‘ರಾಜಕೀಯ ಪದೋನ್ನತಿ ಆಸೆ ನನಗೂ ಇದೆ’: ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್ – Kannada News | Karnataka Home Minister G Parameshwar on Political Aspirations, Central Funds for Police, and Jail Security

ಬೆಂಗಳೂರು, ಜ.1: ಡಿಸಿಎಂ ಡಿಕೆ ಶಿವಕುಮಾರ್​ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಸಿಎಂ ಕುರ್ಚಿಗಾಗಿ ಗುದ್ದಾಟ ನಡೆಸುತ್ತಿರುವ ವೇಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಇದೀಗ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಅವರು ಮಾಧ್ಯಮದ ಮುಂದೆ ವ್ಯಕ್ತಪಡಿಸಿದ್ದಾರೆ. “ರಾಜಕೀಯ ಪದೋನ್ನತಿ ಆಸೆ ನನಗೂ ಇದೆ” ಎಂದು ಹೇಳುವ ಮೂಲಕ ತಮ್ಮ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಆಂಬಿಷನ್ ಇರಬೇಕು ಎಂದು ತಮ್ಮ ಭಾವನೆಯನ್ನು ಅವರು ಹಂಚಿಕೊಂಡಿದ್ದಾರೆ. ತಾನು ಯಾವಾಗಲೂ ಆಶಾವಾದಿಯಾಗಿರಬೇಕು. ರಾಜಕೀಯಕ್ಕೆ ಸೇರುವಾಗ ಎಂಎಲ್‌ಎ ಆಗಿ, ನಂತರ ಮಂತ್ರಿಯಾಗಿ ಮುಂದುವರಿಯುವ ಆಸೆ ಇರುವುದು ಸಹಜ. ಪ್ರತಿಯೊಂದು ಹಂತದಲ್ಲೂ ಎತ್ತರದ ಸ್ಥಾನಕ್ಕೆ ಹೋಗುವ ಆಲೋಚನೆ ಇರುತ್ತದೆ ಎಂದು ಹೇಳಿದ್ದಾರೆ. ಇದರ ಜತೆಗೆ ತಮ್ಮ ಇಲಾಖೆಯ ಬಗ್ಗೆಯೂ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ 30ಕ್ಕೂ ಹೆಚ್ಚು ಡಿಐಜಿಗಳು ಮತ್ತು ಐಜಿಗಳಿಗೆ ಮುಂಬಡ್ತಿ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಅವರೆಲ್ಲರೂ ಉತ್ತಮವಾಗಿ ತರಬೇತಿ ಪಡೆದ ಐಪಿಎಸ್ ಅಧಿಕಾರಿಗಳಾಗಿದ್ದು, ರಾಜ್ಯಕ್ಕೆ ಉತ್ತಮ ಸೇವೆ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು. ಇಲಾಖೆಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರದಿಂದ 350 ಕೋಟಿ ರೂಪಾಯಿ ಅನುದಾನ ಮೊದಲ ಬಾರಿಗೆ ಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಎಡಿಜಿಪಿ ಮುರುಗನ್ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಬೆಳಗಾವಿ ಜೈಲಿನಲ್ಲಿ ಗಾಂಜಾ ಎಸೆಯುವಂತಹ ಘಟನೆಗಳ ಬಗ್ಗೆ ಡಿಜಿ ಅಲೋಕ್ ಕುಮಾರ್ ಸ್ಥಳ ಪರಿಶೀಲನೆಗೆ ಭೇಟಿ ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *