ ದಾಖಲೆ ಬರೆಯಲಿದೆ ಎಂಬ ನಂಬಿಕೆ ನನಗಿದೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿಲ್ಲ. ಸಿನಿಮಾ ಬಿಡುಗಡೆಗೆ ಕೇವಲ 10 ದಿನಗಳಿರುವಾಗ ಉದ್ದೇಶಪೂರ್ವಕವಾಗಿ ಇಂತಹ ತಪ್ಪು ಮಾಡುವಷ್ಟು ಅಜ್ಞಾನಿ ನಾನಲ್ಲ. ತಿಳಿಯದೇ ಮಾಡಿದ ಈ ತಪ್ಪಿಗೆ ಕ್ಷಮೆಯಿರಲಿ ಎಂದು ಕೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *