
‘ಧುರಂಧರ್ 2’ (Dhurandhar 2) ಸಿನಿಮಾದ ಮೊದಲ ಸಾರ್ವಜನಿಕ ಪ್ರದರ್ಶನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ರಣವೀರ್ ಸಿಂಗ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ ನಾಳೆ (ಮಾರ್ಚ್ 19) ಬಿಡುಗಡೆಯಾಗುತ್ತಿದೆ. ಆದರೆ ಈ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಇಂದೇ ಪ್ರದರ್ಶನಗೊಳ್ಳಲಿದ್ದು, ಪ್ರೀಮಿಯರ ಶೋನ ಲಕ್ಷಾಂತರ ಟಿಕೆಟ್ಗಳು ಮುಂಗಡವಾಗಿ ಮಾರಾಟವಾಗಿವೆ. ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಂಜೆ ಐದು ಗಂಟೆಯಿಂದ ‘ಧುರಂಧರ್ 2’ ಸಿನಿಮಾದ ಶೋಗಳ ಪ್ರದರ್ಶನ ಆರಂಭವಾಗಲಿದೆ. ಸಿನಿಮಾದ ಮೊದಲ ಶೋ ಪ್ರಾರಂಭಕ್ಕೆ ಕೆಲವೇ ಗಂಟೆಗಳಿರುವಾಗ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಪ್ರೇಕ್ಷಕರಿಗೆ ಸಂದೇಶವೊಂದನ್ನು ನೀಡಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ಮುಗಿದ ಕೂಡಲೇ ಪ್ರೇಕ್ಷಕರು ಎದ್ದು ಹೊರನಡೆಯುತ್ತಾರೆ. ಆದರೆ ಈ ಬಾರಿ ಹಾಗೆ ಮಾಡಬೇಡಿ ಎಂದು ಆದಿತ್ಯ ಧರ್ ಮನವಿ ಮಾಡಿದ್ದಾರೆ. ಚಿತ್ರದ ಎಂಡ್ ಕ್ರೆಡಿಟ್ಸ್ ಮುಗಿಯುವವರೆಗೂ ಕುಳಿತಿರಬೇಕು, ಅಲ್ಲಿ ಒಂದು ದೊಡ್ಡ ‘ಪೋಸ್ಟ್-ಕ್ರೆಡಿಟ್ ಸೀನ್’ ಅಡಗಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ. ಆ ಮೂಲಕ ಭಾರಿ ಕುತೂಹಲವನ್ನೇ ಹುಟ್ಟುಹಾಕಿದ್ದಾರೆ ನಿರ್ದೇಶಕ ಆದಿತ್ಯ ಧರ್.
ಅದು ಮಾತ್ರವೇ ಅಲ್ಲದೆ, ಸಿನಿಮಾ ನೋಡಿ ಹೊರಬಂದ ಮೇಲೆ ಚಿತ್ರದ ರಹಸ್ಯಗಳನ್ನು ಅಥವಾ ಟ್ವಿಸ್ಟ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ‘ನಮ್ಮ ಇಡೀ ತಂಡ ಈ ಚಿತ್ರಕ್ಕಾಗಿ ತುಂಬಾ ಶ್ರಮವಹಿಸಿದೆ. ಪ್ರತಿಯೊಬ್ಬ ಪ್ರೇಕ್ಷಕನಿಗೂ ಆ ಥ್ರಿಲ್ ಸಿಗಬೇಕು. ಹಾಗಾಗಿ ದಯವಿಟ್ಟು ಸ್ಪಾಯ್ಲರ್ (ಗುಟ್ಟು ರಟ್ಟು) ನೀಡುವ ಮೂಲಕ ಇತರರ ಕುತೂಹಲವನ್ನು ಹಾಳು ಮಾಡಬೇಡಿ’ ಎಂದು ಆದಿತ್ಯ ಧರ್ ವಿನಂತಿಸಿದ್ದಾರೆ.
ಇದನ್ನೂ ಓದಿ:
‘ಧುರಂಧರ್ 2’ ಸಿನಿಮಾವು ಭಾರತದ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದಕ ಸಂಘಟನೆಗಳ ಮುಖಂಡರನ್ನು ಬಲಿ ಪಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಜೊತೆಗೆ ಸಾಕಷ್ಟು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳು ಸಹ ಇವೆ. ಹಾಗಾಗಿಯೇ ನಿರ್ದೇಶಕ ಆದಿತ್ಯ ಧರ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದು, ಸಿನಿಮಾದ ಕತೆಯ ಗುಟ್ಟುಗಳನ್ನು ರಟ್ಟು ಮಾಡಬೇಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ಈ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಭರ್ಜರಿಯಾಗಿ ನಡೆದಿದ್ದು, ಬಿಡುಗಡೆಗೂ ಮುನ್ನವೇ ಕೋಟಿಗಟ್ಟಲೆ ಹಣ ಬಾಚಿಕೊಂಡಿದೆ ಎಂಬ ಸುದ್ದಿ ಇದೆ. ಯುಗಾದಿ ಮತ್ತು ಈದ್ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್ ಮಾಧವನ್ ಅವರಂತಹ ದಿಗ್ಗಜ ಕಲಾವಿದರು ನಟಿಸಿದ್ದಾರೆ. ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗೆ ಕೊನೆ ಕ್ಷಣದಲ್ಲಿ ಸಮಸ್ಯೆ ಎದುರಾಗಿದ್ದು, ಹಿಂದಿ ಹೊರತಾಗಿ ಭಾರತದ ಇತರೆ ಭಾಷೆಗಳ ಆವೃತ್ತಿಯ ಶೋಗಳನ್ನು ರದ್ದು ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ