ವಿದೇಶಕ್ಕೆ ಹೋಗಿ ಮತ್ತೆ ಭಾರತದ ಪ್ರಜಾಪ್ರಭುತ್ವವನ್ನು ಆಡಿಕೊಂಡ ರಾಹುಲ್​ಗೆ ಬಿಜೆಪಿ ತಿರುಗೇಟು – Kannada News | Rahul Gandhi Abroad: BJP Labels Him Anti India Over Democracy Claims

ನವದೆಹಲಿ, ಡಿಸೆಂಬರ್ 23: ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ನೀಡಿರುವ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಪ್ರತಿ ವರ್ಷವೂ ರಾಹುಲ್ ಗಾಂಧಿ ವಿದೇಶಗಳಿಗೆ ಪ್ರವಾಸ ಹೋದಾಗ ಭಾರತದ ಬಗ್ಗೆ ಒಂದಲ್ಲಾ ಒಂದು ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ರಾಹುಲ್ ಮತ್ತು ಕಾಂಗ್ರೆಸ್​​ ಭಾರತೀಯ ಪ್ರಜಾಪ್ರಭುತ್ವದಲ್ಲಿ ಅವ್ಯಸವ್ಥೆ ಮತ್ತು ಅಶಾಂತಿಯನ್ನು ಬಯಸುತ್ತಿವೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ.

ರಾಹುಲ್ ಗಾಂಧಿ ಹಾಗೂ ಜಾರ್ಜ್​ ಸೊರೊಸ್ ಭಾರತೀಯ ಪ್ರಜಾಪ್ರಭುತ್ವದಲ್ಲಿ ಅವ್ಯವಸ್ಥೆ ಉಂಟು ಮಾಡಲು ಭಾರತ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ವಿದೇಶಕ್ಕೆ ಹೋಗುತ್ತಾರೆ ಎಂದು ಭಂಡಾರಿ ಪೋಸ್ಟ್​ ಮಾಡಿದ್ದಾರೆ.

ಕಾಂಗ್ರೆಸ್ ಭಾರತೀಯ ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತದೆ, ಕಾಂಗ್ರೆಸ್ ಭಾರತದ ಪ್ರಗತಿಯನ್ನು ದ್ವೇಷಿಸುತ್ತದೆ, ರಾಹುಲ್ ಗಾಂಧಿಯವರ ಕಾಂಗ್ರೆಸ್ ಅರಾಜಕತೆಯನ್ನು ಬಯಸುತ್ತದೆ ಎಂದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿ, ಅವರು ದೇಶದ ವಿರುದ್ಧ ಮಾತನಾಡಲು ವಿದೇಶಕ್ಕೆ ಹೋಗುತ್ತಾರೆ ಎಂದು ಆರೋಪಿಸಿದರು.

ಮತ್ತಷ್ಟು ಓದಿ: Manufacturing sector: ಮತ್ತೆ ವಿದೇಶದಲ್ಲಿ ಭಾರತದ ವಿರುದ್ಧ ರಾಹುಲ್ ಧ್ವನಿ; ಸತ್ಯ ಎಷ್ಟು, ಸುಳ್ಳೆಷ್ಟು?

ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಲ್ಲ, ಬದಲಾಗಿ ವಿದೇಶಕ್ಕೆ ಹೋಗಿ ರಾಷ್ಟ್ರದ ವಿರುದ್ಧ ಮಾತನಾಡುವ ಭಾರತ ವಿರೋಧಿ ನಾಯಕ. ಹೀಗೆ ಮಾಡುವುದರಿಂದ ಅವರು ಏನನ್ನು ಗಳಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿಯ ಬಗ್ಗೆ ಯಾವುದೇ ಮಾತುಕತೆ ಇಲ್ಲ, ಯಾರು ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂಬುದರ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ.

ರಾಹುಲ್ ಗಾಂಧಿ ವಿಡಿಯೋ

ದೇಶದ ಸಾಂಸ್ಥಿಕ ರಚನೆಗಳನ್ನು ಬಿಜೆಪಿ ತನ್ನ ವಶಕ್ಕೆ ತೆಗೆದುಕೊಂಡಿದೆ ಮತ್ತು ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.ಭಾರತದ ಸಾಂಸ್ಥಿಕ ರಚನೆಯನ್ನು ಬಿಜೆಪಿ ತನ್ನ ವೈಯಕ್ತಿಕ ಆಸ್ತಿಯೆಂದು ಪರಿಗಣಿಸುತ್ತದೆ ಮತ್ತು ಅದನ್ನು ತನ್ನ ರಾಜಕೀಯ ಶಕ್ತಿಯನ್ನು ಹೆಚ್ಚಿಸಲು ಬಳಸುತ್ತದೆ ಎಂದು ಜರ್ಮನಿಯಲ್ಲಿ ಹೇಳಿದ್ದರು. ಭಾರತದಲ್ಲಿ ಸಂಸ್ಥೆಗಳು ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದವೋ ಆ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.

ರಾಹುಲ್ ಗಾಂಧಿ ತಮ್ಮ ಮತ ಕಳ್ಳತನದ ಆರೋಪಗಳನ್ನು ಪುನರುಚ್ಚರಿಸಿದರು. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಅವರು ಹೇಳಿದರು. ಹರಿಯಾಣ ಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದಿದೆ, ಆದರೆ ಬಿಜೆಪಿ ಜನಾದೇಶವನ್ನು ಕದ್ದಿದೆ ಎಂದು ಅವರು ಹೇಳಿದರು, ಅದರ ಪುರಾವೆಗಳನ್ನು ನಾನು ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತುತಪಡಿಸಿದ್ದೇನೆ ಎಂದರು.

ಮಹಾರಾಷ್ಟ್ರ ಚುನಾವಣೆಗಳು ನ್ಯಾಯಯುತವಾಗಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ನೇರ ಪ್ರಶ್ನೆಗಳನ್ನು ಕೇಳಿದ್ದೆ, ಆದರೆ ಸ್ಪಷ್ಟ ಉತ್ತರಗಳು ಸಿಗಲಿಲ್ಲ, ಚುನಾವಣಾ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಎಂದು ಅವರು ಆರೋಪಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:40 pm, Tue, 23 December 25

Source link

Leave a Reply

Your email address will not be published. Required fields are marked *