Headlines

ವಿಜಯ್ ಕೊನೆಯ ಸಿನಿಮಾ ಸೌದಿ ಅರೆಬಿಯಾನಲ್ಲಿ ಬ್ಯಾನ್: ಕಾರಣವೇನು? – Kannada News | Vijay starrer Jana Nayagan movie facing ban in Saudi Arabia

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಬೆಂಗಳೂರು ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಓಪನ್ ಆಗಿದೆ. ರಾಜಕೀಯಕ್ಕೆ ಎಂಟ್ರಿ ನೀಡಿರುವ ದಳಪತಿ ವಿಜಯ್, ‘ಜನ ನಾಯಗನ್’ ಬಳಿಕ ತಾವು ಇನ್ಯಾವುದೇ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಹೀಗಾಗಿ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಿಜಯ್​ಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಮೆರಿಕ, ಮಲೇಷ್ಯಾ, ಸಿಂಗಪುರ, ಗಲ್ಫ್ ರಾಷ್ಟ್ರಗಳಲ್ಲೂ ಅಭಿಮಾನಿಗಳನ್ನು ವಿಜಯ್ ಹೊಂದಿದ್ದಾರೆ. ಆದರೆ ಇದೀಗ ಸೌದಿ ಅರೆಬಿಯಾನಲ್ಲಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾದ ಮೇಲೆ ನಿಷೇಧ ಹೇರಲಾಗಿದೆಯಂತೆ.

ಸೌದಿ ರಾಷ್ಟ್ರಗಳಲ್ಲಿ ಭಾರತೀಯ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ಅಲ್ಲಿನ ಅನಿವಾಸಿ ಭಾರತೀಯರ ಜೊತೆಗೆ ಸ್ವತಃ ಸೌದಿ ಜನರೂ ಸಹ ಭಾರತದ ಸಿನಿಮಾಗಳ ಅಭಿಮಾನಿಗಳಾಗಿದ್ದಾರೆ. ಆದರೆ ಆಗಾಗ್ಗೆ ಕೆಲವು ಭಾರತೀಯ ಸಿನಿಮಾಗಳ ಮೇಲೆ ನಿಷೇಧಗಳನ್ನು ಹೇರುತ್ತಲೇ ಬಂದಿವೆ ಗಲ್ಫ್ ರಾಷ್ಟ್ರಗಳು. ಇತ್ತೀಚೆಗಷ್ಟೆ ಬಿಡುಗಡೆ ಆಗಿ ಭಾರತದಲ್ಲಿ ಬ್ಲಾಕ್ ಬಸ್ಟರ್ ಆಗಿರುವ ‘ಧುರಂಧರ್’ ಸಿನಿಮಾಕ್ಕೂ ಸಹ ಸೌದಿ ರಾಷ್ಟ್ರ ನಿಷೇಧ ಹೇರಿದೆ. ಇದೀಗ ವಿಜಯ್ ಅವರ ಕೊನೆಯ ಸಿನಿಮಾಕ್ಕೂ ನಿಷೇಧ ಹೇರಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಜನ ನಾಯಗನ್’ ರಿಲೀಸ್​ಗೆ ಸಂಕಷ್ಟ? ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಪತ್ರ

ಸಾಮಾನ್ಯವಾಗಿ ಪಾಕಿಸ್ತಾನ ಅಥವಾ ಯಾವುದೇ ಮುಸ್ಲಿಂ ರಾಷ್ಟ್ರ ವಿರೋಧಿ ಅಂಶಗಳು ಅಥವಾ ಇಸ್ಲಾಂ ಧರ್ಮವನ್ನು ಟೀಕಿಸುವ, ಮುಸ್ಲಿಂ ರಾಷ್ಟ್ರಗಳನ್ನು ಖಳರಂತೆ ಬಿಂಬಿಸುವ ಸಿನಿಮಾಗಳನ್ನು ಸೌದಿ ರಾಷ್ಟ್ರಗಳು ನಿಷೇಧಿಸುತ್ತಾ ಬಂದಿವೆ. ‘ಧುರಂಧರ್’ ಸಿನಿಮಾ ನಿಷೇಧಕ್ಕೂ ಇದೇ ಕಾರಣವಾಗಿತ್ತು. ಇದೀಗ ‘ಜನ ನಾಯಗನ್’ ನಿಷೇಧಕ್ಕೂ ಇದೇ ಕಾರಣ ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾದ ವಿಲನ್ ಪಾಕಿಸ್ತಾನದ ವ್ಯಕ್ತಿಯಾಗಿದ್ದು, ಸಿನಿಮಾನಲ್ಲಿ ಸಹ ಪಾಕಿಸ್ತಾನದ ವಿರುದ್ಧ, ಪಾಕ್ ಸೈನ್ಯದ ವಿರುದ್ಧ ಸಂಭಾಷಣೆಗಳು, ದೃಶ್ಯಗಳು ಇವೆ. ಟ್ರೈಲರ್​​ನಲ್ಲಿ ಸಹ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಇದೇ ಕಾರಣಕ್ಕೆ ‘ಜನ ನಾಯಗನ್’ ಸಿನಿಮಾಕ್ಕೆ ಸೌದಿಯಲ್ಲಿ ಸೆನ್ಸಾರ್ ನಿರಾಕರಿಸಲಾಗಿದೆಯಂತೆ. ಆದರೆ ಚಿತ್ರತಂಡವು, ಕೆಲವು ಸಂಭಾಷಣೆಗಳನ್ನು ಬದಲಾಯಿಸಿ, ಮ್ಯೂಟ್ ಮಾಡಿ ಹಾಗೂ ಕೆಲವನ್ನು ಡಿಲೀಟ್ ಮಾಡುವ ಮೂಲಕ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್ ಪಡೆಯಲು ಮುಂದಾಗಿದೆ ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆಗಿದ್ದು, ಸಿನಿಮಾನಲ್ಲಿ ವಿಜಯ್ ಸಾಕು ಪುತ್ರಿಯಾಗಿ ಮಲಯಾಳಂ ನಟಿ ಮಮಿತಾ ಬಿಜು ನಟಿಸಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ಇದ್ದಾರೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ‘ಭಗವಂತ ಕೇಸರಿ’ ರೀಮೇಕ್ ಆದರೂ ಸಹ ಕೆಲವು ಹೆಚ್ಚುವರಿ ದೃಶ್ಯಗಳನ್ನು ಸಿನಿಮಾನಲ್ಲಿ ಸೇರಿಸಲಾಗಿದ್ದು, ವಿಜಯ್ ಅವರ ರಾಜಕೀಯಕ್ಕೆ ಸಹಾಯವಾಗುವಂಥ ದೃಶ್ಯಗಳು, ಸಂಭಾಷಣೆಗಳು ಸಿನಿಮಾನಲ್ಲಿ ಹೇರಳವಾಗಿ ಇರಲಿವೆಯಂತೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *