Headlines

ಸೆಕೆಂಡ್ ಕೇಸ್ ಆಫ್ ಸೀತಾರಾಮ್ ವಿಮರ್ಶೆ: ಕುತೂಹಲದ ಕಥೆ, ಕೊನೆವರೆಗೂ ರೋಚಕತೆ – Kannada News | Second Case of Seetharam Review Vijay Raghavendra film gives suspense thriller entertainment package

ಸರಣಿ ಕೊಲೆಗಳ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ಅವುಗಳ ನಡುವೆಯೂ ಒಂದು ಭಿನ್ನ ಪ್ರಯತ್ನವಾಗಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಗಮನ ಸೆಳೆಯುತ್ತದೆ. ವಿಜಯ್ ರಾಘವೇಂದ್ರ (Vijay Raghavendra), ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಬಿಡುಗಡೆ ಆಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಮನರಂಜನೆ ಬಯಸುವ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ದೇವಿ ಪ್ರಸಾದ್ ಶೆಟ್ಟಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಾತ್ವಿಕ್ ಹೆಬ್ಬಾರ್ ಮತ್ತು ದೇವಿ ಪ್ರಸಾದ್ ಶೆಟ್ಟಿ ಅವರು ಜೊತೆಯಾಗಿ ಬಂಡವಾಳ ಹೂಡಿದ್ದಾರೆ. ಒಟ್ಟಾರೆ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ (Second Case of Seetharam) ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಮಲೆನಾಡಿನ ಒಂದು ಊರಿನಲ್ಲಿ ಹಲವು ಕೊಲೆಗಳು ನಡೆಯುತ್ತವೆ. ಆ ಕೊಲೆಗಳನ್ನು ಒಬ್ಬ ಸೈಕೋ ಕಿಲ್ಲರ್ ಮಾಡುತ್ತಿದ್ದಾನೆ ಎಂಬ ಅನುಮಾನ ಮೂಡುತ್ತದೆ. ಸಿನಿಮಾದ ಆರಂಭದಿಂದ ಕೊನೇ ತನಕ ಹಲವು ಪಾತ್ರಗಳ ಮೇಲೆ ಅನುಮಾನ ಮೂಡುತ್ತದೆ. ಅಂತಿಮವಾಗಿ ಆ ಸೈಕೋ ಕಿಲ್ಲರ್ ಯಾರು? ಅವನ ಉದ್ದೇಶ ಏನು ಎಂಬುದನ್ನು ತಿಳಿಯಲು ಕ್ಲೈಮ್ಯಾಕ್ಸ್ ತನಕ ಕಾಯಬೇಕು. ಎಲ್ಲ ದೃಶ್ಯಗಳನ್ನೂ ಕುತೂಹಲಭರಿತವಾಗಿ ಕಟ್ಟಿಕೊಡಲಾಗಿದೆ.

ಈ ಸಿನಿಮಾದಲ್ಲಿ ಇರುವ ಎಲ್ಲ ಪ್ರಮುಖ ಪಾತ್ರಗಳ ಹಿಂದೆ ಒಂದೊಂದು ಕಥೆ ಇದೆ. ಪ್ರತಿ ಕಥೆ ತೆರೆದುಕೊಂಡಾಗಲೆಲ್ಲ ಕೌತುಕ ಹೆಚ್ಚಾಗುತ್ತದೆ. ಇವನೇ ಕೊಲೆಗಾರ ಅಂತ ಪ್ರೇಕ್ಷಕರು ಅಂದುಕೊಳ್ಳುವುದರೊಳಗೆ ಇನ್ನೊಂದು ಆಯಾಮ ಓಪನ್ ಆಗುತ್ತದೆ. ಆ ರೀತಿಯ ಒಂದಷ್ಟು ಟ್ವಿಸ್ಟ್​​ಗಳ ಮೂಲಕ ಇಡೀ ಸಿನಿಮಾವನ್ನು ನಿರ್ದೇಶಕರು ನಿರೂಪಿಸಿದ್ದಾರೆ. ಅದು ಈ ಸಿನಿಮಾದ ಪ್ಲಸ್ ಪಾಯಿಂಟ್.

ನಟ ವಿಜಯ್ ರಾಘವೇಂದ್ರ ಅವರಿಗೆ ಈ ಸಿನಿಮಾದಲ್ಲಿ ಸಿಕ್ಕಿರುವ ಪಾತ್ರ ಹೇಳಿ ಮಾಡಿಸಿದಂತಿದೆ. ಪೊಲೀಸ್ ಇನ್ಸ್​ಪೆಕ್ಟರ್ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಇಲ್ಲಿ ಪೊಲೀಸ್ ಎಂದರೆ ಕೂಗಾಡುತ್ತಾ ಆರ್ಭಟಿಸುವ ವ್ಯಕ್ತಿ ಅಲ್ಲ. ಎಲ್ಲವನ್ನೂ ತಾಳ್ಮೆಯಿಂದ ನೋಡುವ, ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವ ಪೊಲೀಸ್ ಅಧಿಕಾರಿಯಾಗಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯಗಳು ಇದ್ದರೂ ಕೂಡ ಸೂಪರ್ ಹೀರೋ ರೀತಿ ವರ್ತಿಸುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ನೈಜವಾಗಿ ಆ ಪಾತ್ರ ಮೂಡಿಬಂದಿದೆ.

ಇಡೀ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಇಷ್ಟ ಆಗುವುದು ರೋಚಕವಾದ ಕಥೆ. ಪ್ರೇಕ್ಷಕರನ್ನು ಹಿಡಿದಿಡಲು ಬೇಕಾದ ಮುಖ್ಯ ಅಂಶವೇ ಕಥೆ ಎಂಬುದನ್ನು ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಕೇವಲ 2 ಗಂಟೆ ಅವಧಿಯಲ್ಲಿ ಹೇಳಿ ಮುಗಿಸಿದ್ದಾರೆ. ಮೊದಲಾರ್ಧಕ್ಕಿಂತಲೂ ದ್ವಿತೀಯಾರ್ಧದಲ್ಲಿ ವೇಗ ಹೆಚ್ಚಿದೆ. ಪಟಪಟನೆ ಸಾಗುವ ಚಿತ್ರಕಥೆಯಿಂದಾಗಿ ಈ ಸಿನಿಮಾ ಇನ್ನಷ್ಟು ರೋಚಕತೆ ಪಡೆದುಕೊಂಡಿದೆ.

ಇದನ್ನೂ ಓದಿ: ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು

ನವನೀತ್ ಶಾಮ್ ಅವರ ಸಂಗೀತದಿಂದಾಗಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದ ರೋಚಕತೆ ಹೆಚ್ಚಿದೆ. ಛಾಯಾಗ್ರಾಹಕ ಹೇಮಂತ್ ಆಚಾರ್ಯ ಅವರ ಕೆಲಸ ಕೂಡ ಮೆಚ್ಚುಗೆ ಪಡೆಯುತ್ತದೆ. ಸರಣಿ ಕೊಲೆಯ ಕಥೆಗೆ ಒಂದಷ್ಟು ಭಾವುಕತೆಯನ್ನು ಬೆರಸಿದ್ದರಿಂದ ಈ ಚಿತ್ರದ ತೂಕ ಹೆಚ್ಚಿದೆ. ಕೆಲವು ದೃಶ್ಯಗಳಲ್ಲಿ ಲಾಜಿಕ್ ಇಲ್ಲದಿರುವುದು ಸೇರಿದಂತೆ ಸಣ್ಣ ಪುಟ್ಟ ನ್ಯೂನ್ಯತೆಗಳು ಕೂಡ ಈ ಸಿನಿಮಾದಲ್ಲಿ ಇವೆ. ಅವುಗಳ ನಡುವೆಯೂ ಒಂದು ಉತ್ತಮ ಚಿತ್ರವಾಗಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *