ಶಹಾಪುರದಲ್ಲಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ!Image Credit source: tv9
ಯಾದಗಿರಿ, ಫೆಬ್ರವರಿ 14: ಯಾದಗಿರಿ (Yadgir) ಜಿಲ್ಲೆಯ ಶಹಾಪುರ ನಗರದಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಸ್ವಕುಳಿಸಾಳಿ ಸಮುದಾಯದ 12 ಕುಟುಂಬಗಳಿಗೆ ತಮ್ಮದೇ ಸಮುದಾಯದಿಂದ ಬಹಿಷ್ಕಾರ ಹಾಕಲಾಗಿದ್ದು, ಕಳೆದ ಎಂಟು ವರ್ಷಗಳಿಂದ ಈ ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿವೆ. ಸಮುದಾಯಕ್ಕೆ ಸೇರಿದ ಸಂಘದ ಆಸ್ತಿ ಹಾಗೂ ಆದಾಯದ ಲೆಕ್ಕ ಕೇಳಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಹಿಷ್ಕೃತ ಕುಟುಂಬಗಳು ಆರೋಪಿಸಿವೆ.
ಆದಾಯದ ಲೆಕ್ಕ ಕೇಳಿದ್ದೇ ಮುಳುವಾಯ್ತು
ಶಹಾಪುರದಲ್ಲಿರುವ ಜೀಹ್ವೆಶ್ವರ ಕಲ್ಯಾಣ ಮಂಟಪ ಹಾಗೂ 18 ವಾಣಿಜ್ಯ ಮಳಿಗೆಗಳಿಂದ ವಾರ್ಷಿಕ ಸುಮಾರು 25 ಲಕ್ಷ ರೂ. ಆದಾಯ ಬರುತ್ತಿದೆ ಎನ್ನಲಾಗಿದ್ದು, ಅದರ ಬಗ್ಗೆ ಪ್ರಶ್ನೆ ಮಾಡಿದ 20 ಕುಟುಂಬಗಳ ವಿರುದ್ಧ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಬಹಿಷ್ಕಾರ ಘೋಷಿಸಿದ್ದಾರೆ.
ದಂಡ ಪಾವತಿಸಿದ 8 ಕುಟುಂಬಗಳಿಗೆ ಬಹಿಷ್ಕಾರದಿಂದ ಮುಕ್ತಿ
20 ಕುಟುಂಬಗಳ ಪೈಕಿ ಎಂಟು ಕುಟುಂಬಗಳು ದಂಡ ಕಟ್ಟಿದ ಬಳಿಕ ಬಹಿಷ್ಕಾರದಿಂದ ಮುಕ್ತಿಗೊಂಡಿದ್ದರೆ, ಉಳಿದ 12 ಕುಟುಂಬಗಳು ದಂಡ ಕಟ್ಟಲು ನಿರಾಕರಿಸಿದ ಕಾರಣ ಇನ್ನೂ ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿವೆ. ಈ ಕುಟುಂಬಗಳ ಸದಸ್ಯರಿಗೆ ಮದುವೆ ಸಂಬಂಧ ಕೊಡಬಾರದು, ಪಡೆಯಬಾರದು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಜೊತೆಗೆ ಜೀಹ್ವಶ್ವರ, ಹನುಮ ಹಾಗೂ ಕೃಷ್ಣ ಜಯಂತಿ ಸೇರಿದಂತೆ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿಲ್ಲ.
ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕನಿಗೆ ನಿಂದನೆ
ಇತ್ತೀಚೆಗೆ ಜೀಹ್ವಶ್ವರ ಜಯಂತಿ ಹಿನ್ನೆಲೆ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬಹಿಷ್ಕೃತ ಕುಟುಂಬದ ಬಾಲಕನನ್ನು ನಿಂದಿಸಿ ಕಳುಹಿಸಿದ ಘಟನೆ ಕೂಡ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಬಹಿಷ್ಕಾರ ಹಾಕಿದವರ ವಿರುದ್ಧ ಪೊಲೀಸ್ ಹಾಗೂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರ ಹಾಕುವ ಮುನ್ನ ಜೋಕೆ!: ಹೊಸ ಕಾನೂನು ತರಲು ಮುಂದಾಗಿದೆ ರಾಜ್ಯ ಸರ್ಕಾರ
ಸಾಮಾಜಿಕ ಬಹಿಷ್ಕಾರದಿಂದ ಜೀವನೋಪಾಯ, ಸಂಬಂಧಗಳು ಮತ್ತು ಸಾಮಾಜಿಕ ಹಕ್ಕುಗಳು ಹಾನಿಗೊಳಗಾಗಿವೆ ಎಂದು ಬಹಿಷ್ಕೃತ ಕುಟುಂಬಗಳು ‘ಟಿವಿ9’ ಎದುರು ತಮ್ಮ ಅಳಲು ತೋಡಿಕೊಂಡಿವೆ. ತಕ್ಷಣ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.