Headlines

ಸಾವಿರ ದಿನಗಳ ಸಂಭ್ರಮವಲ್ಲ, 1000 ದಿನಗಳ ಸುಳ್ಳಿನ ಸರಮಾಲೆಗಳ ಸಂಭ್ರಮ: ಬಿಜೆಪಿ ವ್ಯಂಗ್ಯ – Kannada News | Haveri BJP Leaders Mocks Karnataka Congress government 1000 days Celebration

ಹಾವೇರಿ, (ಫೆಬ್ರವರಿ 17): ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ (Karnataka Congress Government)  ಸಾವಿರ ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ (Haveri) ಅದ್ದೂರಿಯಾಗಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶವನ್ನ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಒಂದು ಲಕ್ಷ ಜನರಿಗೆ ಭೂ ಗ್ಯಾರಂಟಿ ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಆದ್ರೆ, ಇದಕ್ಕೆ ಬಿಜೆಪಿ ವ್ಯಂಗ್ಯವಾಡಿದ್ದು, ಇದು ಸರ್ಕಾರದ ಸಮಾವೇಶ ಆಗಿರಲಿಲ್ಲ. ಬದಲಾಗಿ ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಸಮಾವೇಶ ಆಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ದಿನಗಳ ಸುಳ್ಳಿನ ಸರಮಾಲೆಗಳ ಸಂಭ್ರಮ ಎಂದು ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಸಾವಿರ ದಿನಗಳ ಆರ್ಥಿಕ ದಿವಾಳಿಯ ಸಂಕೇತ. ಪೌತಿ ಖಾತೆಗಳಿಗೆ ಪಟ್ಟಾ ಕೊಟ್ಟಿದ್ದಾರೆ.ಅಪ್ಪನ ಆಸ್ತಿ ಮಗನಿಗೆ ಹೋಗುತ್ತದೆ. ಅದನ್ನು ಇವರು ಹಕ್ಕುಪತ್ರ ಕೊಟ್ಟಿದ್ದಾರೆ. ದೂದಿಹಳ್ಳಿ, ಚನ್ನಳ್ಳಿ ಗ್ರಾಮದಲ್ಲಿ ಇಂತಹ ಪ್ರಕರಣಗಳು ನಡೆದಿವೆ. ಐದರಿಂದ ಹತ್ತು ಸಾವಿರದವರೆಗೆ ಹಣ ತೆಗೆದುಕೊಂಡು ಪಟ್ಟಾ ಕೊಟ್ಟಿದ್ದಾರೆ. 40 ಜನರನ್ನು ಕರೆತರಲು ಐದು ಬಸ್ ಗಳು ಹೋಗಿವೆ. ಶಾಲಾ ಬಸ್ ಗಳನ್ನೂ ತೆಗೆದುಕೊಂಡಿದ್ದರು. ಶಾಲಾ ಶಿಕ್ಷಕರನ್ನು ಈ ಸಮಾವೇಶಕ್ಕೆ, ಇಡಿ ಸರಕಾರಿ ಅಧಿಕಾರಿಗಳನ್ನು ಸಮಾವೇಶಕ್ಕೆ ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ

ರಟ್ಟೀಹಳ್ಳಿ ಐಬಿ ಕೆಲಸವೇ ಆಗಿಲ್ಲ. ಹೊರಗಡೆ ಸುಣ್ಣ ಹೊಡೆದು ಚಂದವಾಗಿ ಕಾಣುವಂತೆ ಮಾಡಿ ಅದನ್ನು ಉದ್ಘಾಟನೆ ಮಾಡಿದ್ದಾರೆ. ಶಾಸಕರು ಕಲ್ಲಲ್ಲಿ ಹೆಸರು, ಕತ್ರಿ ಪ್ರಯೋಗ ಮಾಡಿದರೆ ಸಾಕು ಅಂತಾ ಹೇಳುತ್ತಾರೆ. ಜಿಲ್ಲಾಧಿಕಾರಿಗಳು ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಸಾರಿಗೆ ಇಲಾಖೆ ಬಸ್ ಅಲ್ಲದೆ, ಖಾಸಗಿ ಶಾಲೆಯ ಬಸ್ ಗಳನ್ನ ಬಳಕೆ ಮಾಡಿಕೊಂಡಿದ್ದಾರೆ. ಶಾಲೆಗೆ ರಜೆ ಕೊಟ್ಟಿದ್ದಾರೆ. ಒಂದೊಂದು ಬಸ್ ನಲ್ಲಿ ಕೇವಲ 8-10 ಜನರು ಬಂದಿದ್ದಾರೆ. ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಸಕ್ರಮ, ಬಗರ್‌ ಹುಕುಂಗೆ ಪಟ್ಟಾ ಕೊಟ್ಟರೆ ತಕರಾರಿಲ್ಲ. ತರಾತುರಿಯಲ್ಲಿ ಸಮಾವೇಶ‌ ಮಾಡಿದ್ದು ಏಕೆ? ತಪ್ಪು ಇದ್ದಲ್ಲಿ ಆರೋಪ ಮಾಡಲೇಬೇಕಲ್ವಾ?ಪಟ್ಟಾ ಕೊಟ್ಟಿದ್ದು ತಪ್ಪು ಅಂತಾ ನಾವು ಹೇಳಿಲ್ಲ.ದೊಡ್ಡ ಸಂಖ್ಯೆ ತೋರಿಸಬೇಕು ಅಂತಾ ಪೌತಿ ಆದವರಿಗೂ ಪಟ್ಟಾ ಕೊಟ್ಟಿದ್ದಾರೆ.ಇ-ಸ್ವತ್ತು ಕೊಡಲು ಸಿಎಂ ಅವರೇ ಬರಬೇಕಾ? ಸರಕಾರಕ್ಕೆ ಇನ್ನೆಷ್ಟು ದಿನ ಆಯುಷ್ಯ ಎಂಬುದು ಗೊತ್ತಿಲ್ಲ. ಸುಳ್ಳೇ ಅವರೆ ಮನೆ ದೇವರು, ಸಿಎಂ ಅವರಿಂದ ಹಿಡಿದು ಎಲ್ಲರೂ ಸುಳ್ಳನ್ನೇ ಹೇಳುತ್ತಾ ಹೊರಟಿದ್ದಾರೆ. ಇಡಿ ಸರಕಾರ, ಆಡಳಿತ ಸತ್ತು ಹೋಗಿದೆ. ತಹಶೀಲ್ದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಈಗ ಹಬ್ಬವಾಗಿದೆ. ಅಲ್ಲದೇ ನ್ಯಾಯಾಲಯದಲ್ಲಿ ಸ್ಟೇ ಇರೋ ಪ್ರಕರಣಗಳಿಗೆ ಹಕ್ಕು ಪತ್ರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಒಟ್ನಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಹಾವೇರಿಯಲ್ಲಿ ಅದ್ದೂರಿಯಾಗಿ ಮಾಡಿ ಸರ್ಕಾರದ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಸರ್ಕಾರದ ಸಮಾವೇಶ ಅಲ್ಲಾ ಕಾಂಗ್ರೆಸ್ ಸಮಾವೇಶ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *