Headlines

‘ಲ್ಯಾಂಡ್​ಲಾರ್ಡ್’ ಟ್ರೈಲರ್: ಇದು ದಮಮಿತರ ಸಿಟ್ಟಿನ ಕತೆ – Kannada News | Duniya Vijay starrer Landlord Kannada Movie trailer released

ದುನಿಯಾ ವಿಜಯ್ (Duniya Vijay) ನಟನೆಯ ‘ಲ್ಯಾಂಡ್​​ಲಾರ್ಡ್’ ಸಿನಿಮಾದ ಟ್ರೈಲರ್ ಇಂದು (ಜನವರಿ 18) ಬಿಡುಗಡೆ ಆಗಿದೆ. ಕನ್ನಡ ಚಿತ್ರರಂಗದ ಯಶಸ್ವಿ ಕತೆಗಾರ ಜಡೇಶ್ ಹಂಪಿ ನಿರ್ದೇಶನ ಮಾಡಿರುವ ಈ ಸಿನಿಮಾ ಭೂಮಾಲೀಕರ ತುಳಿತಕ್ಕೆ ಒಳಗಾದವರ ಕತೆಯನ್ನು ಒಳಗೊಂಡಿರುವುದು ಟ್ರೈಲರ್​​ನಿಂದ ಗೊತ್ತಾಗುತ್ತಿದೆ. ಜಡೇಶ್ ಅವರ ನೆಚ್ಚಿನ ಜಾನರ್​​ ಇದಾಗಿದ್ದು, ಈ ಹಿಂದೆ ಜಡೇಶ್ ಅವರೇ ಕತೆ ಬರೆದಿದ್ದ ‘ಕಾಟೇರ’ ಸಿನಿಮಾದ ಕತೆಯೂ ಇದೇ ಮಾದರಿಯದ್ದಾಗಿತ್ತು. ‘ಲ್ಯಾಂಡ್​​ಲಾರ್ಡ್’ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ತಮಿಳಿನ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಅಸುರನ್’ ಅನ್ನು ನೆನಪಿಸುತ್ತಿದೆ ಈ ಸಿನಿಮಾ.

‘ಲ್ಯಾಂಡ್​ಲಾರ್ಡ್’ ಸಿನಿಮಾ ಹೆಸರೇ ಸೂಚಿಸುತ್ತಿರುವಂತೆ ಭೂಮಾಲಿಕರ ದರ್ಪದ ಕತೆ. ಜೀತದಾಳುಗಳ ನೋವಿನ ಕತೆ. ದುನಿಯಾ ವಿಜಯ್ ಅವರು ತಮ್ಮ ಇತರೆ ಕೆಲ ಸಿನಿಮಾಗಳಿಗಿಂತಲೂ ಭಿನ್ನವಾದ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ಇಲ್ಲಿ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ ಆದರೆ ಸಿನಿಮಾಕ್ಕೆ ಅವರೇ ನಾಯಕ. ಅಮಾನವೀಯ, ಅಹಂಕಾರಿ ಭೂಮಾಲೀಕನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದು, ರಾಜ್ ವಿಲನ್ ಆಗಿಯೂ ಸಖತ್ ಗಮನ ಸೆಳೆದಿರುವುದು ಟ್ರೈಲರ್​​ನಲ್ಲಿಯೇ ತಿಳಿದು ಬರುತ್ತಿದೆ.

ಟ್ರೈಲರ್ ಹೆಚ್ಚು ವಿಷಯಗಳನ್ನು ಬಿಟ್ಟುಕೊಟ್ಟಿಲ್ಲವಾದರೂ ಭೂಮಾಲೀಕರ ದೌರ್ಜನ್ಯಕ್ಕೆ ಒಳಗಾಗುವ ಕುಟುಂಬವೊಂದು ಅದನ್ನು ಮೆಟ್ಟಿ ನಿಲ್ಲುವ ಜೊತೆಗೆ ತಮ್ಮಂತೆ ಸಂತ್ರಸ್ತರಾದವರಲ್ಲಿ ಶಕ್ತಿ, ಮಾಹಿತಿ ತುಂಬುವ ಕತೆಯಿಂಬೆದು ತಿಳಿಯುತ್ತುಇದೆ. ಸಿನಿಮಾನಲ್ಲಿ ವಿಜಯ್ ಪುತ್ರಿ ರಿತನ್ಯ ಅವರು ನಟಿಸಿದ್ದು, ಪೊಲೀಸ್ ಕಾನ್​​ಸ್ಟೇಬಲ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಯುವ ನಟ ಶಿಶಿರ್ ಬೈಕಾಡಿ ಪಾತ್ರವೂ ಗಮನ ಸೆಳೆಯುತ್ತಿದೆ. ರಾಕೇಶ್ ಅಡಿಗ ಸಹ ಸಖತ್ ವಿಲನಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ರಚಿತಾ ರಾಮ್ ಪಾತ್ರವೂ ಖಡಕ್ ಆಗಿದೆ.

ಟ್ರೈಲರ್​​ನಲ್ಲಿ ಕೆಲವು ಅದ್ಧೂರಿ ಆಕ್ಷನ್ ದೃಶ್ಯಗಳು, ಕೆಲವು ಹಾಸ್ಯ ದೃಶ್ಯಗಳ ಝಲಕ್, ಹಾಡುಗಳು, ವಿಲನ್​​ನ ಅಬ್ಬರವನ್ನು ತೋರಿಸಲಾಗಿದೆ. ಒಟ್ಟಾರೆಯಾಗಿ ಜಡೇಶ ಅವರು ದಮನಿತರ ಸಿಟ್ಟಿನ ಕತೆಯನ್ನು ಆಕ್ಷನ್ ಲೇಪದೊಂದಿಗೆ ತೆರೆಗೆ ತಂದಿರುವುದು ಟ್ರೈಲರ್​​ನಿಂದ ತಿಳಿದು ಬರುತ್ತಿದೆ. ಸಿನಿಮಾಕ್ಕೆ ಹೇಮಂತ್ ಗೌಡ ಮತ್ತು ಕೆವಿ ಸಂಪತ್ ಅವರು ಬಂಡವಾಳ ಹೂಡಿದ್ದಾರೆ. ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್. ಸಂಭಾಷಣೆ ಬರೆದಿರುವುದು ಮಾಸ್ತಿ ಉಪ್ಪಾರಹಳ್ಳಿ. ಸಿನಿಮಾ ಜನವರಿ 23ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *