ಮಾರ್ಚ್ ೧೯ರಿಂದ ವಿಕ್ರಮ ಸಂವತ್ಸರ 2083 ಆರಂಭವಾಗಲಿಸೆ. ರೌದ್ರಿ ಅಥವಾ ರೌದ್ರ ಸಂವತ್ಸರದ ಆರಂಭ. ಈ ಕಾಲಗಣನೆಯನ್ನು ವಿಶೇಷವಾಗಿ ಉತ್ತರ ಭಾರತದಲ್ಲಿ ಅನುಸರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಈ ಕ್ರಮ ಕಂಡುಬರುವುದಿಲ್ಲ.
ಈ ಸಂವತ್ಸರದ ಆರಂಭ ಹಾಗೂ ಯುಗಾದಿಯ ಆರಂಭ ಎರಡೂ ಒಂದೇ. ಆದರೆ ವಿಕ್ರಮ ಎನ್ನುವ ರಾಜನ ಆಳ್ವಿಕೆಯ ಕಾಲದಿಂದ ಇದು ಆರಂಭವಾದ ಕಾರಣ ಸಂವತ್ಸರದಲ್ಲಿ ಮಾತ್ರ ವ್ಯತ್ಯಾಸ ಕಾಣಸಿಗುತ್ತದೆ. ಈ ವರ್ಷದ ರಾಜ ಗುರು ಅಂದರೆ ಬೃಹಸ್ಪತಿ. ಮಿಥುನ ಹಾಗೂ ತನ್ನ ಪರಮೋಚ್ಚ ರಾಶಿಯಾದ ಕರ್ಕಾಟಕದಲ್ಲಿ ಸಂಚರಿಸುತ್ತಾ ಸಕಲರಿಗೂ ಅತ್ಯಂತ ಶುಭದಾಯಕ ಸಂಗತಿಯಾಗಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಪರಮಶುಭ ಗ್ರಹ ಮತ್ತು ಜ್ಞಾನದ ಕಾರಕ ಎಂದು ಕರೆಯಲಾಗುತ್ತದೆ. ಇಂತಹ ಗ್ರಹವು ರಾಜನ ಸ್ಥಾನದಲ್ಲಿ ಕುಳಿತಾಗ ಇಡೀ ವರ್ಷದ ಮೇಲೆ ಬೀರುವ ಸಾತ್ವಿಕ ಪ್ರಭಾವ ವಿಶೇಷವಾಗಿರಲಿದೆ.
ಸುಭಿಕ್ಷೆ ಮತ್ತು ಕೃಷಿ ಫಲ :
ಗುರುವು ರಾಜನಾದಾಗ ಪ್ರಕೃತಿಯು ಮೃದುವಾಗುತ್ತದೆ. ಕಾಲಕಾಲಕ್ಕೆ ಮಳೆಯಾಗಿ ಭೂಮಿಯು ಹಸಿರಿನಿಂದ ಕಂಗೊಳಿಸುತ್ತದೆ. ವಿಶೇಷವಾಗಿ ಈ ವರ್ಷ ಧಾನ್ಯಗಳ ಇಳುವರಿ ಉತ್ತಮವಾಗಿರುತ್ತದೆ. ಕೃಷಿ ಕ್ಷೇತ್ರದಲ್ಲಿ ಲಾಭದಾಯಕ ವಾತಾವರಣ ನಿರ್ಮಾಣವಾಗಿ, ದೇಶದಲ್ಲಿ ಆಹಾರದ ಕೊರತೆ ನೀಗುತ್ತದೆ. ಹೈನುಗಾರಿಕೆ ಮತ್ತು ಹಣ್ಣು-ಹಂಪಲುಗಳ ಉತ್ಪಾದನೆ ಹೆಚ್ಚಾಗುತ್ತದೆ. ಜಲರಾಶಿಯಲ್ಲಿ ಸಂಚಾರ ಮಾಡುವ ಕಾರಣ ನೀರಿನಿಂದ ದ್ರವರೂಪದ ವಸ್ತುಗಳಿಂದ ಆಗಬಹುದಾದ ಎಲ್ಲ ರೀತಿ ಲಾಭಗಳೂ ಆಗಲಿವೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗರಣೆ :
ರಾಜ ಗುರುವಾಗಿರುವುದರಿಂದ ಒಳ್ಳೆಯ ಕಾರ್ಯಕ್ಕೆ ಅಥವಾ ಶುಭ ಕಾರ್ಯಕ್ಕೆ ಹೆಚ್ಚು ಒತ್ತು ನೀಡುತ್ತಾನೆ. ಸಮಾಜದಲ್ಲಿ ಧಾರ್ಮಿಕ ಚಿಂತನೆಗಳು ಹೆಚ್ಚುತ್ತವೆ. ಯಜ್ಞ, ಯಾಗಾದಿಗಳು ಮತ್ತು ದೇವತಾ ಕಾರ್ಯಗಳಲ್ಲಿ ಜನರ ಆಸಕ್ತಿ ಹೆಚ್ಚಾಗುತ್ತದೆ. ಜನರು ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತಾರೆ. ಅಧ್ಯಾತ್ಮಿಕ ಗುರುಗಳ ಪ್ರಭಾವ ಹೆಚ್ಚಾಗಲಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಸುತ್ತದೆ. ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಗಳ ಪುನರುತ್ಥಾನಕ್ಕೆ ಈ ವರ್ಷ ಪೂರಕವಾಗಿರುತ್ತದೆ. ರಾಜರಿಗೂ ಕೂಡ ಅಂತಹ ವಿಚಾರದಲ್ಲಿ ಆಸಕ್ತಿ ಹಾಗೂ ತೊಡಗಿಕೊಳ್ಳುವಿಕೆ ಅಧಿಕವಾಗಲಿದೆ.
ಶಿಕ್ಷಣ ಮತ್ತು ನ್ಯಾಯಾಂಗ ವ್ಯವಸ್ಥೆ :
ಗುರುವು ಜ್ಞಾನದ ಸಂಕೇತ. ಹೀಗಾಗಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ದೇಶವು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತದೆ. ನ್ಯಾಯಾಂಗ ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿದ್ದು, ಜನಸಾಮಾನ್ಯರಿಗೆ ನ್ಯಾಯ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆಡಳಿತಗಾರರು ಪ್ರಜೆಗಳ ಹಿತದೃಷ್ಟಿಯಿಂದ ಸೌಮ್ಯ ಮತ್ತು ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಆರ್ಥಿಕ ಮತ್ತು ಸಾಮಾಜಿಕ ಪ್ರಭಾವ :
ದೇಶದ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಬಂಗಾರ ಮತ್ತು ಅಮೂಲ್ಯ ರತ್ನಗಳ ಬೆಲೆಯಲ್ಲಿ ಏರಿಕೆ ಕಂಡುಬಂದರೂ, ಜನರ ಖರೀದಿ ಸಾಮರ್ಥ್ಯ ಚೆನ್ನಾಗಿರುತ್ತದೆ. ಸಮಾಜದಲ್ಲಿ ಗೌರವ, ಮರ್ಯಾದೆ ಮತ್ತು ಮಾನವೀಯ ಮೌಲ್ಯಗಳಿಗೆ ಬೆಲೆ ಸಿಗುತ್ತದೆ. ಕ್ರೂರ ಕೃತ್ಯಗಳು ಕಡಿಮೆಯಾಗಿ, ಜನರು ಪರಸ್ಪರ ಸಹಕಾರದಿಂದ ಬದುಕುತ್ತಾರೆ. ವೈಮನಸ್ಯ, ಯುದ್ಧ ಇಂತಹವುಗಳು ಕಡಿಮೆಯಾಗುತ್ತವೆ.
ರೌದ್ರ ಸಂವತ್ಸರದ ಪ್ರಭಾವ :
ಸಂವತ್ಸರದ ಹೆಸರು ‘ರೌದ್ರ’ ಎಂದಿದ್ದರೂ, ರಾಜ ಗುರುವಾಗಿರುವುದರಿಂದ ನಕಾರಾತ್ಮಕ ಅಂಶಗಳು ನಿಯಂತ್ರಣದಲ್ಲಿರುತ್ತವೆ. ಆದರೆ, ಮಂತ್ರಿಯಾಗಿ ಮಂಗಳನಿರುವುದರಿಂದ ಕೆಲವು ರಾಜತಾಂತ್ರಿಕ ಸಂಘರ್ಷಗಳು ಅಥವಾ ಸಣ್ಣಪುಟ್ಟ ವಿವಾದಗಳು ತಲೆದೋರಬಹುದು. ಆದರೂ, ಗುರುವಿನ ಮಾರ್ಗದರ್ಶನದಿಂದ ಅಂತಿಮವಾಗಿ ಶಾಂತಿ ನೆಲೆಸುತ್ತದೆ ಅಥವಾ ಅದರ ಪರಿಣಾಮ ಸಮಾಜಕ್ಕೆ ಒಳ್ಳೆಯಾದೇ ಆಗಲಿದೆ.
ವಿಕ್ರಮ ಸಂವತ್ಸರ 2083ರಲ್ಲಿ ರಾಜ ಗುರುವಾಗಿರುವುದು ದೇಶಕ್ಕೆ ಶುಭೋದಯದ ಮುನ್ಸೂಚನೆಯಾಗಿದೆ. ಇದು ಜ್ಞಾನ, ಸಮೃದ್ಧಿ ಮತ್ತು ಶಾಂತಿಯ ವರ್ಷವಾಗಲಿದೆ.
ಲೋಹಿತ ಹೆಬ್ಬಾರ್