ನೀನಾಸಂ ಸತೀಶ್ (Sathish Ninasam) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಈಗ ‘ದಿ ರೈಸ್ ಆಫ್ ಅಶೋಕ’ ಹೆಸರಿನ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಫೆಬ್ರವರಿ 27ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಜಾತಿ ತಾರತಮ್ಯದ ವಿರುದ್ಧ ಸಿಡಿದೇಳುವ ಅಶೋಕನಾಗಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ.
ಅಶೋಕ ಓರ್ವ ಬಡ ಕುಟುಂಬದ ಹಿನ್ನೆಲೆಯಿಂದ ಬಂದವನು. ಆತ ನಗರಕ್ಕೆ ಹೋಗಿ ಓದಿ ಮರಳಿ ಊರಿಗೆ ಬರುತ್ತಾನೆ. ಆತ ರೆವೆನ್ಯೂ ಡಿಪಾರ್ಟ್ಮೆಂಟ್ ಸೇರುವ ಪ್ರಯತ್ನ ಮಾಡುತ್ತಾನೆ. ಆಗ ಶುರುವಾಗುತ್ತೆ ಊರ ಪಾಳೇಗಾರನ ದಬ್ಬಾಳಿಕೆ. ಈ ವ್ಯವಸ್ಥೆಯ ವಿರುದ್ಧ ಅಶೋಕ ಸಿಡಿದೇಳುತ್ತಾನೆ. ಇದಿಷ್ಟು ವಿಷಯ ಟ್ರೇಲರ್ನಲ್ಲಿ ತೋರಿಸಲಾಗಿದೆ.
ಸತೀಶ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಒಂದಷ್ಟು ಗೆಳೆಯರನ್ನು ಸಂಪಾದಿಸಿದ್ದಾರೆ. ಅವರೆಲ್ಲರೂ ಆಗಮಿಸಿ, ‘ದಿ ರೈಸ್ ಆಫ್ ಅಶೋಕ’ ಟ್ರೇಲರ್ ಲಾಂಚ್ ಈವೆಂಟ್ಗೆ ಸಾತ್ ಕೊಟ್ಟರು. ರವಿಚಂದ್ರನ್, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್ ಮೊದಲಾದವರು ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಇದ್ದರು.
ಇದನ್ನೂ ಓದಿ: ನನಗಿಂತ ಸಪ್ತಮಿ ಪಾತ್ರಕ್ಕೆ ಒಳ್ಳೆಯ ಡೈಲಾಗ್ ಇದೆ ಎಂದ ನೀನಾಸಂ ಸತೀಶ್
ಟ್ರೇಲರ್ ನೋಡಿದವರಿಗೆ ನಿರೀಕ್ಷೆ ಮೂಡಿದೆ. ‘ಇದು ರೈಸ್ ಆಫ್ ಅಶೋಕ ಅಲ್ಲ, ರೈಸ್ ಆಫ್ ಸತೀಶ ಆಗಲಿ, ಆಗುತ್ತೆ’ ಎಂದು ಬಂದ ಸೆಲೆಬ್ರಿಟಿಗಳು ಹಾರೈಸಿದರು. ಸಪ್ತಮಿ ಗೌಡ, ಸಂಪತ್, ರವಿಶಂಕರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವಿನೋದ್ ದೊಂಡಾಲೆ ನಿರ್ದೇಶನ ಮಾಡಿದ್ದಾರೆ. ಅವರು ನಿಧನ ಹೊಂದಿದ ಬಳಿಕ ಸತೀಶ್ ಅವರು ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋದರು. ಸತೀಶ್ ಕೂಡ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಈಗ ಎಲ್ಲಾ ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್ ಹಂತ ತಲುಪಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.