
ದಾವಣಗೆರೆ, (ಏಪ್ರಿಲ್ 05): ಹಲವು ಅಂತೆ ಕಂತೆಗಳ ಬಗ್ಗೆ ಚರ್ಚೆ ಜೋರಾಗುತ್ತಿದ್ದಂತೆಯೇ ಸಚಿವ ಜಮೀರ್ ಅಹ್ಮದ್ ಖಾನ್ (zameer ahmed khan) ಅವರು ದಾವಣಗೆರೆ ದಕ್ಷಿಣ ಉಪಚುನಾವಣೆ (Davanagere South By Election) ಪ್ರಚಾರಕ್ಕೆ ಬಂದಿದ್ದಾರೆ. ಎಸ್ಎಸ್ ಮಲ್ಲಿಕಾರ್ಜುನ್ (Minister SS Mallikarjun) ಪಕ್ಕದಲ್ಲಿಯೇ ಕುಳಿತು ಸುದ್ದಿಗೋಷ್ಠಿ ನಡೆಸಿ ತಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ ಎಂಬುವುದನ್ನು ಸಾರಿದರು. ಅಲ್ಲದೇ ಚಾಮರಾಜಪೇಟೆಗೆ ಬಂದು ಯಾರಾದರೂ ಮಾತನಾಡಿದರೆ ನಾನೂ ಕೂಡ ಸುಮ್ಮನೆ ಇರಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೂಡ ಕೊಟ್ಟಿದ್ದಾರೆ. ಯಾಕಂದ್ರೆ, ಈ ಹಿಂದೆ ಟಿಕೆಟ್ ವಿಚಾರವಾಗಿ ಸಚಿವ ಮಲ್ಲಿಕಾರ್ಜುನ ಅವರೂ ಸಹ ದಾವಣಗೆರೆಗೆ ಬಂದು ಏನೇನೋ ಮಾತನಾಡಿದ ಸರಿ ಇರಲ್ಲ ಎಂದು ಜಮೀರ್ ವಿರುದ್ಧ ಗುಡುಗಿದ್ದರು. ಇದೀಗ ಮಲ್ಲಿಕಾರ್ಜುನ ಅವರಿಗೆ ಮಾತಿಗೆ ಸ್ಪಷ್ಟನೆ ನೀಡುವಾಗ ಜಮೀರ್ ಸಹ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಟಿಕೆಟ್ ವಿಚಾರದ ಗಲಾಟೆ ವೇಳೆ ಎಸ್ಎಸ್ ಮಲ್ಲಿಕಾರ್ಜುನ್ “ಯಾರ್ರಿ ಜಮೀರ್ ದಾವಣಗೆರೆ ಬಗ್ಗೆ ಮಾತನಾಡಲು” ಎಂಬ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ಜತೆಗೆ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೂ ಸಚಿವ ಜಮೀರ್ ಮುನಿಸಿಕೊಂಡಿದ್ದರು. ಅಲ್ಲದೇ ಮಲ್ಲಿಕಾರ್ಜುನ ಹೇಳಿಕೆಯಿಂದಾಗಿ ಜಮೀರ್ ಅವರ ಅಭಿಮಾನಿಗಳು ಹಾಗೂ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಜಮೀರ್ ಅವರನ್ನ ಕಡೆಗಣಿಸಿದ್ದಕ್ಕೆ ಈ ಬಾರಿ ತಕ್ಕ ಪಾಠ ಕಲಿಸುವ ಬಗ್ಗೆಯೂ ಅಲ್ಪಸಂಖ್ಯಾತ ಮುಖಂಡರು ಹೇಳಿಕೆಗಳ ನೀಡುತ್ತಿದ್ದು, ಇದು ಮಲ್ಲಿಕಾರ್ಜುನ ಅವರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ದಾವಣಗೆರೆಯಲ್ಲಿ ಜಮೀರ್ ಅವರಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಸ್ವತಃ ಎಸ್ಎಸ್ ಮಲ್ಲಿಕಾರ್ಜುನ್ ಅವರು ಸಿಎಂ ಬಳಿ ಒತ್ತಡ ಹಾಕಿ ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ. ಇನ್ನು ಸಿಎಂ ಮಾತಿಗೆ ಬೆಲೆಕೊಟ್ಟು ದಾವಣಗೆರೆಗೆ ಬಂದಿರುವ ಜಮೀರ್ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.