ವಿಜಯಪುರ: ಅನ್ನದಾತರ ಪಾಲಿಗೆ ಕಂಟಕವಾದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ; ಏಕೆ?

ವಿಜಯಪುರ: ಅನ್ನದಾತರ ಪಾಲಿಗೆ ಕಂಟಕವಾದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ; ಏಕೆ?

ವಿಜಯಪುರ, ಏಪ್ರಿಲ್​ 05: ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಅನ್ನದಾತರ (Farmers) ಪಾಲಿಕೆ ಕಂಟಕವಾಗಿದೆ. ಎನ್​ಟಿ ಪಿಸಿ (NTPC) ಕಾರಣದಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಸ್ಥಾವರದ ಸುತ್ತಮುತ್ತಲದ ಕೊಳವೆ ಬಾವಿಗಳನ್ನು ನಂಬಿ ಕೃಷಿ ಮಾಡುತ್ತಿದ್ದವರಿಗೆ ಬರೆ ಬಿದ್ದಂತಾಗಿದೆ. ಸಮಸ್ಯೆಗಳ ಬಗ್ಗೆ ಎನ್​​ಟಿಪಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರ ಪಾಲಿನ ಜೀವ ಜಲ ವಿಷವಾಗುತ್ತಿದೆ.

ಎಸ್​ಟಿಪಿಸಿ ನಿರ್ಮಾಣಕ್ಕೆ ಮೊದಲಿನಿಂದಲೂ ವಿರೋಧ

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಬಳಿ ಉಷ್ಣ ವಿದ್ಯುತ್ ಸ್ಥಾವರಕ್ಕೆ 2012 ಜೂನ್ 12ರಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. 2017ರಲ್ಲಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಆರಂಭಿಸಲಾಗಿತ್ತು. ಎಸ್​ಟಿಪಿಸಿ ನಿರ್ಮಾಣಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತವಾಗಿತ್ತು. ಸರ್ಕಾರ ಹಾಗೂ ಎನ್​ಟಿಪಿಸಿ ಅಧಿಕಾರಿಗಳು ಆಧುನಿಕ ತಂತ್ರಜ್ಞಾನದಿಂದ ಎಲ್ಲಾ ನಿರ್ವಹಣೆ ಮಾಡೋದಾಗಿ ಭರವಸೆ ನೀಡಿತ್ತು.

ಇದನ್ನೂ ಓದಿ: ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ: ಧಾರವಾಡ, ವಿಜಯಪುರದಲ್ಲಿ ಅಪಾರ ಬೆಳೆ ನಾಶ

ವಿದ್ಯುತ್ ಉತ್ಪಾದನೆಯಿಂದ ಸ್ಥಾವರಗಳಿಂದ ಬರುವ ಹಾರು ಬೂದಿಯನ್ನು ನೀರಿನ ಮೂಲಕ ಅನತಿ ದೂರದಲ್ಲಿನ ಮಸೂತಿ ಗ್ರಾಮದ ಬಳಿ ಕೃತಕವಾಗಿ ನಿರ್ಮಾಣ ಮಾಡಿರುವ ಕೆರೆಗಳಲ್ಲಿ ಸಂಗ್ರಹ ಮಾಡಲಾಗುತ್ತದೆ. ಹಾರುಬೂದಿಯನ್ನು ನೀರಲ್ಲಿ ಮಿಶ್ರಣ ಮಾಡಿ ಉಷ್ಣ ವಿದ್ಯುತ್​ ಸ್ಥಾವರದಿಂದ ನಾಲ್ಕು ಕಿ.ಮೀ ದೂರದಲ್ಲಿನ ಮಸೂತಿ ಗ್ರಾಮದ ಬಳಿ 1400 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ನಾಲ್ಕು ಕೆರೆಗಳಿಗೆ ಬಿಡಲಾಗುತ್ತಿದೆ. ಅಲ್ಲಿ ನೀರನ್ನು ಮತ್ತೆ ಫಿಲ್ಟರ್ ಮಾಡಿ ನೀರನ್ನು ಮರುಬಳಕೆ ಮಾಡಲಾಗುತ್ತದೆ.

ಹಾರುಬೂದಿ ಹೂಳಿನ ರೂಪದಲ್ಲಿ ಕೆರೆಯಲ್ಲಿ ಸಂಗ್ರಹವಾಗುತ್ತದೆ. ಅದನ್ನು ಸಿಮೆಂಟ್ ಫ್ಯಾಕ್ಟರಿಗೆ ಹಾಗೂ ಇಟ್ಟಿಗೆ ತಯಾರಿಕೆಗೆ ನೀಡಲಾಗುತ್ತದೆ. ಆದರೆ ಸಮಸ್ಯೆ ಇಲ್ಲಿಯೇ ಆರಂಭವಾಗಿದೆ. ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯನ್ನು ಹೊತ್ತು ತಂದ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತಿದ್ದು, ಅದೇ ನೀರು ಕೆರೆಗಳ ಕೆಳಗಿನ ಭಾಗ ರೈತರ ಪಾಲಿಗೆ ವಿಷವಾಗುತ್ತಿದೆ.

ಶಾಕಿಂಗ್​ ವರದಿ 

ಹಾರುಬೂದಿಯನ್ನು ಸಂಗ್ರಹಿಸಿದ್ದ ಕೆರೆಗಳ ನೀರು ಸುತ್ತಮುತ್ತಲಿನ ಜಮೀನುಗಳಲ್ಲಿನ ತೆರೆದ ಬಾವಿ, ಕೊಳವೆ ಬಾವಿಗಳ ಅಂತರ್ಜಲದಲ್ಲಿ ಸೇರಿಕೊಂಡಿದೆ. ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಜಮೀನಿನ ಮೇಲ್ಭಾಗದಲ್ಲಿ ಉಪ್ಪಿನಾಂಶ ಸಂಗ್ರಹವಾಗುತ್ತಾ ಹೋಗಿ ಸವಳು ಜವಳಾಗಿದೆ. ಇಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಅಸಾಧ್ಯವಾಗಿದೆ. ಲಕ್ಷಾಂತರ ರೂ ಹಣ ಖರ್ಚು ಮಾಡಿದರೂ ಫಸಲು ಕುಂಠಿತಗೊಂಡಿದೆ. ಇದರಿಂದ ಬೇಸತ್ತ ರೈತರು ಇಲ್ಲಿನ ತೆರೆದ ಬಾವಿ ಹಾಗೂ ಕೊಳವೆ ಬಾವಿಯ ನೀರನ್ನು ಪ್ರಯೋಗಾಲಯದಲ್ಲಿ ಈ ಹಿಂದೆಯೇ ಪರೀಕ್ಷೆ ಮಾಡಿಸಿದಾಗ ಜನ, ಜಾನುವಾರುಗಳು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ಯೋಗ್ಯವಿಲ್ಲವೆಂಬ ಶಾಕಿಂಗ್​ ವರದಿ ಬಂದಿದೆ.

ಒಂದೆಡೆ ಜಮೀನು ಹಾಳಾಗಿದೆ, ಮತ್ತೊಂದೆಡೆ ನಮ್ಮ ಭಾಗದ ಅಂತರ್ಜಲವೂ ವಿಷವಾಗುತ್ತಿದೆ ಎಂದು ರೈತರು ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ತಮ್ಮದೇ ಜಮೀನಿನ ಬಾವಿ, ಕೊಳವೆ ಬಾವಿಯ ನೀರನ್ನು ಕುಡಿಯುತ್ತಿದ್ದರು. ಆದರೆ ಇದೀಗ ಹಾರುಬೂದಿಯ ಕೆರೆಗಳ ನೀರು ಈ ಭಾಗದ ಅಂತರ್ಜಲವನ್ನು ಸೇರಿಕೊಂಡಿರುವ ಕಾರಣ ಇಲ್ಲಿಯ ನೀರಿನ ಸ್ವಾದನೇ ಬದಲಾಗಿದೆ. ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ಹಾರುಬೂದಿಯ ಸಂಗ್ರಹ ಮಾಡುವ ಕೆರೆಗಳ ನೀರು ಇಡೀ ರೈತಕುಲಕ್ಕೆ ವಿಷವಾಗಿದೆ.

ಇದನ್ನೂ ಓದಿ: ವಿಶ್ವಗುರು ಬಸವಣ್ಣ-ಅಕ್ಕಮಹಾದೇವಿ ಬಗ್ಗೆ ಅಶ್ಲೀಲ ಮಾತು: ಸಿಡಿದೆದ್ದ ಅನುಯಾಯಿಗಳು

ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯ ಜೊತೆಗಿರುವ ಕೆಮಿಕಲ್ಸ್ ಸುತ್ತಮುತ್ತಲ ಭಾಗದ ಅಂತರ್ಜಲ ಸೇರುತ್ತಿರುವುದು ಮಾತ್ರ ಮಹಾದುರಂತವೇ ಆಗಿದೆ. ಸಮಸ್ಯೆಗೀಡಾದ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ರೈತರಿಗೆ ಸೂಕ್ತ ಪರಿಹಾರ ನೀಡುವುದೇ ಇದಕ್ಕೆ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ, ಎನ್​​ಟಿಪಿಸಿ ಹಾಗೂ ಜಿಲ್ಲಾಡಳಿತ ಯಾವ ಕ್ರಮತೆಗೆದುಕೊಳ್ಳುತ್ತಾರೋ ಕಾಯ್ದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *