
ಕಳೆದ ಮೂರು ವರ್ಷಗಳಲ್ಲಿ ಹ್ಯಾಟ್ರಿಕ್ ಐಸಿಸಿ (ICC) ಟ್ರೋಫಿ ಗೆದ್ದಿರುವ ಟೀಂ ಇಂಡಿಯಾ (Team India) ಇದೀಗ ಸತತ 4ನೇ ಐಸಿಸಿ ಪ್ರಶಸ್ತಿ ಗೆಲುವಿನತ್ತ ಮಹತ್ವದ ಹೆಜ್ಜೆ ಇಟ್ಟಿದೆ. 2024 ರಲ್ಲಿ ಟಿ20 ವಿಶ್ವಕಪ್ ಎತ್ತಿಹಿಡಿದಿದ್ದ ಭಾರತ, ಆ ಬಳಿಕ 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ 2026 ರಲ್ಲಿ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದಿದೆ. ಇನ್ನು ಮುಂದಿನ ವರ್ಷ ಅಂದರೆ 2027 ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಆ ಟ್ರೋಫಿಯನ್ನು ಬಾಚಿಕೊಳ್ಳಲು ಬಿಸಿಸಿಐ ಈಗಿನಿಂದಲೇ ತಯಾರಿ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ವಿಶ್ವಕಪ್ ನಡೆಯಲು ಇನ್ನು ಒಂದು ವರ್ಷ ಇರುವಾಗಲೇ ಈ ಪಂದ್ಯಾವಳಿಗೆ ಬಿಸಿಸಿಐ, 20 ಆಟಗಾರರ ಪಟ್ಟಿಯನನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ.
ಏಕದಿನ ವಿಶ್ವಕಪ್ 2027 ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ ಆತಿಥ್ಯದಲ್ಲಿ ನಡೆಯಲಿದೆ. ಹೀಗಾಗಿ 2023 ರ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ ಸೋತು ಟ್ರೋಫಿಯಿಂದ ವಂಚಿತವಾಗಿದ್ದ ಟೀಂ ಇಂಡಿಯಾ ಈ ಬಾರಿ ಶತಾಯಗತಾಯ ಏಕದಿನ ವಿಶ್ವಕಪ್ ಗೆಲ್ಲುವ ಇರಾದೆಯಲ್ಲಿದೆ. ಹೀಗಾಗಿ ಈ ವರ್ಷ ಉಳಿದೆರಡು ಮಾದರಿಗಳಿಗಿಂತ ಏಕದಿನ ಮಾದರಿಯ ಮೇಲೆ ಬಿಸಿಸಿಐ ಹೆಚ್ಚು ಒತ್ತು ನೀಡುತ್ತಿದೆ. ಇದಕ್ಕೆ ಪೂರಕವಾಗಿ ಏಕದಿನ ಸರಣಿಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಪ್ಲಾನ್ ರೂಪಿಸಿದೆ.
20 ಆಟಗಾರರ ಅಂತಿಮ ಪಟ್ಟಿ
ಇದೆಲ್ಲದರ ನಡುವೆ ಬಿಸಿಸಿಐ, ಮುಂಬರುವ ಏಕದಿನ ವಿಶ್ವಕಪ್ಗೆ 20 ಆಟಗಾರರ ತಂಡವನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ. ಟೀಂ ಇಂಡಿಯಾದ ಆಯ್ಕೆ ಮಂಡಳಿ ಈಗಾಗಲೇ ಅಳೆದು ತೂಗಿ ಏಕದಿನ ವಿಶ್ವಕಪ್ಗೆ ತಂಡವನ್ನು ಸಿದ್ಧಪಡಿಸಿದ್ದಾರೆ ಎಂದು ವರದಿಯಾಗಿದೆ. ಇದರರ್ಥ, ಆಯ್ಕೆದಾರರು ಈಗಾಗಲೇ ಆಯ್ಕೆ ಮಾಡಿರುವ 20 ಆಟಗಾರರ ಮೇಲೆ ಮಾತ್ರ ಕಣ್ಣಿಡಲಿದ್ದಾರೆ. ಈ 20 ಆಟಗಾರರು ಆಡುವ ಐಪಿಎಲ್ ಆಗಲಿ, ಟಿ20 ಆಗಲಿ ಅಥವಾ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಾಗಲಿ ಅವುಗಳು ನಡೆಯುವ ಸಮಯದಲ್ಲಿ ಆಯ್ಕೆ ಮಂಡಳಿಯ ಸದಸ್ಯರು ಅಲ್ಲಿ ಹಾಜರಿದ್ದು, ಆ ಆಟಗಾರರ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ.
ಆಯ್ಕೆ ಮಂಡಳಿಗೆ ಮಹತ್ವದ ಜವಾಬ್ದಾರಿ
ಇದಕ್ಕೆ ಪೂರಕವೆಂಬಂತೆ ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದ್ದು, ಈ ಲೀಗ್ ನಡೆಯುವ ಸಮಯದಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಮಂಡಳಿಯ ಸದಸ್ಯರಾದ ಎಸ್ಎಸ್ ದಾಸ್, ಆರ್ ಪಿ ಸಿಂಗ್, ಅಜಯ್ ರಾತ್ರ ಮತ್ತು ಪ್ರಗ್ಯಾನ್ ಓಜಾ ಈ 20 ಆಟಗಾರರನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಈ 20 ಆಟಗಾರರ ಪಂದ್ಯಗಳ ಸಮಯದಲ್ಲಿ ಈ ಆಯ್ಕೆದಾರರು ಕ್ರೀಡಾಂಗಣದಲ್ಲಿ ಹಾಜರಿರಲಿದ್ದಾರೆ. ಕ್ರೀಡಾಂಗಣದಲ್ಲಿ ಮತ್ತು ಟಿವಿಯಲ್ಲಿ ಪಂದ್ಯಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಇವರಿಹಗೆ ವಹಿಸಲಾಗಿದೆ.
ವರದಿಯ ಪ್ರಕಾರ, ಟೀಂ ಇಂಡಿಯಾದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮುಂಬೈನಲ್ಲಿ ನಡೆಯುವ ಪಂದ್ಯಗಳ ಮೇಲೆ ಕಣ್ಣಿಟ್ಟರೆ, ಶಿವಸುಂದರ್ ದಾಸ್ ಕೋಲ್ಕತ್ತಾ, ಆರ್.ಪಿ. ಸಿಂಗ್ ಮತ್ತು ಅಜಯ್ ರಾತ್ರ ದೆಹಲಿಯಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ. ಉಳಿದಂತೆ ಪ್ರಗ್ಯಾನ್ ಓಜಾ ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ನಡೆಯುವ ಕೆಲವು ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ.
PAK vs BAN: ರನೌಟ್ ವಿವಾದ; ಸಲ್ಮಾನ್ ಆಘಾ ವಿರುದ್ಧ ಕಠಿಣ ಕ್ರಮ ಜರುಗಿಸಿದ ಐಸಿಸಿ
ಐಪಿಎಲ್ ಸ್ಟಾರ್ಸ್ಗೆ ನೋ ಛಾನ್ಸ್
ಪ್ರತಿ ಆಯ್ಕೆದಾರರು ವಾರಕ್ಕೆ ಕನಿಷ್ಠ ಒಂದು ಪಂದ್ಯವನ್ನು ವೀಕ್ಷಿಸಬೇಕೆಂದು ಬಿಸಿಸಿಐ ಆದೇಶಿಸಿದೆ ಎಂದು ವರದಿಯಾಗಿದೆ. ಹಾಗೆಯೇ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು ಅದಕ್ಕೂ ಮೊದಲು ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ 20 ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇದರರ್ಥ ಈ ಐಪಿಎಲ್ನಲ್ಲಿ ಅಬ್ಬರಿಸುವ ಯಾವುದೇ ಆಟಗಾರನಿಗೆ (ಬಿಸಿಸಿಐ ಆಯ್ಕೆ ಮಾಡಿರುವ 20 ಆಟಗಾರರನ್ನು ಹೊರತುಪಡಿಸಿ) ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂಬುದು ಖಚಿತವಾದಂತ್ತಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ