ಸಿದ್ಧಗಂಗಾ ಮಠದಲ್ಲಿ ವಿಶಿಷ್ಟವಾಗಿ ಶಿವಕುಮಾರ ಶ್ರೀಗಳ ಜನ್ಮೋತ್ಸವ: 119 ಮಕ್ಕಳಿಗೆ ನಾಮಕರಣೋತ್ಸವ

ಸಿದ್ಧಗಂಗಾ ಮಠದಲ್ಲಿ ವಿಶಿಷ್ಟವಾಗಿ ಶಿವಕುಮಾರ ಶ್ರೀಗಳ ಜನ್ಮೋತ್ಸವ: 119 ಮಕ್ಕಳಿಗೆ ನಾಮಕರಣೋತ್ಸವ

ತುಮಕೂರು, ಏಪ್ರಿಲ್​ 05: ತ್ರಿವಿಧ ದಾಸೋಹಕ್ಕೆ ಹೊಸ ಭಾಷೆ ಕೊಟ್ಟವರು ಸಿದ್ದಗಂಗಾ ಮಠದ (Siddaganga Math) ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಜಿಗಳು. ಹಸಿವಿನಿಂದ ಬಂದವರಿಗೆ ಅನ್ನ ಹಾಗೂ ಆಶ್ರಯ ಕೊಟ್ಟು, ಬಡ ಮಕ್ಕಳಿಗೆ ಶಿಕ್ಷಣ ಸೇವೆ ಮುಖಾಂತರ ಲಕ್ಷಾಂತರ ಯುವ ಜನತೆಗೆ ಭವಿಷ್ಯದ ದಾರಿ ದೀಪವಾದ ಅವರು ನಡೆದಾಡುವ ದೇವರು. ಅವರ 119ನೇ ವರ್ಷದ ಜನ್ಮದಿನೋತ್ಸವ ಹಿನ್ನಲೆ ಸಿದ್ಧಗಂಗಾ ಮಠದಲ್ಲಿ ಇಂದು 119 ಮಕ್ಕಳಿಗೆ ನಾಮಕರಣೋತ್ಸವ ಎಂಬ ವಿಶೇಷ ಕಾರ್ಯಕ್ರಮ ಮಾಡಲಾಗಿದೆ. ಅವರ ನೆನಪು, ಮಾರ್ಗದರ್ಶನದ ದಾರಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮಠ ಸಾಕ್ಷಿಯಾಯ್ತು.

119 ಮಕ್ಕಳಿಗೆ ಸಂಪ್ರದಾಯಬದ್ಧ ನಾಮಕರಣ

ಅನ್ನ, ಅಕ್ಷರ ಅರಿವಿಗೆ ಒತ್ತು ಕೊಟ್ಟ ಶಿವಕುಮಾರ ಸ್ವಾಮೀಜಿಗಳ ಸೇವೆ ಅಪಾರ. ಕರ್ನಾಟಕ ರತ್ನ, ಪದ್ಮಭೂಷಣ ಹಾಗೂ ನಡೆದಾಡುವ ದೇವರೆಂದೇ ಜನ‌ಮಾನಸದಲ್ಲಿ ಹಚ್ಚೆಯಾಗಿ ಉಳಿದ ಅವರ ಹೆಸರು ಮುಂದಿನ ಪೀಳಿಗೆಯಲ್ಲೂ ಮುಂದುವರೆಸಬೇಕೆಂಬ ಉದ್ದೇಶಿತ ಕಾರ್ಯಕ್ರಮ ಇಂದು ಸಿದ್ಧಗಂಗಾ ಮಠದಲ್ಲಿ ನಡೆಯಿತು.

Naming

ಶಿವಕುಮಾರ ಟ್ರಸ್ಟ್ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ 119ನೇ ವರ್ಷದ ಶಿವಕುಮಾರ ಸ್ವಾಮೀಜಿಗಳ ಜನ್ಮದಿನೋತ್ಸವ ಹಿನ್ನಲೆ 119 ಮಕ್ಕಳಿಗೆ ಸಂಪ್ರದಾಯಬದ್ಧವಾಗಿ ನಾಮಕರಣ ಮಾಡಲಾಯಿತು.

ಇದನ್ನೂ ಓದಿ: ಕೇಂದ್ರದ ಅಂತ್ಯೋದಯ’ ಕಲ್ಪನೆಗೆ ಸಿದ್ದಗಂಗಾ ಮಠವೇ ದಾರಿದೀಪ: ಶಿವಕುಮಾರ ಶ್ರೀಗಳನ್ನ ಸ್ಮರಿಸಿದ ಜೋಶಿ

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧ್ಯಕ್ಷರ ಅನುಪಸ್ಥಿತಿ ಹಿನ್ನಲೆ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಭಾಗಿಯಾಗಿದ್ದು, ನಾಮಕರಣಗೊಂಡ ಮಕ್ಕಳಿಗೆ ಆಶೀರ್ವದಿಸಿದರು. ಗಂಡು ಮಕ್ಕಳಿಗೆ ಶಿವಕುಮಾರ ಹಾಗೂ ಹೆಣ್ಣು ಮಕ್ಕಳಿಗೆ ಶಿವಾನಿ ಎಂದು ನಾಮಕರಣ ಮಾಡಲಾಯಿತು. ಜೊತೆಗೆ ಮಕ್ಕಳಿಗೆ ತೊಟ್ಟಿಲು, ಹಾಸಿಗೆ, ಸೊಳ್ಳೆ ಪರದೆ ಉಚಿತವಾಗಿ ನೀಡಲಾಯಿತು.

ಸರ್ವಧರ್ಮದವರೂ ಭಾಗಿ

ಶಿವಕುಮಾರ ಸ್ವಾಮೀಜಿಗಳ ಲಿಂಗೈಕ್ಯ ಬಳಿಕ ಆರಂಭವಾದ ನಾಮಕರಣ ಪದ್ಧತಿ, ಅವರ ಜನ್ಮ ವರ್ಷದ ಸಂಖ್ಯೆಗೆ ತಕ್ಕಂತೆ ಮಕ್ಕಳ ಸಂಖ್ಯೆಯೂ ಏರಿಕೆ ಆಗುತ್ತಿದೆ. ಇನ್ನು ವಿಶೇಷವಾಗಿ ತುಮಕೂರಿನ ದಂಪತಿ ಮದುವೆಯಾಗಿ 20 ವರ್ಷ ಕಳೆದರು ಸಹ ಮಗುವಾಗಿರಲಿಲ್ಲ. ದೇವಸ್ಥಾನಗಳು, ಆಸ್ಪತ್ರೆ ಅಂತ ಲಕ್ಷಾಂತರ ರೂ ಖರ್ಚು ಮಾಡಿ ಪ್ರಯೋಜನೆವಾಗಿರಲಿಲ್ಲ. ಆ ಬಳಿಕ ದೇವರ ಅನುಗ್ರಹದಿಂದ ಮಹಿಳೆ ಗರ್ಭವತಿಯಾಗಿದ್ದು, ಗಂಡು ಮಗುವಿಗೆ ಜನ್ಮ‌ನೀಡಿದ್ದಾರೆ. ಹೀಗಾಗಿ ಅವರು ತಮ್ಮ ಮಗುವಿಗೆ ಶಿವಕುಮಾರ ಎಂದು ಹೆಸರಿಟ್ಟರು.

Tumakuru

ಪ್ರಮುಖವಾಗಿ ನಾಮಕರಣ ಕಾರ್ಯಕ್ರಮದಲ್ಲಿ ಸರ್ವಧರ್ಮದವರು ಸಹ ಭಾಗಿಯಾಗಿದ್ದು, ಆಂಧ್ರ ಮೂಲದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಇಸ್ತ್ರಾ ಎಂಬುವವರು ತಮ್ಮ ಮಗಳಿಗೆ ಶಿವಾನಿ ಎಂದು ನಾಮಕರಣ ಮಾಡಲಾಗಿದೆ. ಧರ್ಮ ಯಾವುದಾದರೇನು ದೇವರು ಒಂದೇ, ನಮ್ಮ ಮಗುವಿನ ಭವಿಷ್ಯ ಉತ್ತಮವಾಗಿರಬೇಕು. ಅವರ ಆಶೀರ್ವಾದ ಬೇಕು ಎಂದು ತಾಯಿ ಇಸ್ತ್ರಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ: ಸಿದ್ಧಗಂಗಾ ಮಠದ ಗುಣಗಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಅಕ್ಷರದ ಮುಖಾಂತರ ಶಿಕ್ಷಣ, ಅರಿವೆಂಬ ಜ್ಞಾನ ಇವುಗಳಿಗೆ ಬೇಕಾದ ಆಸರೆ ನೀಡುವ ಮೂಲಕ ಶ್ರೀ ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದೊಸೋಹಿಯಾಗಿದ್ದರು. ಇವರ ಆಶ್ರಯದಲ್ಲಿ ಅದೆಷ್ಟೋ ಮಕ್ಕಳು ತಮ್ಮ‌ತಮ್ಮ ಭವಿಷ್ಯ ರೂಪಿಸಿಕೊಂಡಿದ್ದು, ಅವರ ಹೆಜ್ಜೆಗುರುತು ಹಾಗೂ ಹೆಸರು ಮುಂದಿನ ಪೀಳಿಗೆಗೂ ಮುಂದುವರೆಸುವ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *