
ನೆಲಮಂಗಲ, ಮಾ.21: ಯುಗಾದಿ ಹಬ್ಬ ಮುಗಿಸಿ ಸಡಗರದಿಂದ ದೇವಸ್ಥಾನಕ್ಕೆ ಹೊರಟಿದ್ದ ಕುಟುಂಬಕ್ಕೆ ಕಾದಿತ್ತು ವಿಧಿಯ ಆಟ. ಶನಿವಾರದ ಹಿನ್ನೆಲೆ ಆಂಜನೇಯ ಸ್ವಾಮಿಯ ದರ್ಶನ ಪಡೆಯಲು ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದ ತಾಯಿಯ ಕಣ್ಣೆದುರೇ ಯಮಸ್ವರೂಪಿಯಾಗಿ ಬಂದ ಕ್ಯಾಂಟ್ರೋ ಲಾರಿ, ನಾಲ್ಕು ವರ್ಷದ ಮಗುವಿನ ಮೇಲೆ ಹರಿದು ಸಜೀವ ದಹನ ಮಾಡಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹನುಮಂತೇಗೌಡನ ಪಾಳ್ಯದಲ್ಲಿ ನಡೆದಿದೆ.ನಾಲ್ಕು ವರ್ಷದ ನಿಶಿಕಾ ಮೃತಪಟ್ಟ ದುರ್ದೈವಿ. ಈಕೆ ರಾಜೇಂದ್ರ ಮತ್ತು ಲಾವಣ್ಯ ದಂಪತಿಯ ಮೊದಲ ಮಗಳು.
ತಾಯಿ ಲಾವಣ್ಯ ಅವರು ತನ್ನ ಎರಡನೇ ಮಗುವನ್ನು ಕಂಕಳಲ್ಲಿ ಇರಿಸಿಕೊಂಡು, ಮೊದಲ ಮಗಳು ನಿಶಿಕಾಳ ಕೈಹಿಡಿದು ಗೊಲ್ಲಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಿರಿದಾದ ರಸ್ತೆಯಲ್ಲಿ ವೇಗವಾಗಿ ಬಂದ ಕ್ಯಾಂಟ್ರೋ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಮಗುವಿನ ಮೇಲೆ ಹರಿದಿದೆ.
ಇದನ್ನೂ ಓದಿ: ಮಲ್ಪೆಯಲ್ಲಿ ಮೀನಿನ ಬೆಲೆ ಪಾತಾಳಕ್ಕೆ! ಮಾಂಜಿ, ಅಂಜಲ್ ಬೆಲೆ ಎಷ್ಟಿದೆ ಗೊತ್ತಾ? : ಮೀನಿನ ದರ ಪಟ್ಟಿ ಇಲ್ಲಿದೆ ನೋಡಿ
ಲಾರಿ ತಾಯಿ ಮತ್ತು ಮಗುವಿನ ಮೇಲೆಯೇ ಬಂದಿದ್ದರೂ, ತಾಯಿ ಲಾವಣ್ಯ ಮತ್ತು ಕಂಕಳಲ್ಲಿದ್ದ ಮತ್ತೊಂದು ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ನಿಶಿಕಾ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾಳೆ.ಅಪಘಾತದಿಂದ ರೊಚ್ಚಿಗೆದ್ದ ಸ್ಥಳೀಯರು ಲಾರಿಯ ಗಾಜುಗಳನ್ನು ಪುಡಿಪುಡಿ ಮಾಡಿ, ಚಾಲಕನಿಗೆ ತಕ್ಕ ಶಾಸ್ತಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ವರದಿ: ಮಂಜುನಾಥ್ ನೆಲಮಂಗಳ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ