‘ದೇವಸಸ್ಯ’ (Devasasya) ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಕನ್ನಡ, ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ‘ಅನಂತ ಫಿಲ್ಮ್ಸ್’ ಬ್ಯಾನರ್ ಮೂಲಕ ಅನಂತಮೂರ್ತಿ ಎಂ. ಹೆಗಡೆ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕಾರ್ತಿಕ್ ಭಟ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕೊನೆಯ ದಿನದ ಶೂಟಿಂಗ್ ಮಾಗಡಿ ರಸ್ತೆಯಲ್ಲಿರುವ ಪುಟ್ಟಣ್ಣ ಕಣಗಾಲ್ ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ಸುದ್ದಿಗೋಷ್ಠಿ ಮಾಡಲಾಯಿತು. ‘1995ರ ಕಾಲಘಟ್ಟದಲ್ಲಿ ನಡೆಯುವ ನಮ್ಮ ಮಣ್ಣಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ’ ಎಂದು ಚಿತ್ರತಂಡ ಹೇಳಿದೆ.
ಈ ಸಿನಿಮಾದಲ್ಲಿ ಸಿದ್ದಿ ಸಮುದಾಯ ಸೆಲ್ವಿನ್ ದೇಸಾಯಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಊರಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದ ಅವರಿಗೆ ಈ ಚಿತ್ರದ ಮೂಲಕ ಹೀರೋ ಆಗುವ ಅವಕಾಶ ಸಿಕ್ಕಿದೆ. 2 ವರ್ಷಗಳ ತರಬೇತಿ ಪಡೆದು ಅವರು ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ಆಹಾನ್ ಗೌಡ ಹಾಗೂ ಬಿಂಬಿಕಾ ಜೆ. ರಾವ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ 150ಕ್ಕೂ ಹೆಚ್ಚು ಸಿದ್ದಿ ಕಲಾವಿದರು ನಟಿಸಿರುವುದು ವಿಶೇಷ.
‘ದೇವಸಸ್ಯ’ ಸಿನಿಮಾಗಾಗಿ 1995ರ ಕಾಲಘಟ್ಟದ ಹಳ್ಳಿಯೊಂದರ ಸೆಟ್ ಹಾಕಿ 93 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಚಿತ್ರದ ಬಗ್ಗೆ ನಿರ್ಮಾಪಕ ಅನಂತಮೂರ್ತಿ ಹೆಗಡೆ ಅವರು ಮಾತನಾಡಿದರು. ‘ಮೊದಲಿಂದಲೂ ನನಗೆ ಸಿನಿಮಾ ಮೇಲೆ ಬಹಳ ಆಸಕ್ತಿ. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಉತ್ತರ ಕನ್ನಡದಲ್ಲೇ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ. ಅದ್ಭುತವಾದ, ವಿಶೇಷವಾದ ಸಂಜೀವಿನಿ ಗಿಡವೇ ದೇವಸಸ್ಯ. ಇಂತಹ ವಿಶಿಷ್ಟವಾದ ಸ್ಕ್ರಿಪ್ಟ್ ಸಿಕ್ಕಿರೋದು ನಮ್ಮ ಅದೃಷ್ಟ. ನಿರ್ದೇಶಕರು ಈ ಸಿನಿಮಾಗಾಗಿ 3 ವರ್ಷ ಕಷ್ಟಪಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಕೆಲವು ಸಿನಿಮಾ, ಸೀರಿಯಲ್ಗಳಿಗೆ ಬರಹಗಾರನಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಕಾರ್ತಿಕ್ ಭಟ್ ಅವರು ಮೊದಲ ಬಾರಿಗೆ ನಿರ್ದೇಶಕನಾಗಿ ‘ದೇವಸಸ್ಯ’ ಸಿನಿಮಾ ಮಾಡುತ್ತಿದ್ದಾರೆ. ‘ಶಿರಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಬಗ್ಗೆ ಸಿನಿಮಾದಲ್ಲಿ ಹೇಳಲಿದ್ದೇವೆ. ಎರಡು ಊರುಗಳ ಮಧ್ಯೆ ನಡೆಯುವ ಕಥೆಯಿದು’ ಎಂದು ಅವರು ಹೇಳಿದರು.
ಇದನ್ನೂ ಓದಿ: ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’
ನಟ ಸೆಲ್ವಿನ್ ದೇಸಾಯಿ ಮಾತನಾಡಿ, ‘ನಾನು ಊರಲ್ಲಿ ಟ್ರ್ಯಾಕ್ಟರ್ ಓಡಿಸಿಕೊಂಡಿದ್ದೆ. ನಿರ್ದೇಶಕರು ಬಂದು ಸಿನಿಮಾದಲ್ಲಿ ಆಕ್ಟ್ ಮಾಡ್ತೀಯಾ ಅಂತ ಕೇಳಿದರು. ನನ್ನಂಥವನಿಂದ ಸಾಧ್ಯವಾ ಅಂತ ನಕ್ಕಿದ್ದೆ. ನಂತರ ಅವರೇ ಕರೆದುಕೊಂಡು ಹೋಗಿ ಅಭಿನಯ, ಸಾಹಸ ಕಲಿಸಿದರು’ ಎಂದರು. ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅಯ್ಯಪ್ಪ ಶರ್ಮ, ರವಿ ಮೂರೂರು, ಮಂಜುನಾಥ ಹೆಗಡೆ, ಗೀತಾ ಸಿದ್ಧಿ ಮುಂತಾದವರ ಪಾತ್ರವರ್ಗದಲ್ಲಿ ಇದ್ದಾರೆ. ಈ ಸಿನಿಮಾಗೆ ಯಶವಂತ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಹರಿ ಅಜಯ್ ಅವರು ಸಂಗೀತ ನೀಡಿದ್ದಾರೆ. ಶ್ರೀಕಾಂತ್ ಅವರು ಸಂಕಲನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.