
ಉಡುಪಿ, ಏಪ್ರಿಲ್ 13: ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಹೊತ್ತಿರುವ ಬೈಂದೂರು ತಾಲೂಕಿನ ಸರಕಾರಿ ಶಾಲೆ ರಾಜ್ಯದ ಉಳಿದ ಶಾಲೆಗಳು ಮೂಗಿನ ಮೇಲೆ ಬೆರಳಿಡುವ ಕೆಲಸ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಹಾಗೂ ತಂತ್ರಜ್ಞಾನ ಆಧಾರಿತ ನವೀನ ಸಾಧನಗಳ ಮೂಲಕ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಬೈಂದೂರು ವಲಯದ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ರಾಜ್ಯದಲ್ಲೇ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಬೋಧನೆಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶಿಕ್ಷಕಿ ಐರಿಸ್ನ ಪರಿಚಯಿಸಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ಇದು ವಿದ್ಯಾರ್ಥಿಗಳಿಗೆ ನೇರ ಬೋಧನೆ ಆರಂಭಿಸುವ ನಿರೀಕ್ಷೆಯಿದೆ. ಈಗಾಗಲೇ ರೋಬೋಟ್ನ ಕಾರ್ಯನಿರ್ವಹಣೆಗೆ ಸಜ್ಜುಗೊಳಿಸುವ ತರಬೇತಿ ಹಾಗೂ ತಾಂತ್ರಿಕ ವ್ಯವಸ್ಥೆಗಳ ಅಳವಡಿಕೆ ಕಾರ್ಯ ಶುರುವಾಗಿದೆ. ಐರಿಸ್ ಎಐ ಶಿಕ್ಷಕಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಾದ ನಡೆಸುವ ಸಾಮರ್ಥ್ಯ ಹೊಂದಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುವ ಮೂಲಕ ವೈಯಕ್ತಿಕ ಕಲಿಕೆಯ ಅನುಭವವನ್ನು ಒದಗಿಸಲಿದೆ. ಸೀರೆ ಧಾರಣೆಯೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಐರಿಸ್, ಕೈಕುಲುಕಿ ಮಾತನಾಡುವಂತಹ ವೈಶಿಷ್ಟ್ಯಗಳಿಂದ ಮಕ್ಕಳ ಗಮನ ಸೆಳೆಯುತ್ತಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.