
ಪ್ರೇಕ್ಷಕರ ನೆಚ್ಚಿನ ‘ಉದಯ’ ಟಿವಿ ಈಗ ‘ಸನ್ ಉದಯ’ (Sun Udaya) ಎಂಬ ಹೊಸ ಹೆಸರಿನೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಯುಗಾದಿ ಹಬ್ಬ ಎಂದರೆ ಹೊಸ ವರ್ಷದ ಆರಂಭ. ಉದಯ ಟಿವಿಯು ಯುಗಾದಿಯ ದಿನವೇ ‘ಸನ್ ಉದಯ’ವಾಗಿ ಬದಲಾಗಿದೆ. ಕಳೆದ ಮೂರು ದಶಕಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ಈ ವಾಹಿನಿಯಲ್ಲಿ ಈಗ ಸಾಕಷ್ಟು ಹೊಸತನವನ್ನು ಪರಿಚಯಿಸಲಾಗುತ್ತಿದೆ. ಅದರ ಮೊದಲ ಹಂತವಾಗಿ ಸೋಮವಾರದಿಂದ (ಮಾರ್ಚ್ 23) ಹೊಸ ಸೀರಿಯಲ್ ‘ಮೂಗುತಿ ಮಲ್ಲಿ’ (Muguthi Malli) ಪ್ರಸಾರ ಆರಂಭ ಆಗುತ್ತಿದೆ.
ಹೌದು, ಮಾರ್ಚ್ 23ರಿಂದ ಸೋಮವಾರದಿಂದ ಶನಿವಾರ ರಾತ್ರಿ 8 ಗಂಟೆಗೆ ‘ಮೂಗುತಿ ಮಲ್ಲಿ’ ಸೀರಿಯಲ್ ಬರಲಿದೆ. ಇದೊಂದು ಲವ್ ಸ್ಟೋರಿ ಹೊಂದಿರುವ ಧಾರಾವಾಹಿ. ಶ್ರೀಮಂತರು ಎಂದರೆ ದೂರ ಓಡಿ ಹೋಗುವ ಹುಡುಗಿಯ ಕಥೆ ಇದು. ಕಷ್ಟದಲ್ಲಿ ಬೆಳೆದ ಮಲ್ಲಿ ಎಂಬ ಹುಡುಗಿ ಚೂಟಿ, ಘಾಟಿ ಮತ್ತು ಸ್ವಾಭಿಮಾನಿ. ಆಕೆಯ ಮೇಲೆ ಶ್ರೀಮಂತ ಹುಡುಗನಿಗೆ ಲವ್ ಆದರೆ? ಅದೇ ಈ ಧಾರಾವಾಹಿಯ ಕಹಾನಿ.
ಮಲ್ಲಿಯ ಅಣ್ಣ ಉಂಡಾಡಿ ಗುಂಡ ಆದ್ದರಿಂದ ಮನೆ ಹೊಣೆಗಾರಿಕೆ ಆಕೆ ಹೆಗಲ ಮೇಲಿದೆ. ಅಪ್ಪನಿಂದ ಬಳುವಳಿಯಾಗಿ ಬಂದ ಅಡುಗೆ ಕೆಲಸವೇ ಈಕೆಯ ಕೈಹಿಡಿದಿದೆ. ಮನೆ ಮನೆಗೆ ಹೋಗಿ ಅಡುಗೆ ಮಾಡುವ ಮಲ್ಲಿಯ ಕೈಯಲ್ಲಿ ಅದೇನೋ ಜಾದೂ ಇದೆ. ಹಸಿದವರಿಗೆ ಮಾತ್ರ ಅನ್ನದ ಬೆಲೆ ಗೊತ್ತಿರೋದು ಎಂಬುದು ಅವಳ ನಂಬಿಕೆ. ಆದರೆ ಬಡವರನ್ನು ಕಣ್ಣೆತ್ತೆಯೂ ನೋಡದ ಶ್ರೀಮಂತ ಕುಟುಂಬದ ವಿರಾಜ್ಗೆ ಮಲ್ಲಿ ಮೇಲೆ ಪ್ರೀತಿ ಚಿಗುರುತ್ತದೆ.
ಮಸಾಲೆ ಕಂಪನಿ ನಡೆಸುವ, ಹಸಿವನ್ನೇ ಕಂಡಿದರ ಕುಟುಂಬದ ಹುಡುಗನೇ ಕಥಾನಾಯಕ ವಿರಾಜ್. ಮಲ್ಲಿಯನ್ನು ನೋಡಿದ ತಕ್ಷಣ ಅವನಿಗೆ ಪ್ರೀತಿ ಹುಟ್ಟುತ್ತದೆ. ಆದರೆ ಆಕೆಗೆ ಶ್ರೀಮಂತರನ್ನು ಕಂಡರೆ ಆಗುವುದಿಲ್ಲ. ಹೀಗಿರುವಾಗ ಮಲ್ಲಿ ಮತ್ತು ವಿರಾಜ್ ಲವ್ ಸ್ಟೋರಿ ಎತ್ತ ಸಾಗುತ್ತದೆ ಎಂಬುದನ್ನು ತಿಳಿಯಲು ಮಾರ್ಚ್ 23ರಿಂದ ರಾತ್ರಿ 8 ಗಂಟೆಗೆ ‘ಮೂಗುತಿ ಮಲ್ಲಿ’ ಸೀರಿಯಲ್ ನೋಡಬೇಕು.
ಇದನ್ನೂ ಓದಿ: 50 ದಿನ ಪೂರೈಸಿದ ಖುಷಿಯಲ್ಲಿ ‘ಭಾರತಿ ಟೀಚರ್ 7ನೇ ತರಗತಿ’ ಸಿನಿಮಾ ತಂಡ
‘ಕೋಟಿ’ ಸಿನಿಮಾದಲ್ಲಿ ಡಾಲಿ ಧನಂಜಯ ತಂಗಿಯಾಗಿ ಅಭಿನಯಿಸಿದ್ದ ತನುಜಾ ವೆಂಕಟೇಶ್ ಅವರು ‘ಮೂಗುತಿ ಮಲ್ಲಿ’ ಧಾರಾವಾಹಿಗೆ ನಾಯಕಿ ಆಗಿದ್ದಾರೆ. ‘ಅಂತರಪಟ’ ಖ್ಯಾತಿಯ ಚಂದನ್ ಗೌಡ ಅವರು ಹೀರೋ ಆಗಿದ್ದಾರೆ. ಹಿರಿಯ ನಟಿ ಅಂಬಿಕಾ, ತೆಲುಗು ಬಿಗ್ಬಾಸ್ ಖ್ಯಾತಿಯ ಕನ್ನಡದ ನಟಿ ಕೀರ್ತಿ ಭಟ್, ಆರ್ಯ, ವೀಣಾ ಪೊನ್ನಪ್ಪ, ಮರೀನಾ, ಪುನೀತ್ ಮುಂತಾದವರು ಈ ಧಾರಾವಾಹಿಯ ಪಾತ್ರವರ್ಗದಲ್ಲಿ ಇದ್ದಾರೆ. ಆರವ್ ಕಾರ್ತಿಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಅಜಯ್ ರವಿ ಅವರು ಈ ಧಾರಾವಾಹಿ ನಿರ್ಮಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.