ಹಾಸನ, (ಫೆಬ್ರವರಿ 24): ಹೆರಿಗೆ ನಂತರ ಬಾಣಂತಿ ಸಾವನ್ನಪ್ಪಿರುವ ಘಟನೆ ಹಾಸನದ (Hassan) ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಶೃತಿ ಎನ್ನುವ ಮಹಿಳೆ ಹೆರಿಗೆಗೆಂದು ಹಾಸನದ ಹಿಮ್ಸ್ ಆಸ್ಪತ್ರೆ (Hims Hospital) ದಾಖಲಾಗಿದ್ದರು. ಆದ್ರೆ, ಮಗುವಿಗೆ ಜನ್ಮ ನೀಡಿದ ಬಳಿಕ ಬಾಣಂತಿ ಶೃತಿ (30) ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಣಂತಿ ಶೃತಿ ಸಾವಿಗೆ ಹಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಶೃತಿ ಸಂಬಂಧಿಕರು ಹಾಗೂ ಪತಿ ಆರೋಪಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಶೃತಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಶೃತಿ ಸಾವಿಗೆ ವೈದ್ಯರೇ ಕಾರಣ ಎಂದು ಆಸ್ಪತ್ರೆ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಶೃತಿಗೆ ಐದು ವರ್ಷದ ಗಂಡು ಮಗುವಿದ್ದು, ಇದೀಗ ಹೆಣ್ಣು ಮಗು ಜನಿಸಿತ್ತು. ಇದರಿಂದ ಕುಟುಂಬಸ್ಥರು ಸಹ ಸಂತಸಗೊಂಡಿದ್ದರು. ಆದ್ರೆ, ಈ ಸತೋಷ ಬಹಳ ಹೊತ್ತು ಇರಲಿಲ್ಲ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶೃತಿ(30) ಅವರಿಗೆ ಮರುದಿನ ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಹೆರಿಗೆಯೂ ಆಗಿದ್ದು, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಶೃತಿ ಕೆಲವೇ ಸಮಯದಲ್ಲಿ ಕೋಮಾಗೆ ಹೋಗಿದ್ದಾರೆ. ಆಗ ಅಗತ್ಯ ಚಿಕಿತ್ಸೆ ನೀಡಿದ ವೈದ್ಯರು ಅರೋಗ್ಯ ಬಿಗಡಾಯಿಸುತ್ತಿದೆ, ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಆಗ ಪತಿ ಪುನೀತ್ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಮಾರ್ಗಮದ್ಯೆಯೇ ಶೃತಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಅನೈತಿಕ ಸಂಬಂಧ ಗುಟ್ಟು ರಟ್ಟು: ಒಂದೇ ಅವಾಜ್ಗೆ ಯುವಕ ದುರಂತ ಸಾವು, ಆಗಿದ್ದೇನು?
ಹಾಸನದ ಸರ್ಕಾರಿ ಆಸ್ಪತ್ರೆ, ದೊಡ್ಡ ಕಟ್ಟಡ ಸುಸಜ್ಜಿತ ಹೆರಿಗೆ ವ್ಯವಸ್ಥೆ, ತಜ್ಞ ವೈದ್ಯರೂ ಇರ್ತಾರೆ ಎಂದು ಕುಟುಂಬಸ್ಥರು ನಂಬಿದ್ದರು. ಹೀಗಾಗಿ ಫೆಬ್ರವರಿ 21ರ ಶನಿವಾರ ನಡು ರಾತ್ರಿಯಲ್ಲಿ ಹೆರಿಗೆ ನೋವು ಎಂದು ಒದ್ದಾಡಿದಾಕೆಯನ್ನ ಹಿಮ್ಸ್ಗೆ ಕರೆತಂದಿದ್ದರು. ಮರುದಿನ ಹೆರಿಗೆಯೂ ಆಗಿತ್ತು. ಆದ್ರೆ, ದುರ್ವೈವ ಮುದ್ದಾದ ಮಗುವಿಗೆ ಜನ್ಮ ಕೊಟ್ಟ ತಾಯಿ ಕರುಳ ಬಳ್ಳಿಯನ್ನ ಕಣ್ತುಂಬಿಕೊಳ್ಳೋ ಮೊದಲೇ ಸಾವನ್ನಪ್ಪಿದ್ದಾಳೆ. ವೈದ್ಯರ ನಿರ್ಲಕ್ಷ್ಯ, ಸರಿಯಾದ ಚಿಕಿತ್ಸೆ ನೀಡದೆ ತಾತ್ಸಾರ ಮಾಡಿದ್ದೇ ಶೃತಿ ಸಾವಿಗೆ ಕಾರಣ ಎಂದು ಸಂಬಂಧಿಕರು ಆರೊಪಿಸಿದ್ದಾರೆ.
ನನ್ನ ಪತ್ನಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಶನಿವಾರ ರಾತ್ತಿ ಬಂದು ಭಾನುವಾರದ ಮಧ್ಯಾಹ್ನದ ವರೆಗೂ ಯಾವ ವೈದ್ಯರು ಬಂದು ನೋಡಲಿಲ್ಲ. ಹೊಟ್ಟೆ ನೋವು ಎಂದರೆ ಇಲ್ಲಿನ ಸಿಬ್ಬಂದಿ ಬಾಯಿಗೆ ಬಂದಂತೆ ಮಾತನಾಡಿದ್ರು. ವೈದ್ಯರಾದ ಸುಮಾ ಅವರು ಹೆರಿಗೆ ಮಾಡಿಸಿದ್ದು, ದಿಢೀರ್ ರಕ್ತ ಬೇಕು ಎಂದು ಹೇಳಿದ್ರು. ಎಲ್ಲವನ್ನು ಹೊಂದಿಸಿಕೊಟ್ಟರೂ ಪತ್ನಿ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಇಲ್ಲಿಂದ ಸಾಗ ಹಾಕಿದ್ರು ಎಂದು ಗೋಳಾಡಿದರು. ಆದ್ರೆ, ಆರೋಪವನ್ನು ಆಸ್ಪತ್ರೆ ಆಡಳಿತ ಮಂಡಳಿ ಅಲ್ಲಗಳೆದಿದೆ.
ವೈದ್ಯರು ಹೇಳಿದ್ದೇನು?
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹಿಮ್ಸ್ ಶಸ್ತ್ರ ಚಿಕಿತ್ಸಕ, ಈ ಹಿಂದೆ ಅವರು ನಮ್ಮ ಆಸ್ಪತ್ರೆಗೆ ಬಂದಿರಲಿಲ್ಲ. ರಾತ್ರಿ ವೇಳೆ ಬಂದರೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ಆಗಿಲ್ಲ. ಮಹಿಳೆಗೆ ಹಠಾತ್ ಹೃದಯ ಸ್ಥಂಭನ ಆಗಿ ಕೋಮಾಗೆ ಹೋಗಿ ಸಮಸ್ಯೆ ಎದುರಾಗಿದೆ. ಆಸ್ಪತ್ರೆಯ ಸಿಬ್ಬಂದಿ ಅಥವಾ ವೈದ್ಯರಿಂದ ಯಾವುದೇ ಸಮಸ್ಯೆ ಆಗಿಲ್ಲ. ಮಗು ಕೂಡ ನಮ್ಮದೇ ಆಸ್ಪತ್ರೆಯ ಐಸಿಯುನಲ್ಲಿದ್ದು ಆರೈಕೆ ಮಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಈ ಮೂಲಕ ಶೃತಿ ಕುಟುಂಬಸ್ಥರ ಆರೋಪವನ್ನು ಅಲ್ಲಗಳೆದಿದ್ದಾರೆ.
ಒಟ್ಟಿನಲ್ಲಿ ಮತ್ತೊಂದು ಜೀವಕ್ಕೆ ಉಸಿರು ನೀಡಿ, ತನ್ನ ಕರುಳ ಬಳ್ಳಿಯನ್ನ ಕಣ್ತುಂಬಿಕೊಳ್ಳೋ ಮೊದಲೇ ತಾಯಿ ಸಾವನ್ನಪ್ಪಿರುವುದು ದುರಂತ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ