
ಸುರಪುರ, ಮಾ.31: ಕೇವಲ ಎರಡು ಎಕರೆ ತುಂಡು ಭೂಮಿಗಾಗಿ ದಶಕಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹವೊಂದು ಯುವಕನ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ 27 ವರ್ಷದ ಪರಮೇಶ್ವರ ಎಂಬ ಯುವಕನನ್ನು ಆತನ ದೊಡ್ಡಪ್ಪ ಹನುಮಂತರಾಯ ಮತ್ತು ಆತನ ಮಕ್ಕಳು ಸೇರಿ ತಲ್ವಾರ್, ಬರ್ಚಿ ಹಾಗೂ ಕಲ್ಲುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆಯಾದ ಪರಮೇಶ್ವರನ ತಂದೆ ಮಲ್ಲಪ್ಪ ಮತ್ತು ಆರೋಪಿ ಹನುಮಂತರಾಯ ಸಹೋದರರು. ತಲಾ 13 ಎಕರೆ ಜಮೀನು ಹಂಚಿಕೆಯಾಗಿದ್ದರೂ, ಮಲ್ಲಪ್ಪನ ಹೆಸರಿಗಿದ್ದ ಹೆಚ್ಚುವರಿ 2 ಎಕರೆ ಜಮೀನನ್ನು ಹನುಮಂತರಾಯ ಕಳೆದ 20 ವರ್ಷಗಳಿಂದ ಬಲವಂತವಾಗಿ ಉಳುಮೆ ಮಾಡುತ್ತಿದ್ದ. ತಂದೆಯ ಸಾವಿನ ನಂತರ ಮಗ ಪರಮೇಶ್ವರ ಪಂಚಾಯಿತಿ ನಡೆಸಿ, ಕಾನೂನು ಹೋರಾಟದ ಮೂಲಕ ಆ 2 ಎಕರೆ ಜಮೀನನ್ನು ವಾಪಸ್ ಪಡೆದಿದ್ದ. ಇದು ಹನುಮಂತರಾಯನ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿತ್ತು.
ನಿನ್ನೆ ರಾತ್ರಿ ಪರಮೇಶ್ವರ ಮನೆ ಬಳಿ ನಿಂತಿದ್ದಾಗ, ಹನುಮಂತರಾಯ ತನ್ನ ಮಕ್ಕಳು ಮತ್ತು ಸಂಬಂಧಿಕರ ಗುಂಪು ಕಟ್ಟಿಕೊಂಡು ಅಟ್ಯಾಕ್ ಮಾಡಿದ್ದಾನೆ. ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲೇ ಪರಮೇಶ್ವರನನ್ನು ಎಳೆದಾಡಿ, ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಪರಮೇಶ್ವರನ ಸಹೋದರ ರೇವಣಸಿದ್ದನ ಮೇಲೂ ಹಲ್ಲೆ ನಡೆದಿದ್ದು, ಆತ ಗಾಯಗೊಂಡಿದ್ದಾನೆ. ತೀವ್ರ ರಕ್ತಸ್ರಾವವಾದ ಕಾರಣ ಪರಮೇಶ್ವರ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಮಾರಕಾಸ್ತ್ರಗಳ ಆರ್ಭಟಕ್ಕೆ ಹೆದರಿ ಗ್ರಾಮಸ್ಥರು ಜಗಳ ಬಿಡಿಸಲು ಹೋಗದ ಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!
ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಒಟ್ಟು 21 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ